ಬೆಂಗಳೂರು ಬಿಸಿನೆಸ್ ಕಾರಿಡಾರ್: ಭೂಮಾಲೀಕರಿಗೆ ಪರಿಹಾರದ ಹಣ ನೀಡುವ ಕುರಿತು ಬಿಗ್ ಅಪ್ಡೇಟ್
ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ 'ಬೆಂಗಳೂರು ಬಿಸಿನೆಸ್ ಕಾರಿಡಾರ್' (ಪೆರಿಫೆರಲ್ ರಿಂಗ್ ರೋಡ್) ನಿರ್ಮಾಣ ಪ್ರಕ್ರಿಯೆ ಇದೀಗ ಮಹತ್ವದ ಹಂತಕ್ಕೆ ತಲುಪಿದೆ. ಪಿಆರ್ಆರ್-1 ಪ್ಯಾಕೇಜ್-1 ಕಾಮಗಾರಿಯನ್ನು ಅಧಿಕೃತವಾಗಿ ಆರಂಭಿಸುವ ಕುರಿತು ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಅಧ್ಯಕ್ಷರಾದ ಎಲ್.ಕೆ.ಅತೀಕ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆದಿದೆ.
ಬಿಬಿಸಿಯ ಇಂಜಿನಿಯರಿಂಗ್, ಭೂಸ್ವಾಧೀನ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯಾದ ಎಸ್ಎನ್ಸಿ (SNC) ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯ ಪ್ರಮುಖ ಮುಖ್ಯಾಂಶಗಳು ಹಾಗೂ ಕೈಗೊಂಡಿರುವ ನಿರ್ದೇಶನಗಳು ಹೀಗಿವೆ.

ಭೂಮಾಲೀಕರಿಗೆ ತಕ್ಷಣವೇ ಪರಿಹಾರ ವಿತರಣೆ
ಈ ಯೋಜನೆಗಾಗಿ ಭೂಮಿ ಹಸ್ತಾಂತರಿಸಲು ಈಗಾಗಲೇ ಒಪ್ಪಿಗೆ ನೀಡಿರುವ ಎಲ್ಲ ಭೂಮಾಲೀಕರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪರಿಹಾರದ ಹಣವನ್ನು ಪಾವತಿಸಲು ಬಿಬಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಸಭೆಯಲ್ಲಿದ್ದ ಎಲ್ಲ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಮುಂದಿನ 2 ದಿನಗಳಲ್ಲಿ ಕಾರ್ಯಾದೇಶ ಜಾರಿ
ಈ ಯೋಜನೆಯ ಗುತ್ತಿಗೆ ಪಡೆದಿರುವ ಸಂಸ್ಥೆಯು ನಿಯಮಾವಳಿಗಳ ಪ್ರಕಾರ ಕಾರ್ಯಕ್ಷಮತೆಯ ಭದ್ರತೆಗಾಗಿ ಅಗತ್ಯವಿರುವ ಬ್ಯಾಂಕ್ ಗ್ಯಾರಂಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದೆ. ಒಪ್ಪಂದದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇಂಜಿನಿಯರಿಂಗ್ ವಿಭಾಗವು ಮುಂದಿನ ಎರಡು ದಿನಗಳ ಒಳಗಾಗಿ ಅಧಿಕೃತವಾಗಿ ಕಾರ್ಯಾದೇಶ ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.
