ತ್ರಿವಳಿ ತಲಾಖ್: ಪ್ರಧಾನಿ ಮೋದಿಗೆ ಓವೈಸಿ ಎಸೆದ ಗುರುತರ ಚಾಲೆಂಜ್
ಮುಂಬೈ, ಅ 16: ಮಹಾರಾಷ್ಟ್ರ ಅಸೆಂಬ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬುಧವಾರ, ಭಿವಂಡಿಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿಗೆ ಸವಾಲೊಂದನ್ನು ಎಸೆದರು.
"ತ್ರಿವಳಿ ತಲಾಖ್ ನಿಷೇಧ ಜಾರಿಗೆ ತಂದು ನೀವು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇನೆ ಎಂದು ಭಾವಿಸಿದರೆ, ಅದು ನಿಮ್ಮ ತಪ್ಪು ಕಲ್ಪನೆ" ಎಂದು ಓವೈಸಿ ಅಭಿಪ್ರಾಯ ಪಟ್ಟರು.
ಕ್ರಿಮಿನಲ್ ಕೇಸ್ ಇರುವ ಸಾವರ್ಕರ್ ಗೆ ಭಾರತ ರತ್ನ: 'ಗಾಡ್ ಸೇವ್ ದಿಸ್ ಕಂಟ್ರಿ'
"ಮುಸ್ಲಿಮರಿಗೆ ನೀವು ನಿಜವಾಗಿಯೂ ಒಳ್ಳೆಯದನ್ನು ಮಾಡಬೇಕೆಂದು ಬಯಸಿದರೆ, ನಿಮ್ಮಲ್ಲಿ ನನ್ನ ಮನವಿಯೊಂದು ಇದೆ" ಎಂದಿರುವ ಒವೈಸಿ, "ಮರಾಠಿಗರಿಗೆ ಮೀಸಲಾತಿ ನೀಡಿದ ನೀವು, ಮುಸ್ಲಿಮರಿಗೇಕೆ ಕೊಟ್ಟಿಲ್ಲ" ಎಂದು ಓವೈಸಿ ಹೇಳಿದರು.
"ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ನೀವು, ಮರಾಠಿಗರಿಗೆ ಕೊಟ್ಟ ಮೀಸಲಾತಿಯನ್ನು, ಮುಸ್ಲಿಮರಿಗೆ ಕೊಡಿ, ಆಗ ನಿಮ್ಮನ್ನು ಮೆಚ್ಚಿಕೊಳ್ಳುತ್ತೇನೆ" ಎನ್ನುವ ಸವಾಲನ್ನು ಓವೈಸಿ, ಮೋದಿಗೆ ಎಸೆದಿದ್ದಾರೆ.
"ವಿಕಾಸ ಕೇವಲ ಮರಾಠಿಗರಿಗೆ ಮಾತ್ರ, ಮುಸ್ಲಿಮರಿಗೆ ಇಲ್ಲ ಎನ್ನುವುದು ಇದ್ಯಾವ ನ್ಯಾಯ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಸಿಗುವ ಸೌಲಭ್ಯ, ಮುಸ್ಲಿಮರಿಗೂ ಸಿಗಬೇಕು. ಇದು ನಮ್ಮ ಹಕ್ಕು" ಎಂದು ಓವೈಸಿ ಹೇಳಿದರು.
"ಸಾವರ್ಕರ್, ಅತ್ಯಾಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬೇಕೆಂದು ಪ್ರತಿಪಾದಿಸಿದ್ದವರು. ಶಿವಾಜಿ ಮಹಾರಾಜ್ ಇದನ್ನು ಒಪ್ಪದಿದ್ದಾಗ, ಅವರ ವಿರುದ್ದವೇ ತಿರುಗಿಬಿದ್ದವರು. ಸ್ವತಃ ಬ್ರಿಟಿಷರ ಅತ್ಯಂತ ವಿಧೇಯ ಸೇವಕ ಎಂದು ಸಾವರ್ಕರ್ ತಮ್ಮನ್ನು ತಾವು ಕರೆದುಕೊಂಡಿದ್ದರು" ಎಂದು ಓವೈಸಿ, ಬಿಜೆಪಿ ವಿರುದ್ದ ಕಿಡಿಕಾರಿದ್ದರು.
ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಗೆ ಮರಣೋತ್ತರ 'ಭಾರತ ರತ್ನ' ನೀಡುವುದಾಗಿ ಬಿಜೆಪಿ, ತನ್ನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು.