ಸ್ವಲ್ಪ ಮಿಸ್ ಆಗಿದ್ರೂ ಮಗ ರಾಮ್ ಚರಣ್ ಕಣ್ಣು ಕಳೆದುಕೊಳ್ಳುತ್ತಿದ್ದ: ಆ ಘಟನೆ ನೆನೆದು ವೇದಿಕೆಯಲ್ಲೇ ಕಣ್ಣೀರಿಟ್ಟ ಚಿರಂಜೀವಿ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಬಿಗ್ ಹಿಟ್ ಸಿನಿಮಾ 'ಪೆದ್ದಿ' (Peddi) ಚಿತ್ರದ ಸಕ್ಸಸ್ ಮೀಟ್ನಲ್ಲಿ ಮೆಗಾಸ್ಟಾರ್ ಚಿರಂಜೀವಿ ತನ್ನ ಪುತ್ರನ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಸಿನಿಮಾ ಶೂಟಿಂಗ್ ಸಮಯದಲ್ಲಿ ಮಗ ರಾಮ್ ಚರಣ್ ಅನುಭವಿಸಿದ ನೋವು ಮತ್ತು ಅದರಿಂದ ಕಣ್ಣಿಗೆ ಆದ ಗಾಯದ ಬಗ್ಗೆ ಮಾತನಾಡುತ್ತಾ ಚಿರಂಜೀವಿ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ. ಗಾಯದ ತೀವ್ರತೆ ಎಷ್ಟಿತ್ತೆಂದರೆ, ಸ್ವಲ್ಪ ಮಿಸ್ ಆಗಿದ್ದರೂ ರಾಮ್ ಚರಣ್ ಕಣ್ಣನ್ನೇ ಕಳೆದುಕೊಳ್ಳುತ್ತಿದ್ದರು ಎಂಬ ಆಘಾತಕಾರಿ ಸತ್ಯವನ್ನು ಮೆಗಾಸ್ಟಾರ್ ಬಿಚ್ಚಿಟ್ಟಿದ್ದಾರೆ.
8 ಹೊಲಿಗೆ, ಫೋಟೋ ನೋಡಿ ನಾನು ನಡುಗಿಹೋಗಿದ್ದೆ
'ಪೆದ್ದಿ' ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಆ ಘಟನೆಯನ್ನು ನೆನೆಸಿಕೊಂಡ ಚಿರಂಜೀವಿ, "ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಚರಣ್ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. ಆ ಗಾಯದ ಫೋಟೋವನ್ನು ನನಗೆ ಕಳುಹಿಸಿದಾಗ ಅದನ್ನು ನೋಡಿ ನಾನು ನಡುಗಿಹೋಗಿದ್ದೆ. ಗಾಯದ ಆಳ ಹೆಚ್ಚಾಗಿದ್ದರಿಂದ ಚರಣ್ಗೆ ಬರೋಬ್ಬರಿ ಎಂಟು ಹೊಲಿಗೆಗಳನ್ನು ಹಾಕಲಾಗಿತ್ತು" ಎಂದು ವಿವರಿಸಿದ್ದಾರೆ.

"ಗಾಯದ ಫೋಟೋ ನೋಡಿದ ವೈದ್ಯರು, ಪೆಟ್ಟು ಬಿದ್ದ ಜಾಗಕ್ಕಿಂತ ಕೇವಲ ಒಂದು ಇಂಚು ಕೆಳಗೆ ಏನಾದರೂ ತಗುಲಿದ್ದರೆ ರಾಮ್ ಚರಣ್ ತಮ್ಮ ಒಂದು ಕಣ್ಣನ್ನೇ ಕಳೆದುಕೊಳ್ಳುವ ಅಪಾಯವಿತ್ತು ಎಂದು ಹೇಳಿದರು. ಆದರೆ ಅದೃಷ್ಟವಶಾತ್ ಪೆಟ್ಟು ಹುಬ್ಬಿನ ಮೇಲೆ ಬಿದ್ದಿತ್ತು. ನನ್ನ ಮಗನಿಗೆ ದೊಡ್ಡ ಗಂಡಾಂತರ ತಪ್ಪಿತು ಎಂದು ನಾನು ನಿಟ್ಟುಸಿರು ಬಿಟ್ಟೆ" ಎಂದು ಚಿರಂಜೀವಿ ಭಾವುಕರಾಗಿದ್ದಾರೆ.
