ಕೈಕೊಟ್ಟ ಪಕ್ಷೇತರ ಶಾಸಕರು! ದೊಡ್ಡಗೌಡರು ಹೇಳಿದ್ದೇನು?
Recommended Video
ಬೆಂಗಳೂರು, ಜನವರಿ 16: "ಈ ವದಂತಿಗಳೆಲ್ಲ ಮಾಧ್ಯಮ ಸೃಷ್ಟಿಯಷ್ಟೆ. ಅಸಲಿಗೆ ಆತಂಕ ಪಡುವಂಥದ್ದು ಏನೂ ಇಲ್ಲ" ಎಂದು ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಈಗಾಗಲೇ ದಿಗಿಲು ಆರಂಭವಾಗಿದೆ. ಎಲ್ಲವೂ ಸರಿ ಇದೆ ಎಂದು ಮೇಲ್ನೋಟಕ್ಕೆ ನಾಯಕರು ಹೇಳಿಕೊಂಡು ಬರುತ್ತಿದ್ದರೂ, ಒಳಗೊಳಗೇ ತಳಮಳವಿರುವುದು ಸುಳ್ಳಲ್ಲ.
ರಾಜ್ಯದಲ್ಲೇ ಇರುವ 4 ಬಿಜೆಪಿ ಶಾಸಕರು, ತುರ್ತು ದೆಹಲಿಗೆ ಬುಲಾವ್
ಪಕ್ಷೇತರರಾದ ಮುಳಬಾಗಿಲು ಶಾಸಕ ಎಚ್ ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರು ಬೆಂಬಲ ವಾಪಸ್ ಪಡೆದ ಮೇಲೆ ನಡೆದ ಕೆಲ ಬೆಳವಣಿಗೆಗಳು ನಾಯಕರ ನಿದ್ದೆ ಕೆಡಿಸಿವೆ.
ಅವರಿಬ್ಬರು ಬೆಂಬಲ ವಾಪಸ್ ಪಡೆದಿದ್ದರಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲವಾದರೂ, ಮತ್ತಷ್ಟು ಜನ ಬಂಡಾಯ ಏಳಬಹುದಾದ ಸಾಧ್ಯತೆಗಳು ಹೆಚ್ಚಿರುವುದು ಸರ್ಕಾರಕ್ಕೆ ಆತಂಕವನ್ನುಂಟು ಮಾಡಿದೆ.
ದೇವೇಗೌಡರ ಪ್ರತಿಕ್ರಿಯೆ ಏನು?
ಬೆಂಬಲ ವಾಪಸ್ ಪಡೆದ ಶಾಸಕರಿಬ್ಬರೂ ಪಕ್ಷೇತರರು. ಅವರು ಯಾವ ಪಕ್ಷಕ್ಕೂ ಸಂಬಂಧಪಟ್ಟವರಲ್ಲ. ಇದನ್ನು ಮಾಧ್ಯಮಗಳು ಸೆನ್ಸೇಶನಲ್ ಮಾಡುತ್ತಿವೆಯಷ್ಟೆ. ಅದರ ಅಗತ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೇಳಿದ್ದಾರೆ.
|
ಭ್ರಮೆಯಲ್ಲಿದೆ ಬಿಜೆಪಿ
ರಾಜ್ಯದ 156 ತಾಲ್ಲೂಕುಗಳು ಬರಪೀಡಿತವಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿಯು ತನ್ನ ಶಾಸಕರನ್ನು ಒಂದು ವಾರದಿಂದ ಉತ್ತರಭಾರತಕ್ಕೆ ಕಳುಹಿಸಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದೆ. ಸರ್ಕಾರ ಬೀಳಿಸುತ್ತೇವೆ ಎನ್ನುವ ಭ್ರಮೆಯಲ್ಲಿರುವ ಬಿಜೆಪಿಯಿಂದ ಬರ ಪೀಡಿತ ಕ್ಷೇತ್ರದ ಜನತೆಗೆ ಅನ್ಯಾಯವಾಗುತ್ತಿದೆ.ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೌಡರು ಟ್ವೀಟ್ ಮಾಡಿದ್ದರು.
ಬೆಂಬಲ ವಾಪಸ್ ಪಡೆದ ಇಬ್ಬರು ಶಾಸಕರು ಹೇಳಿದ್ದೇನು?
|
ಮಾಧ್ಯಮದ ಸುದ್ದಿ ಸತ್ಯಕ್ಕೆ ದೂರ
ಜೆಡಿಎಸ್ ಶಾಸಕರ ಸಭೆ ಕರೆಯಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ರಾಜ್ಯದ ಬಹುತೇಕ ತಾಲ್ಲೂಕುಗಳು ಬರ ಪೀಡಿತವಾಗಿದ್ದು ಈ ಸಂದರ್ಭದಲ್ಲಿ ಶಾಸಕರು ಕ್ಷೇತ್ರದಲ್ಲೇ ಇದ್ದು ಬರ ಪರಿಹಾರ ಕಾರ್ಯದಲ್ಲಿ ತೊಡಗುವಂತೆ ಸೂಚನೆ ನೀಡಿರುತ್ತೇನೆ ಎಂದು ಟ್ವೀಟ್ ಮೂಲಕ ಸೇವೇಗೌಡರು ಸ್ಪಷ್ಟನೆ ನೀಡಿದ್ದರು.
ಬೆಂಬಲ ವಾಪಸ್ ಪಡೆದಿದ್ದೇಕೆ?
ರಾಣೆಬೆನ್ನೂರಿನ ಶಾಸಕ ಆರ್. ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್ ನಾಗೇಶ್ ಅವರು ತಾವು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಿದ್ದಾರೆ. ಆರ್. ಶಂಕರ್ ಅವರು ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದರೆ, ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಚ್. ನಾಗೇಶ್ ಅವರು ಕಾಂಗ್ರೆಸ್ ಬೆಂಬಲದಿಂದಲೇ ಗೆದ್ದಿದ್ದರು. ಸಮ್ಮಿಶ್ರ ಸರ್ಕಾರ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ. ಸರ್ಕಾರದಲ್ಲಿ ಅನ್ಯೋನ್ಯತೆಯಿಲ್ಲ ಎಂದು ಶಾಸಕರು ದೂರಿದ್ದರು.