ವಂದೇ ಭಾರತ್ ರೈಲಿನ ಬಾಗಿಲು ಮುಚ್ಚಿದ ಬಳಿಕ ಒಳಗೆ ಸಿಲುಕಿದರೆ ಏನು ಮಾಡಬೇಕು?
ಭಾರತೀಯ ರೈಲ್ವೆಯು ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಡಿಜಿಟಲ್ ಮತ್ತು ಮೂಲಸೌಕರ್ಯದ ಬದಲಾವಣೆಗಳನ್ನು ಕಂಡಿದೆ. ಕಲ್ಲಿದ್ದಲು ಎಂಜಿನ್ಗಳ ಕಾಲದಿಂದ ಇಂದಿನ ಅತ್ಯಾಧುನಿಕ ವಿದ್ಯುತ್ ಚಾಲಿತ ರೈಲುಗಳವರೆಗಿನ ಈ ಪಯಣದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸುಖಕರ ಪ್ರಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದೇ ಹೈಟೆಕ್ ವಿಷನ್ನೊಂದಿಗೆ ಭಾರತೀಯ ಹಳಿಗಳ ಮೇಲೆ ಪರಿಚಯಿಸಲಾದ ದೇಶದ ಅತ್ಯಂತ ಜನಪ್ರಿಯ ಮತ್ತು ಅತ್ಯಾಧುನಿಕ ರೈಲುಗಳಲ್ಲಿ 'ವಂದೇ ಭಾರತ್ ಎಕ್ಸ್ಪ್ರೆಸ್' ಪ್ರಮುಖ ಸ್ಥಾನ ಪಡೆದಿದೆ.
ವಂದೇ ಭಾರತ್ ರೈಲಿನ ವಿಶೇಷತೆಗಳಲ್ಲಿ ಒಂದು ಅದರ ಸ್ವಯಂಚಾಲಿತ ಬಾಗಿಲು ವ್ಯವಸ್ಥೆ. ರೈಲು ಹೊರಡುವ ಕೆಲವೇ ಕ್ಷಣಗಳ ಮೊದಲು ಬಾಗಿಲುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತವೆ. ಆದರೆ, ಯಾರನ್ನಾದರೂ ಅವರ ಸೀಟಿನವರೆಗೆ ಬಿಟ್ಟು ಬರಲು ಹೋಗಿ, ಬಾಗಿಲು ಮುಚ್ಚಿದ ಬಳಿಕ ನೀವೇ ರೈಲಿನೊಳಗೆ ಸಿಕ್ಕಿಬಿದ್ದರೆ ಏನು ಮಾಡಬೇಕು? ಗಾಬರಿಯಾಗದೆ ಸರಿಯಾದ ಕ್ರಮ ಅನುಸರಿಸುವುದು ಮುಖ್ಯ.

ಗಾಬರಿಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ರೈಲು ಚಲಿಸಲು ಆರಂಭಿಸಿದ ಬಳಿಕ ನೀವು ಇನ್ನೂ ಒಳಗೇ ಇದ್ದರೆ ಈ ಕೆಲಸಗಳನ್ನು ಮಾಡಬಾರದು.
ಆತಂಕದಿಂದ ತುರ್ತು ಸರಪಳಿ (Emergency Chain) ಎಳೆಯಬೇಡಿ. ಇದು ಕಾನೂನುಬಾಹಿರ ಕೃತ್ಯವಾಗಿದ್ದು, ದಂಡ ಅಥವಾ ಜೈಲು ಶಿಕ್ಷೆಗೆ ಕಾರಣವಾಗಬಹುದು.
ಬಾಗಿಲುಗಳನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಬೇಡಿ.
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿರುವ ಕಾರಣ, ನಿಮ್ಮನ್ನು ಅನಧಿಕೃತ ಪ್ರಯಾಣಿಕರೆಂದು ಪರಿಗಣಿಸುವ ಸಾಧ್ಯತೆ ಇರುತ್ತದೆ.
ಯಾವುದೇ ನೆರವಿಗಾಗಿ ಗಾಬರಿಪಡದೆ ರೈಲಿನ ಎಮರ್ಜೆನ್ಸಿ ಬಟನ್ ಬಳಸಿ ಸಹಾಯ ಪಡೆಯಿರಿ.
ವಂದೇ ಭಾರತ್ ರೈಲಿನಲ್ಲಿ ತುರ್ತು ಪರಿಸ್ಥಿತಿಗಾಗಿ ಎಮರ್ಜೆನ್ಸಿ ಟಾಕ್ಬ್ಯಾಕ್ ಬಟನ್ ವ್ಯವಸ್ಥೆ ಇರುತ್ತದೆ.
ಬಾಗಿಲು ಮುಚ್ಚಿದ ತಕ್ಷಣ ಈ ಬಟನ್ ಒತ್ತಿ ರೈಲಿನ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಬಹುದು.
ಈ ವ್ಯವಸ್ಥೆ ಮೂಲಕ ಲೊಕೊ ಪೈಲಟ್ ಹಾಗೂ ರೈಲು ಸಿಬ್ಬಂದಿಗೆ ಮಾಹಿತಿ ತಲುಪುತ್ತದೆ.
