ಮ್ಯಾನ್ಮಾರ್ ಅಕ್ಷರಶಃ ನರಕ; 38 ಜನರನ್ನು ಕೊಂದ ಮ್ಯಾನ್ಮಾರ್ ಸೇನೆ!
ಸೇನಾ ದಂಗೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ 38 ಜನರನ್ನು ಮ್ಯಾನ್ಮಾರ್ ಮಿಲಿಟರಿ ಕೊಂದು ಹಾಕಿದೆ. ಮ್ಯಾನ್ಮಾರ್ನ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಫೆಬ್ರವರಿ 1ರಂದು ಮ್ಯಾನ್ಮಾರ್ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿತ್ತು. ಬಳಿಕ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿತ್ತು.
ಹೀಗೆ ದೇಶ ಸೇನೆ ಹಿಡಿತಕ್ಕೆ ಹೋದ ನಂತರ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದ್ದು, ಸೇನೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಜನ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಕೂಡ, ಸೇನಾಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿ ಕದಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ 38 ಜನರನ್ನು ಗುಂಡು ಹಾರಿಸಿ ಕೊಂದು ಹಾಕಿದೆ ಮ್ಯಾನ್ಮಾರ್ ಮಿಲಿಟರಿ.
ಸೇನೆ ಗುಂಡಿಗೆ 18 ಜನರು ಬಲಿ, ಕಾದ ಕಬ್ಬಿಣವಾದ ಮ್ಯಾನ್ಮಾರ್!
ಹತ್ಯೆಯಾದವರ ಪೈಕಿ ಮಹಿಳೆಯರು, ಮಕ್ಕಳು ಕೂಡ ಸೇರಿದ್ದು, ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೆ ಧಗಧಗಿಸುತ್ತಿದೆ. ಸೇನೆ ವಿರುದ್ಧ ಮ್ಯಾನ್ಮಾರ್ನ ಪ್ರಜೆಗಳು ಬೀದಿಗೆ ಇಳಿಯುವಂತೆ ಈ ಘಟನೆ ಮತ್ತೊಮ್ಮೆ ಪ್ರೇರೇಪಿಸಿದೆ.
3ನೇ ಮಹಾಯುದ್ಧಕ್ಕೆ ಪ್ರೇರೇಪಣೆ..?
ಈಗಾಗಲೇ ಜಗತ್ತು ಇಬ್ಭಾಗವಾಗಿ ಹೋಗಿದೆ. ಒಂದು ಕಡೆ ಪ್ರಜಾಪ್ರಭುತ್ವದ ಹೆಸರಲ್ಲಿ ದೈತ್ಯ ಶ್ರೀಮಂತ ರಾಷ್ಟ್ರ ಬಣ ಒಗ್ಗೂಡಿದೆ. ಇನ್ನೊಂದು ಕಡೆ ಚೀನಾ ಸಾರಥ್ಯದಲ್ಲಿ ಮತ್ತೊಂದು ಬಣ ಎಲ್ಲಾ ಪರಿಸ್ಥಿತಿಗೂ ಸಿದ್ಧವಾಗಿದೆ. ಆದರೆ ಇದೇ ಹೊತ್ತಲ್ಲಿ ಬೆಂಕಿಗೆ ತುಪ್ಪ ಸುರಿಯುವಂತೆ ಮ್ಯಾನ್ಮಾರ್ನಲ್ಲಿ ಸೇನೆ ದಂಗೆ ಎದ್ದಿದೆ. ಇದರ ಹಿಂದೆ ಚೀನಾ ಕೈವಾಡ ಇದೆ ಅಂತಾ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಹಾಗೂ ಚಿಂತಕರು ಆರೋಪ ಮಾಡುತ್ತಿದ್ದಾರೆ. ಇದೀಗ ಮ್ಯಾನ್ಮಾರ್ ಸೇನೆ 38 ಜನರನ್ನು ಕೊಂದು ಹಾಕಿದೆ. ಕೆಲ ದಿನಗಳ ಹಿಂದೆ 18 ಜನರನ್ನು ಹತ್ಯೆಗೈದು ಅಟ್ಟಹಾಸ ಮೆರೆದಿತ್ತು. ಘಟನೆಯನ್ನ ಅಮೆರಿಕ ಸೇರಿದಂತೆ ವಿಶ್ವದ ಬಲಾಢ್ಯ ರಾಷ್ಟ್ರಗಳು ಖಂಡಿಸಿದ್ದು, ಮುಂದೆ ಇದು 3ನೇ ಮಹಾಯುದ್ಧದ ತಿರುವು ಪಡೆಯಬಹುದಾ ಎಂಬ ಆತಂಕ ಮನೆಮಾಡಿದೆ.
