ರಾಯ್ಬರೇಲಿಯಲ್ಲಿ ಹಳಿ ತಪ್ಪಿದ ರೈಲು : ಸತ್ತವರ ಸಂಖ್ಯೆ 7ಕ್ಕೆ ಏರಿಕೆ
ರಾಯ್ಬರೇಲಿ, ಅಕ್ಟೋಬರ್ 10 : ರಾಯ್ ಬರೇಲಿಯಲ್ಲಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದರಿಂದ ಸಂಭವಿಸಿದ ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 7ಕ್ಕೆ ಏರಿದ್ದು, 21 ಜನರು ಗಾಯಗೊಂಡಿದ್ದಾರೆ.
ಒಟ್ಟು 9 ಬೋಗಿಗಳು ಹಳಿ ತಪ್ಪಿದ್ದವು. ಗಾಯಗೊಂಡವರನ್ನು ರಾಯ್ ಬರೇಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ವಿಶೇಷ ರೈಲಿನ ಮೂಲಕ ಅವರನ್ನು ಕರೆದೊಯ್ಯಲಾಗುತ್ತಿದೆ.
ಅಪಘಾತ ನಡೆದ ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಲು ಡ್ರೋಣ್ ಮತ್ತು ದೂರ ವ್ಯಾಪ್ತಿಯ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೀಡುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೊಯೆಲ್ ಸಹ ಘೋಷಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ.ಪರಿಹಾರ ಘೋಷಿಸಿದ್ದಾರೆ.
"ರೈಲು ಅಪಘಾತದ ಸುದ್ದಿ ಕೇಳಿ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗನೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಉತ್ತರ ಪ್ರದೇಶ ಸರ್ಕಾರ, ರೈಲ್ವೇ ಇಲಾಖೆ ಮತ್ತು ಎನ್ ಡಿಆರ್ ಎಫ್ ಸಿಬ್ಬಂದಿ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
***
ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ರೈಲೊಂದು ಹಳಿ ತಪ್ಪಿದ ಪರಿಣಾಮ 7 ಮಂದಿ ಮೃತರಾಗಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಇಲ್ಲಿನ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ರೈಲಿನ ಆರು ಬೋಗಿಗಳು 50 ಮೀ ಗಳಷ್ಟು ಹಳಿತಪ್ಪಿತ್ತು. ಇಂದು ಬೆಳಗ್ಗಿನ ಜಾವ ನಡೆದ ಈ ಘಟನೆಯಲ್ಲಿ 7 ಮಂದಿ ಮೃತರಾಗಿದ್ದರು.
ಬೆಳಿಗ್ಗೆ 5 ಗಂಟೆಯ ಸಮಯದಲ್ಲಿ ಹರ್ಚಂದ್ ಪುರ ಸ್ಟೇಶನ್ ಬಳಿ ರೈಲು ಹಳಿತಪ್ಪಿತ್ತು. ಲಕ್ನೋ ಮತ್ತು ವಾರಣಾಸಿಯ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದು, ಬಿರುಸಿನ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತಾಪ ಸೂಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ನೆರವನ್ನೂ ನೀಡುವಂತೆ ಆದೇಶಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರ ನೀಡುವಂತೆಯೂ ಕೇಳಿದ್ದಾರೆ.