ರೈಲು ಇನ್ನೂ ನಿಲ್ದಾಣದಲ್ಲೇ ಇದ್ದರೆ, ಪರಿಸ್ಥಿತಿಯನ್ನು ಪರಿಶೀಲಿಸಿ ಬಾಗಿಲು ತೆರೆಯುವ ಸಾಧ್ಯತೆಯೂ ಇರಬಹುದು.
ಟಿಟಿಇಗೆ ಪರಿಸ್ಥಿತಿ ವಿವರಿಸಿ
ರೈಲು ಈಗಾಗಲೇ ಮುಂದಿನ ನಿಲ್ದಾಣದತ್ತ ಚಲಿಸುತ್ತಿದ್ದರೆ, ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಅವರನ್ನು ಸಂಪರ್ಕಿಸಿ.
ನೀವು ಹೇಗೆ ರೈಲಿನೊಳಗೆ ಸಿಕ್ಕಿಬಿದ್ದಿರಿ ಎಂಬುದನ್ನು ಮೊದಲು ಸ್ಪಷ್ಟವಾಗಿ ಅಧಿಕಾರಿಗಳಿಗೆ ತಿಳಿಸಬೇಕು. ನಿಯಮಗಳ ಪ್ರಕಾರ ಇದಕ್ಕೆ ದಂಡ ವಿಧಿಸುವ ಸಾಧ್ಯತೆಯೂ ಇರುತ್ತದೆ. ತನಿಖೆ ಮತ್ತು ದಂಡದ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಮುಂದಿನ ನಿಲ್ದಾಣದಲ್ಲಿ ಇಳಿಯಲು ನಿಮಗೆ ಅವಕಾಶ ಕಲ್ಪಿಸಲಾಗುತ್ತದೆ.
ಮೆಟ್ರೋ ರೈಲಿನಂತೆಯೇ ಶಿಸ್ತು ಅಗತ್ಯ
ಮೆಟ್ರೋ ರೈಲಿನಂತೆಯೇ ಶಿಸ್ತು ಅಗತ್ಯ ವಂದೇ ಭಾರತ್ ರೈಲಿನ ಸ್ವಯಂಚಾಲಿತ ಬಾಗಿಲು ವ್ಯವಸ್ಥೆ ಮೆಟ್ರೋ ರೈಲುಗಳ ಮಾದರಿಯಲ್ಲಿದೆ. ನಿಲ್ದಾಣದಲ್ಲಿ ಬಾಗಿಲು ಕೆಲವೇ ಕ್ಷಣ ತೆರೆದಿದ್ದು, ಬಳಿಕ ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ. ಆದರೆ ಮೆಟ್ರೋ ರೈಲಿನಂತೆ ಮುಂದಿನ ನಿಲ್ದಾಣ ಕೆಲವೇ ನಿಮಿಷಗಳಲ್ಲಿ ಬರುವುದಿಲ್ಲ. ವಂದೇ ಭಾರತ್ನಲ್ಲಿ ಟಿಕೆಟ್ ಇಲ್ಲದೆ ಸಿಕ್ಕಿಬಿದ್ದರೆ ದಂಡ ಮತ್ತು ಶಿಸ್ತು ಕ್ರಮ ಎದುರಿಸಬೇಕಾಗಬಹುದು.
ವಂದೇ ಭಾರತ್ ಮತ್ತು ಇತರ ರೈಲುಗಳಲ್ಲಿ ಪ್ರಯಾಣಿಸುವಾಗ ಈ ತಪ್ಪು ಮಾಡಬೇಡಿ!
ನಿಮ್ಮ ರೈಲು ಪ್ರಯಾಣ ಸುರಕ್ಷಿತವಾಗಿರಬೇಕೆಂದರೆ ಈ ಸಂಗತಿಗಳು ನೆನಪಿರಲಿ. ಮೊದಲನೆಯದಾಗಿ, ವಂದೇ ಭಾರತ್ನಂತಹ ಹೈಟೆಕ್ ರೈಲುಗಳಲ್ಲಿ ಆಟೋಮ್ಯಾಟಿಕ್ ಡೋರ್ಸ್ ಇರುವುದರಿಂದ, ಕೇವಲ ಜನರನ್ನು ಬಿಟ್ಟು ಬರಲು ರೈಲಿನೊಳಗೆ ಹೋಗಬೇಡಿ. ಬಾಗಿಲು ಮುಚ್ಚಿಕೊಂಡರೆ ನೀವು ರೈಲಿನಲ್ಲೇ ಸಿಲುಕಿಕೊಳ್ಳಬೇಕಾಗುತ್ತದೆ! ಎರಡನೆಯದಾಗಿ, ಚಲಿಸುವ ರೈಲನ್ನು ಹತ್ತಲು ಅಥವಾ ಇಳಿಯಲು ಕೊನೆಯ ಕ್ಷಣದಲ್ಲಿ ಓಡಬೇಡಿ, ಇದು ಪ್ರಾಣಾಪಾಯವನ್ನು ತಂದೊಡ್ಡಬಹುದು. ಯಾವಾಗಲೂ ಸುರಕ್ಷಿತ ಪ್ರಯಾಣಕ್ಕಾಗಿ ರೈಲ್ವೆ ನಿಯಮಗಳನ್ನು ಗೌರವಿಸಿ ಮತ್ತು ಸಿಬ್ಬಂದಿಯ ಸಹಕಾರ ಪಡೆಯಿರಿ.














Click it and Unblock the Notifications