ವಿಶ್ವ ಸಂಸ್ಥೆಯಿಂದ ಖಂಡನೆ
ಸೇನಾ ದಂಗೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ 38 ಜನರನ್ನು ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ವಿಶ್ವ ಸಂಸ್ಥೆ ರೊಚ್ಚಿಗೆದ್ದಿದೆ. ಕೆಲದಿನಗಳ ಹಿಂದೆ ಇದೇ ರೀತಿ 18 ಜನರನ್ನ ಹತ್ಯೆ ಮಾಡಿತ್ತು ಮ್ಯಾನ್ಮಾರ್ ಮಿಲಿಟರಿ. ಈ ಘಟನೆ ಮಾಸುವ ಮೊದಲೇ ಮತ್ತೊಮ್ಮೆ ಹೋರಾಟಗಾರರ ಹತ್ಯೆಗೈದಿರುವುದು ಇಡೀ ಜಗತ್ತನ್ನ ಬಡಿದೆಬ್ಬಿಸಿದೆ. ವಿಶ್ವಸಂಸ್ಥೆ ಕೂಡ ಮ್ಯಾನ್ಮಾರ್ ಸೇನಾಧಿಕಾರಿಗಳ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವುದು ದೊಡ್ಡ ಘರ್ಷಣೆಯ ಮುನ್ಸೂಚನೆ ನೀಡಿದೆ. ಆದರೆ ವಿಶ್ವ ಸಂಸ್ಥೆಯ ಎಚ್ಚರಿಕೆ ಹಾಗೂ ಹೇಳಿಕೆ ಬಗ್ಗೆ ಈವರೆಗೂ ಮ್ಯಾನ್ಮಾರ್ ಸೇನೆ ಪ್ರತಿಕ್ರಿಯೆ ನೀಡಿಲ್ಲ.
ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಚೀನಾ ಕೈವಾಡ ಸಾಧ್ಯವೇ ಇಲ್ಲ..!
ಮ್ಯಾನ್ಮಾರ್ ಸೇನಾ ದಂಗೆ ಸ್ವಯಂಪ್ರೇರಿತವಾಗಿದ್ದು, ಯಾರದ್ದೇ ಕೈವಾಡ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಸದ್ಯದ ಸ್ಥಿತಿಯಲ್ಲಿ ಚೀನಾ ಮ್ಯಾನ್ಮಾರ್ ವಿಚಾರವಾಗಿ ಮೂಗು ತೂರಿಸಲು ಸಾಧ್ಯವಿಲ್ಲ. ಈಗಾಗಲೇ ಚೀನಾ ವಿರುದ್ಧ ಅಕ್ಕಪಕ್ಕದ ರಾಷ್ಟ್ರಗಳು ಕೋಪಗೊಂಡಿವೆ. ಇಂತಹ ಸಂದರ್ಭದಲ್ಲಿ ಚೀನಾ ಮ್ಯಾನ್ಮಾರ್ ವಿಚಾರಕ್ಕೆ ಕೈಹಾಕುವ ಸಾಹಸ ಮಾಡುವುದಿಲ್ಲ ಎನ್ನುತ್ತಿದ್ದಾರೆ ತಜ್ಞರು. ಇದು ಆತಂರಿಕವಾಗಿ ಮೂಡಿದ ಅಸಮಾಧಾನದ ಫಲ. ಆದರೆ ಮ್ಯಾನ್ಮಾರ್ ಪ್ರಜೆಗಳಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ. ತನ್ನ ಬಗ್ಗೆ ಇಷ್ಟೆಲ್ಲಾ ಆರೋಪ ಕೇಳಿಬರುತ್ತಿದ್ದರೂ ಚೀನಾ ಮಾತ್ರ ಪ್ರತಿಕ್ರಿಯೆ ನೀಡಿಲ್ಲ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.