ಮಾದಾವರದಲ್ಲಿ ನೈಸ್ ರಸ್ತೆ ಸಂಪರ್ಕ
ಇದೇ ಯೋಜನೆಯ ಪ್ರಮುಖ ಕೊಂಡಿಯಾದ ಮಾದಾವರ ಭಾಗದಲ್ಲಿ ನೈಸ್ (NICE) ರಸ್ತೆಯನ್ನು ಸಂಪರ್ಕಿಸುವ ಭಾಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಭಾಗದ ಜಮೀನುಗಳ ಮಾಲೀಕರಿಗೂ ತಕ್ಷಣವೇ ಪರಿಹಾರದ ಹಣ ವಿತರಣೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಬಿಸಿನೆಸ್ ಕಾರಿಡಾರ್ ಹಾದುಹೋಗುವ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಲೋಕೋಪಯೋಗಿ ಇಲಾಖೆ (PWD) ಮತ್ತು ರೈಲ್ವೆ ಇಲಾಖೆಯ ರಸ್ತೆ ಹಾಗೂ ಹಳಿಗಳ ಮೇಲೆ ಮೇಲ್ಸೇತುವೆಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ ಇಂಜಿನಿಯರಿಂಗ್ ವಿಭಾಗವು ಸಂಬಂಧಪಟ್ಟ ಇಲಾಖೆಗಳಿಗೆ ಅನುಮತಿ ಕೋರಿ ತಕ್ಷಣವೇ ಪತ್ರಗಳನ್ನು ಬರೆಯಲಿದೆ. ಬಿಬಿಸಿ ಅಧಿಕಾರಿಗಳ ಜೊತೆಗೂಡಿ ಗುತ್ತಿಗೆ ಸಂಸ್ಥೆಯಾದ SNC ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಿದೆ ಎಂದು ಹೇಳಿದ್ದಾರೆ.
ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ಶೀಘ್ರದಲ್ಲೇ ರಸ್ತೆ ನಿರ್ಮಾಣ ಕಾಮಗಾರಿಗಳು ನೆಲದ ಮಟ್ಟದಲ್ಲಿ ಆರಂಭವಾಗಲಿವೆ ಎಂದು ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಕಾರಿಡಾರ್ ಪೂರ್ಣಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಮುಕ್ತಿ ಸಿಗಲಿದೆ.
ಪರಿಹಾರದಲ್ಲೂ ಐದು ಆಯ್ಕೆ
ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ ರೈತರು ಹಾಗೂ ಭೂಮಾಲೀಕರಿಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಅತ್ಯಂತ ಆಕರ್ಷಕ ಹಾಗೂ ವಿನೂತನ ಪರಿಹಾರದ ಮಾದರಿಯನ್ನು ಸಿದ್ಧಪಡಿಸಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಐದು ವಿಭಿನ್ನ ರೀತಿಯ ಪರಿಹಾರದ ಆಯ್ಕೆಗಳನ್ನು ಮಾಲೀಕರಿಗೆ ನೀಡಲಾಗಿದೆ. ಭೂಮಾಲೀಕರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು.
ತಮಗೆ ಸೂಕ್ತವೆನಿಸುವ ಪರಿಹಾರದ ಮಾದರಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಸಂಬಂಧಿಸಿದ ಲಿಖಿತ ಒಪ್ಪಿಗೆ ಪತ್ರವನ್ನು ಖುದ್ದಾಗಿ ಕಚೇರಿಗೆ ಬಂದು ಅಥವಾ ಇ-ಮೇಲ್ ಮೂಲಕ ತಕ್ಷಣವೇ ಸಲ್ಲಿಸುವಂತೆ ಕಳೆದ ಮೇ ತಿಂಗಳಿನಲ್ಲೇ ಭೂಮಾಲೀಕರಿಗೆ ತಿಳಿಸಿತ್ತು. ಯಾವ ಭೂಮಾಲೀಕರು ಈಗಾಗಲೇ ಈ ಐದು ಆಯ್ಕೆಗಳ ಪೈಕಿ ಒಂದನ್ನು ಇಷ್ಟಪಟ್ಟು ತಮ್ಮ ಒಪ್ಪಿಗೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೋ, ಅಂತಹವರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಹಣ ಹಾಗೂ ಇತರೆ ಪರಿಹಾರದ ಸೌಲಭ್ಯಗಳನ್ನು ವಿತರಿಸಲು ಎಲ್.ಕೆ.ಅತೀಕ್ ಅವರು ಪ್ರಸ್ತುತ ಸಭೆಯಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.













Click it and Unblock the Notifications