NCERT 6ನೇ ತರಗತಿ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಪುರಾಣ ಹೇರಿಕೆ, ಆಹಾರ ತಾರತಮ್ಯದ ಆರೋಪ!
ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ ಇ ) ಅಧೀನದಲ್ಲಿರುವ ಶಾಲೆಗಳಿಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ತಂದಿರುವ 6ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕವು ಈಗ ಭಾರಿ ವಿವಾದಕ್ಕೆ ಈಡಾಗಿದೆ. ಈ ಪಠ್ಯಪುಸ್ತಕದಲ್ಲಿ ಕೇವಲ ಪುರಾಣ ಕಥೆಗಳು, ಧಾರ್ಮಿಕ ಹಿನ್ನೆಲೆಯ ವಿಷಯಗಳು ಹಾಗೂ ದೇವರನ್ನು ಕೇಂದ್ರೀಕರಿಸಿದ ನಿರೂಪಣೆಗಳನ್ನು ಹಾಕಲಾಗಿದ್ದು, ಕರ್ನಾಟಕದ ಸ್ಥಳೀಯ ಸಂಸ್ಕೃತಿ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ರಾಜ್ಯದ ಶಿಕ್ಷಣ ತಜ್ಞರು ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಮೂಲಗಳ ಪ್ರಕಾರ, ಈ ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಡಲಾಗಿದ್ದು, ಇದಕ್ಕೆ ಶಿಕ್ಷಣ ತಜ್ಞರು ಮೊದಲ ಆಕ್ಷೇಪ ಎತ್ತಿದ್ದಾರೆ. ತೃತೀಯ ಭಾಷೆಯಾಗಿ ಕನ್ನಡವನ್ನು ಕಲಿಯುವ ಮಕ್ಕಳಿಗೆ ಭಾಷೆಯ ಮೂಲಭೂತ ಅರಿವು ಮೂಡಿಸುವ ಬದಲು, ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಭಾರತೀಯ ಜ್ಞಾನ ಪರಂಪರೆಯನ್ನು ಹೇರುವ ನೆಪದಲ್ಲಿ ಪಠ್ಯವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಆರೋಪಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕರ್ನಾಟಕದ ಅಸ್ಮಿತೆಯು ಪಂಪ, ಕುವೆಂಪು, ಶಿವರಾಮ ಕಾರಂತ ಹಾಗೂ ಬಸವಣ್ಣನವರ ಪ್ರಗತಿಪರ ಆಲೋಚನೆಗಳಲ್ಲಿದೆ. ಆದರೆ ಸ್ಥಳೀಯ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಬದಿಗಿಟ್ಟು, ಇಂತಹ ಧಾರ್ಮಿಕ ರಾಜಕೀಯವನ್ನು ಪಠ್ಯದಲ್ಲಿ ಸೇರಿಸಿರುವುದು ಖಂಡನೀಯ ಎಂದಿದ್ದಾರೆ.
'ಮೂಲಸೌಕರ್ಯ ಮತ್ತು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನ' ಸಂಘಟನೆಯು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿರಬೇಕಾದ ಪುಸ್ತಕಗಳನ್ನು ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರಗಳನ್ನಾಗಿ ಬಳಸುತ್ತಿರುವುದು ಆತಂಕಕಾರಿ ಎಂದು ಹೇಳಿದೆ. ಈ ಪಠ್ಯದಲ್ಲಿ ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ವಿಶಿಷ್ಟ ಜಾನಪದ, ಸಾಹಿತ್ಯ ಮತ್ತು ಜೀವನಪದ್ಧತಿಯನ್ನು ಬಿಂಬಿಸುವ ಯಾವುದೇ ಪಾಠಗಳಿಲ್ಲ. ಆರನೇ ತರಗತಿಯ ಮಗುವಿನ ವಯಸ್ಸು ಮತ್ತು ಕುತೂಹಲಕ್ಕೆ ತಕ್ಕಂತಹ ಚಿತ್ರಗಳು ಅಥವಾ ಚಟುವಟಿಕೆಗಳು ಇಲ್ಲದೆ, ಕೇವಲ ಬೋಧನಾತ್ಮಕ ಮತ್ತು ನೀರಸ ನಿರೂಪಣೆಗಳಿಂದ ಕೂಡಿದೆ ಎಂದು ಸಂಘಟನೆ ದೂರಿದೆ.
ಇದಲ್ಲದೆ, ಪಠ್ಯಪುಸ್ತಕದಲ್ಲಿರುವ 'ಆರೋಗ್ಯವೇ ಭಾಗ್ಯ' ಎಂಬ ಪಾಠದಲ್ಲಿ 'ಸಾತ್ವಿಕ್ ಆಹಾರ'ದ ಪರಿಕಲ್ಪನೆಯನ್ನು ಪರೋಕ್ಷವಾಗಿ ಹೇರಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಮತೋಲಿತ ಆಹಾರದ ಬಗ್ಗೆ ವಿವರಿಸುವ ಚಿತ್ರದಲ್ಲಿ ಕೇವಲ ರೊಟ್ಟಿ, ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಮಾತ್ರ ತೋರಿಸಲಾಗಿದ್ದು, ಮೊಟ್ಟೆ, ಮೀನು ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕರಾವಳಿಯ ಮಕ್ಕಳ ಮುಖ್ಯ ಆಹಾರವಾದ ಮೀನು ಸೇರಿದಂತೆ ಬಹುಸಂಖ್ಯಾತರು ಬಳಸುವ ಮಾಂಸಾಹಾರವನ್ನು ಹೊರಗಿಟ್ಟಿರುವುದು ಮಕ್ಕಳ ಆಹಾರ ಪದ್ಧತಿಯನ್ನು ರಾಜಕೀಯಗೊಳಿಸುವ ಮತ್ತು ಸಾಂಸ್ಕೃತಿಕ ಭಯೋತ್ಪಾದನೆ ನಡೆಸುವ ಪ್ರಯತ್ನವಾಗಿದೆ ಎಂದು ತಜ್ಞರು ಆಕ್ಷೇಪಿಸಿದ್ದಾರೆ.
ಶಿಕ್ಷಣ ತಜ್ಞರ ಪ್ರಮುಖ ಬೇಡಿಕೆಗಳು
ಕನ್ನಡ ಭಾಷಾ ಕಲಿಕಾ ಕಾಯ್ದೆ 2015ರ ಅನ್ವಯ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮೊದಲ ಅಥವಾ ಎರಡನೇ ಭಾಷೆಯಾಗಿ ಕಲಿಸಬೇಕು. ಸದ್ಯ ಬಳಕೆಯಲ್ಲಿರುವ 'ತಿಳಿ ಕನ್ನಡ' ಪಠ್ಯಪುಸ್ತಕವನ್ನೇ ತೃತೀಯ ಭಾಷೆಗೂ ಬಳಸಬೇಕು. ಈ ವಿವಾದಿತ ಪಠ್ಯವನ್ನು ತರಾತುರಿಯಲ್ಲಿ 9ನೇ ತರಗತಿಗೂ ವಿಸ್ತರಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಪುಸ್ತಕದ ಹೆಸರನ್ನು ಬದಲಾಯಿಸಿ, ಸಮತೋಲಿತ ಆಹಾರದ ಪಾಠದಲ್ಲಿ ಮೊಟ್ಟೆ ಮತ್ತು ಮಾಂಸಾಹಾರದ ಚಿತ್ರಗಳನ್ನು ಸೇರಿಸಿ ಮರುಮುದ್ರಣ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications