ರಾಜ್ಯದಲ್ಲೇ ಇರುವ 4 ಬಿಜೆಪಿ ಶಾಸಕರು, ತುರ್ತು ದೆಹಲಿಗೆ ಬುಲಾವ್
ನವದೆಹಲಿ/ಬೆಂಗಳೂರು, ಜ 15: ಏನೇ ಕೆಲಸಗಳಿದ್ದರೂ, ಎಲ್ಲವನ್ನೂ ಬದಿಗೊತ್ತಿ ತುರ್ತಾಗಿ ದೆಹಲಿಗೆ ಬರುವಂತೆ, ಕರ್ನಾಟಕದಲ್ಲಿ ಉಳಿದಿರುವ ನಾಲ್ವರು ತಮ್ಮ ಪಕ್ಷದ ಶಾಸಕರಿಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೂಚಿಸಿದ್ದಾರೆ.
ಪಕ್ಷದ ಎಲ್ಲಾ 104 ಶಾಸಕರು ಯಡಿಯೂರಪ್ಪನವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದರು. ಆದರೆ, ವೈಯಕ್ತಿಕ ಕಾರಣಗಳನ್ನು ನೀಡಿ ನಾಲ್ವರು ಶಾಸಕರು ತಮ್ಮ ಸ್ವಂತ ಊರಿಗೆ ವಾಪಸ್ ಬಂದಿದ್ದರು.
ಕರ್ನಾಟಕದ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ಆಗುತ್ತಿರುವ ಹಿನ್ನಲೆಯಲ್ಲಿ, ನಾಲ್ವರು ಶಾಸಕರನ್ನು ಜೆಡಿಎಸ್-ಕಾಂಗ್ರೆಸ್ ನವರು ಸಂಪರ್ಕಿಸುವ ಸಾಧ್ಯತೆಯಿರುವುದರಿಂದ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿಲ್ಲದ ಯಡಿಯೂರಪ್ಪ ಮತ್ತು ಅಮಿತ್ ಶಾ, ರಾಷ್ಟ್ರ ರಾಜಧಾನಿಗೆ ಬರಬೇಕೆಂದು ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಹಾನಗಲ್ (ಹಾವೇರಿ) ಶಾಸಕ ಸಿ.ಎಂ. ಉದಾಸಿ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ರವೀಂದ್ರನಾಥ್, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮತ್ತು ಧಾರವಾಡ ಗ್ರಾಮೀಣ ಶಾಸಕ ಅಮೃತ್ ಅಯಪ್ಪ ದೇಸಾಯಿ ದೆಹಲಿಯಿಂದ ತಮ್ಮ ಕ್ಷೇತ್ರಕ್ಕೆ ತೆರಳಿದ್ದರು.
ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ವಾಪಸ್ ಪಡೆದಿದ್ದು, ಇಬ್ಬರೂ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿರುವುದರಿಂದ, ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ.












Click it and Unblock the Notifications