ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ನವದೆಹಲಿ, ಡಿಸೆಂಬರ್ 28 : ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿರುವ ತ್ರಿವಳಿ ತಲಾಖ್ ಅನ್ನು ಸರ್ವೋಚ್ಚ ನ್ಯಾಯಾಲಯ ಕಾನೂನು ವಿರೋಧಿ, ಸಂವಿಧಾನ ವಿರೋಧಿ, ಅಸಿಂಧು ಎಂದು ತೀರ್ಪು ನೀಡಿದ್ದರೂ ಮುಸ್ಲಿಂ ಸಮಾಜದಲ್ಲಿ 'ವಿಚ್ಛೇದನ'ದ ಶಿಕಾರಿಗಳಾಗುತ್ತಿದ್ದಾರೆ.
ತ್ರಿವಳಿ ತಲಾಖ್ ಮಸೂದೆ ಮಂಡನೆ : ಬಿಸಿ-ಬಿಸಿ ಚರ್ಚೆ
ಕಳೆದ ಆಗಸ್ಟ್ ನಲ್ಲಿ ಸರ್ವೋಚ್ಚ ನ್ಯಾಯಾಲಯ 3:2ರ ಅನುಪಾತದಲ್ಲಿ ಐತಿಹಾಸಿಕ ತೀರ್ಪನ್ನು ನೀಡಿತ್ತಾದರೂ, ಮುಸ್ಲಿಂ ಮಹಿಳೆಯರನ್ನು ಈ ಅನಾಗರಿಕ ತ್ರಿವಳಿ ವಿಚ್ಛೇದನದಿಂದ ರಕ್ಷಿಸಲು ಸೂಕ್ತ ಕಾನೂನು ತರಬೇಕು ಎಂದೂ ಆದೇಶಿಸಿತ್ತು. ಈ ಕಾರಣಕ್ಕಾಗಿ ಮುಸ್ಲಿಂ ಮಹಿಳೆ (ವಿಚ್ಛೇದನದಿಂದ ರಕ್ಷಣೆಯ ಹಕ್ಕು) ಕಾಯ್ದೆ 2017 ಅನ್ನು ಮಂಡಿಸುತ್ತಿದೆ.
ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?
ದೌರ್ಜನ್ಯಕ್ಕೊಳಗಾದ ಮುಸ್ಲಿಂ ಮಹಿಳೆಯರು ಈ ಕಾನೂನನ್ನು ಸ್ವಾಗತಿಸುತ್ತಿದ್ದರೆ, ಈ ಮಸೂದೆ ಮುಸ್ಲಿಂ ಮಹಿಳೆಯರಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ, ಇದರಿಂದ ಅವರಿಗೆ ಅನ್ಯಾಯವಾಗುವುದೇ ಜಾಸ್ತಿ ಎಂದು ಕಾಂಗ್ರೆಸ್ ಅಡ್ಡಗಾಲು ಹಾಕಿದೆ. ಈ ಕಾನೂನಿಗೆ ಮಾನ್ಯತೆ ನೀಡವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದ್ದರೂ ವಿಚ್ಛೇದನದ ಪ್ರಮಾಣ ಕಡಿಮೆಯಾಗಿಲ್ಲ.
ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ತೀರ್ಪಿನ 9 ಪ್ರಮುಖ ಅಂಶಗಳು
ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ಸರಕಾರ The Muslim Women (Protection of Rights on Divorce) Act 2017 ಅನ್ನು ಜಾರಿಗೆ ತರಲು ಉತ್ಸುಕತೆ ತೋರಿದೆ. ಇದನ್ನು ಮೋದಿ ಸರಕಾರ ಡಿಸೆಂಬರ್ 28ರಂದು ಮಂಡಿಸುತ್ತಿದ್ದು, ಇದಕ್ಕೆ ಓವೈಸಿ, ಕಾಂಗ್ರೆಸ್, ಸಮಾಜವಾದಿ ಪಕ್ಷಗಳು ಅಡ್ಡಗಾಲು ಹಾಕಿವೆ.
