ವಿಜಯ್ ತರ ರಾಜಕೀಯಕ್ಕೆ ಬರ್ತೀನಿ ಎಂದ ಚೇತನ್ ಅಹಿಂಸಾ: ಸುಮ್ನಿರಿ ಎಂದ ನೆಟ್ಟಿಗರು
ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಕರ್ನಾಟಕದಲ್ಲಿ ರಾಜಕೀಯ ಪಕ್ಷ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ದೇಶದಲ್ಲಿ ಈಗ ಇರುವ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಂತ ಹಿತಾಸಕ್ತಿಯ ಕಾರಣಕ್ಕೆ ರಾಜಕೀಯ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿ ಸಂವಿಧಾನದ ಆಶಯವನ್ನೇ ಮರೆತಿವೆ ಎಂದು ಅವರು ಹೇಳಿದ್ದಾರೆ. 2028ನೇ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ. ಆದರೆ ಚೇತನ್ ಅಹಿಂಸಾ ಅವರು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ವಿಜಯ್ ದಳಪತಿ ಅವರು ರಾಜಕೀಯ ಪ್ರವೇಶ ಮಾಡಿದ ಎರಡೇ ವರ್ಷದಲ್ಲಿ ಅಧಿಕಾರಕ್ಕೆ ಬಂದಿದ್ದರು. ಇದಾದ ನಂತರ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಟರು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ಅಲ್ಲದೆ ನಟ ಉಪೇಂದ್ರ ಅವರು ಸಹ ಕರ್ನಾಟಕದಲ್ಲಿ ಪ್ರಜಾಕೀಯ ಎನ್ನುವ ರಾಜಕೀಯ ಪಕ್ಷವನ್ನು ಕಟ್ಟಿದ್ದು ವಿಜಯ್ ಗೆಲುವಿನ ನಂತರ ಉಪೇಂದ್ರ ಅವರ ಪಕ್ಷವು ಸಹ ಕರ್ನಾಟಕದಲ್ಲಿ ಈ ಮಾದರಿಯ ಯಶಸ್ಸು ಗಳಿಸಬಹುದೇ ಎನ್ನುವ ಚರ್ಚೆ ನಡೆದಿದೆ. ಈ ರೀತಿ ಇರುವಾಗಲೇ ವಿಜಯ್ ಅವರ ರೀತಿ ರಾಜಕೀಯಕ್ಕೆ ಬರ್ತೀನಿ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ. ಆದರೆ ಕೆಲವು ನೆಟ್ಟಿಗರು ಸುಮ್ನಿರಿ ಎಂದಿದ್ದಾರೆ.
ನಟ ಚೇತನ್ ಅಹಿಂಸಾ ಅವರು ಕರ್ನಾಟಕದಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿದ ನಂತರ ಹಲವು ಆಯಾಮಗಳಲ್ಲಿ ಚರ್ಚೆ ನಡೆದಿದೆ. ಆದರೆ ಹಲವರು ಚೇತನ್ ಅವರು ರಾಜಕೀಯ ಪಕ್ಷ ಪ್ರಾರಂಭಿಸುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ. 2028ಕ್ಕೆ ರಾಜಕೀಯ ಅಖಾಡಕ್ಕೆ ಬರುವುದಾಗಿಯೂ, 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿಯೂ ಹೇಳಿದ್ದಾರೆ.

'ದೇವರನ್ನು ಪ್ರಶ್ನಿಸಿ ತಿರಸ್ಕರಿಸಲು ಆಳವಾದ ಅರಿವು ಬೇಕು; ದೇವರನ್ನು ನಂಬುವುದು ಸುಲಭದ ವಿಷಯ.' - ತಂದೆ ಪೆರಿಯಾರ್. ಅದೇ ರೀತಿಯಾಗಿ,
ಕಾಂಗ್ರೆಸ್, ಬಿಜೆಪಿ, ಹಾಗೂ ಸುಮಾರು 3,000 ನೋಂದಾಯಿತ ರಾಜಕೀಯ ಪಕ್ಷಗಳನ್ನೆಲ್ಲ ವಿರೋಧಿಸಲು ಆಳವಾದ ರಾಜಕೀಯ ಅರಿವು ಬೇಕು; ಕೇವಲ ಬಿಜೆಪಿಯನ್ನು ವಿರೋಧಿಸುವುದು ಬಹಳ ಸುಲಭದ ವಿಷಯ. ನಮ್ಮ ಸಮ-ಸಮಾಜ ಸಮಾನತಾವಾದ (Equalitarianism) ಮಾತ್ರವೇ ಸತ್ಯ" ಎಂದೂ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಬರಹ ಹಂಚಿಕೊಂಡಿದ್ದಾರೆ.
ಚೇತನ್ ಅಹಿಂಸಾ ರಾಜಕೀಯಕ್ಕೆ ನೆಟ್ಟಿಗರು ಹೇಳಿದ್ದೇನು ?
ಚೇತನ್ ಅಹಿಂಸಾ ಅವರ ರಾಜಕೀಯ ಪಕ್ಷ ಸ್ಥಾಪನೆ, ರಾಜಕೀಯ ಪ್ರವೇಶದ ಬಗ್ಗೆ ನೆಟ್ಟಿಗರಿಂದ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ. ಚೇತನ್ ಅಹಿಂಸಾ ಅವರು ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ರಾಜಕೀಯ ಪಕ್ಷ ಪ್ರಾರಂಭಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಶೋಷಿತರು ಹಾಗೂ ಸೆಕ್ಯೂಲರ್ ಮತಗಳನ್ನು ಒಡೆಯಲು ಇನ್ನೆಷ್ಟು ಪಕ್ಷಗಳು ಹುಟ್ಟುಕೊಳ್ಳಲಿವೆಯೋ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಹಲವು ನೆಟ್ಟಿಗರು ಚೇತನ್ ಅವರಿಗೆ ಬೆಂಬಲ ಕೊಟ್ಟಿದ್ದಾರೆ. ತಮಿಳುನಾಡಿನ ವಿಜಯ್ ಮಾದರಿಯಲ್ಲಿ ನೀವೂ ಸಹ ಗೆಲುವು ಸಾಧಿಸುವುದಕ್ಕೆ ಸಾಧ್ಯವಿದೆ. ಮೊದಲ ಹಂತದಲ್ಲಿ ಕನಿಷ್ಠ 10 ವಿಧಾನಸಭಾ ಕ್ಷೇತ್ರಗಳಲ್ಲಾದರೂ ಯಶಸ್ಸು ಸಾಧಿಸಿ ಎಂದು ಹೇಳಿದ್ದಾರೆ.













Click it and Unblock the Notifications