ಅನುಮಾನ ಮೂಡಿಸಿದೆ 'ಕೈ' ಶಾಸಕ ಗುತ್ತೇದಾರ್ ಹೊಸ ನಡೆ
ಕಲಬುರಗಿ, ಫೆಬ್ರವರಿ 28: ಎರಡೆರಡು ಬಾರಿ ಕಾಂಗ್ರೆಸ್ಗೆ ಕೈ ಕೊಡಲು ಮುಂದಾಗಿ ನಂತರ ಹಿರಿಯರ ಸಂಧಾನದ ಫಲವಾಗಿ ಪಕ್ಷದಲ್ಲೇ ಉಳಿದುಕೊಂಡಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರ ಹೊಸ ನಡೆ ಕಾಂಗ್ರೆಸ್ಗೆ ಕೈ ಕೊಡುವ ಮುನ್ಸೂಚನೆಯಾ ಎಂಬ ಅನುಮಾನ ಮೂಡಿಸಿದೆ.
ಮಾಲೀಕಯ್ಯ ಗುತ್ತೇದಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಅಪ್ಜಲ್ಪುರಕ್ಕೆ ಸ್ವಾಗತ ಕೊರಿ ಹಾಕಿರುವ ದೊಡ್ಡ ಫ್ಲೆಕ್ಸ್ಗಳು ಈ ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜೀನಾಮೆಗೆ ಮುಂದಾದ ಶಾಸಕ ಮಾಲೀಕಯ್ಯ ಗುತ್ತೇದಾರ್
ಈ ಹಿಂದೆ ಬಹಿರಂಗವಾಗಿಯೇ ಕಾಂಗ್ರೆಸ್ ಬಿಡುವ ಮಾತನ್ನಾಡಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ಈಗ ಜೆಡಿಎಸ್ ವರಿಷ್ಠರ ಪ್ಲೆಕ್ಸ್ ಹಾಕಿಸಿ ಅವರ ಜೊತೆ ಗುರುತಿಸಿಕೊಳ್ಳುವ ತರಾತುರಿ ತೋರಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.
ಪಟ್ಟಣದ ಹಲವೆಡೆ ದೇವೇಗೌಡರು ಹಾಗೂ ಗುತ್ತೇದಾರ್ ಅವರ ಭಾವಚಿತ್ರಗಳುಳ್ಳ ಫ್ಲೆಕ್ಸ್ಗಳನ್ನು ಹಾಕಲಾಗಿದ್ದು ಫ್ಲೆಕ್ಸ್ನಲ್ಲಿ '22 ವರ್ಷಗಳ ನಂತರ ನಗರಕ್ಕೆ ಆಗಮಿಸುತ್ತಿರುವ ಮಣ್ಣಿನ ಮಗ, ರಾಜ್ಯದ ಏಕೈಕ ಪ್ರಧಾನಿ, ಮುತ್ಸದಿ ರಾಜಕಾರಣಿ, ರೈತರ ಕಣ್ಮಣಿ, ಏತ ನೀರಾವರಿಗೆ ಅನುದಾನ ನೀಡಿದ್ದ ದೇವೇಗೌಡರಿಗೆ ಮಾಲೀಕಯ್ಯ ಗುತ್ತೇದಾರ್ ಮತ್ತು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಂದ ಸ್ವಾಗತ' ಎಂದು ಬರೆಯಲಾಗಿದೆ.
ಕಳೆದ ಬಾರಿ ಅಪ್ಜಲ್ಪುರಕ್ಕೆ ಸಿದ್ದರಾಮಯ್ಯ ಅವರು ಬಂದಾಗ 'ಕಾಂಗ್ರೆಸ್ ಬಿಡುವ ಚಿಂತನೆಯಲ್ಲಿದ್ದೆ ಆದರೆ ಸಿದ್ದರಾಮಯ್ಯ ಅವರು ತಡೆದಿದ್ದಾರೆ' ಎಂದಿದ್ದರು. ಈಗಿನ ಬೆಳವಣಿಗೆ ನೋಡಿದರೆ ಸಿದ್ದರಾಮಯ್ಯ ಅವರಿಗಿಂತಲೂ ಗುತ್ತೇದಾರ್ ಅವರಿಗೆ ದೇವೇಗೌಡ ಅವರ ಸಖ್ಯದ ಬಗ್ಗೆಯೇ ಮನಸ್ಸಿದ್ದಂತಿದೆ.
ಆದರೆ ಊಹಾಪೋಹಗಳನ್ನು ಅಲ್ಲಗಳೆದಿರುವ ಮಾಲೀಕಯ್ಯ ಗುತ್ತೇದಾರ್ ಅವರು 'ದೇವೇಗೌಡ ಅವರು ಹಿರಿಯರು. ಅವರು ಅಧಿಕಾರದಲ್ಲಿ ಇದ್ದಾಗ ಭೀಮಾ ಏತನೀರಾವರಿ ಯೋಜನೆಗೆ ಅನುದಾನ ನೀಡಿದ್ದರು. ಅವರಿಗೆ ಗೌರವ ನೀಡಲು ಫ್ಲೆಕ್ಸ್ ಹಾಕಿಸಿದ್ದೇನೆ. ಇದರಲ್ಲಿ ರಾಜಕೀಯ ಇಲ್ಲ' ಎಂದಿದ್ದಾರೆ.
ಆದರೆ ಕ್ಷೇತ್ರದಲ್ಲಿ ಕೇಳುತ್ತಿರುವ ಗುಸು-ಗುಸು ಪ್ರಕಾರ ಗುತ್ತೇದಾರ್ ಅವರನ್ನು ಜೆಡಿಎಸ್ ಸದಸ್ಯರು ಸಂಧಿಸಿದ್ದು, ಮಾತುಕತೆ ಪ್ರಗತಿಯಲ್ಲಿದೆ ಎನ್ನಲಾಗಿದೆ.
ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