ತ್ರಿವಳಿ ತಲಾಖ್ ಅಸಿಂಧು, ಸುಪ್ರಿಂನಿಂದ ಮಹತ್ವದ ತೀರ್ಪು
ಈ ಮಸೂದೆಯಲ್ಲಿ ಏನಿದೆ?
ತ್ರಿವಳಿ ತಲಾಖ್ ಅಸಿಂಧು, ಕಾನೂನಿಗೆ ವಿರುದ್ಧ
ಮೌಖಿಕವಾಗಿಯಾಗಲಿ, ಲಿಖಿತ ರೂಪದಲ್ಲಾಗಲಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಮುಸ್ಲಿಂ ಗಂಡ ತನ್ನ ಹೆಂಡತಿಗೆ ತ್ರಿವಳಿ ತಲಾಖ್ ನೀಡುವುದು ಅಸಿಂಧು ಮತ್ತು ಕಾನೂನಿಗೆ ವಿರುದ್ಧವಾದದ್ದು.
ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ
ಮುಸ್ಲಿಂ ಮಹಿಳೆ (ವಿಚ್ಛೇದನದಿಂದ ರಕ್ಷಣೆಯ ಹಕ್ಕು) ಕಾಯ್ದೆಯನ್ನು ಉಲ್ಲಂಘಿಸಿ, ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ಹೆಂಡತಿಗೆ ತ್ರಿವಳಿ ತಲಾಖೆ ನೀಡಿದರೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.
ವಿಚ್ಛೇದಿತ ಮಹಿಳೆ, ಮಕ್ಕಳಿಗೆ ಜೀವನಾಂಶ
ವಿಚ್ಛೇದನಕ್ಕೆ ಒಳಗಾದ ಮಹಿಳೆ, ವಿಚ್ಛೇದನ ನೀಡಿದ ಗಂಡನಿಂದ, ತನ್ನ ಮತ್ತು ಅವಲಂಬಿತ ಮಕ್ಕಳ ದೈನಂದಿದ ಜೀವನ ನಿರ್ವಹಣೆಗಾಗಿ ಸೂಕ್ತ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.
ಅಮ್ಮನ ಸುಪರ್ದಿಗೆ ಅಪ್ರಾಪ್ತ ಮಕ್ಕಳು
ವಿಚ್ಛೇದನಕ್ಕೊಳಗಾದ ಮಹಿಳೆ ತನ್ನ ಅಪ್ರಾಪ್ತ ವಯಸ್ಕ ಮಕ್ಕಳ ಸುಪರ್ದಿಗೆ ಅರ್ಹಳಾಗಿರುತ್ತಾಳೆ. ಮಕ್ಕಳನ್ನು ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಸುಪರ್ದಿಗೆ ನೀಡುವ ಹಾಗಿಲ್ಲ. ಇದನ್ನು ಮ್ಯಾಜಿಸ್ಟ್ರೇಟ್ ಅವರು ನಿರ್ಧರಿಸುತ್ತಾರೆ.
ಜಾಮೀನು ರಹಿತ ಅಪರಾಧ
ಕ್ರಿಮಿನಲ್ ಪ್ರೊಸಿಜರ್ ಕೋಡ್ (ಅಪರಾಧ ಪ್ರಕ್ರಿಯಾ ಸಂಹಿತೆ) ಅಡಿಯಲ್ಲಿ, ಕಾನೂನನ್ನು ಉಲ್ಲಂಘಿಸಿ ಯಾವುದೇ ವ್ಯಕ್ತಿ ತಕ್ಷಣ ತ್ರಿವಳಿ ತಲಾಖ್ ನೀಡಿದ್ದಲ್ಲಿ, ಆ ಕ್ರಿಯೆಯನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಿಲ್ಲ
ಈ ಕಾನೂನು ಇಡೀ ಭಾರತಕ್ಕೆ ಅನ್ವಯವಾಗುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಅನ್ವಯವಾಗುವುದಿಲ್ಲ.