ತಂದೆಯ ಮಾತು ನೆನಪಿಸಿಕೊಂಡ ಮೆಗಾಸ್ಟಾರ್
ಮಗನಿಗೆ ಆದ ಗಾಯವನ್ನು ನೋಡಿದಾಗ ನನಗೆ ಹಳೆಯ ದಿನಗಳು ಮತ್ತು ನಮ್ಮ ತಂದೆಯ ಮಾತುಗಳು ನೆನಪಿಗೆ ಬಂತು ಎಂದು ಚಿರಂಜೀವಿ ಹೇಳಿದ್ದಾರೆ. "ಅಂದು ಚರಣ್ಗೆ ಪೆಟ್ಟಾದಾಗ ನನಗೆ ನನ್ನ ಹಳೆಯ 'ಗೂಂಡಾ' (Gunda) ಸಿನಿಮಾದ ಶೂಟಿಂಗ್ ನೆನಪಾಯಿತು. ಆ ಚಿತ್ರದಲ್ಲಿ ಚಲಿಸುವ ರೈಲಿನ ಕೆಳಗೆ ನಾನು ಸಾಹಸ ದೃಶ್ಯವನ್ನು ಮಾಡುತ್ತಿದ್ದೆ. ಅದನ್ನು ನೋಡಿ ನನ್ನ ತಂದೆ ತೀವ್ರ ಆತಂಕಕ್ಕೊಳಗಾಗಿದ್ದರು. ಆಗ ನಾನು ತಂದೆಗೆ, 'ಪ್ರೇಕ್ಷಕರನ್ನು ರಂಜಿಸಲು ನಟರು ಇಂತಹ ರಿಸ್ಕ್ ತೆಗೆದುಕೊಳ್ಳಲೇಬೇಕು' ಎಂದಿದ್ದೆ. ಅದಕ್ಕೆ ನನ್ನ ತಂದೆ, 'ನಿನ್ನ ಮಗನೂ ಎಂದಾದರೂ ಹೀಗೆ ಹೀರೋ ಆಗಿ ಕಷ್ಟಪಡುವಾಗ ಮಾತ್ರ ನಿನಗೆ ಒಬ್ಬ ತಂದೆಯ ನೋವು ಅರ್ಥವಾಗುತ್ತದೆ' ಎಂದಿದ್ದರು. ಅಂದು ನನ್ನ ತಂದೆ ಹೇಳಿದ ಮಾತುಗಳು ಚರಣ್ಗೆ ಪೆಟ್ಟಾದಾಗ ನನಗೆ ಅರಿವಾಯಿತು" ಎಂದು ಚಿರಂಜೀವಿ ನೆನೆದಿದ್ದಾರೆ.
ಚರಣ್ಗೆ ಈ ಶ್ರಮ ಅಗತ್ಯವಿರಲಿಲ್ಲ
"ರಾಮ್ ಚರಣ್ ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವನು. ಆತನಿಗೆ ಇಷ್ಟೊಂದು ಕಷ್ಟಪಟ್ಟು ಕೆಲಸ ಮಾಡಬೇಕಾದ ಯಾವುದೇ ಅನಿವಾರ್ಯತೆ ಇರಲಿಲ್ಲ. ಆದರೂ ಸಿನಿಮಾಗಾಗಿ ಆತ ಪಡುವ ಶ್ರಮ ಮತ್ತು ಬದ್ಧತೆಯನ್ನು ಕಂಡು ಒಬ್ಬ ತಂದೆಯಾಗಿ ನನಗೆ ಹೆಮ್ಮೆ ಎನಿಸುತ್ತದೆ ಎಂದೂ ಚಿರಂಜೀವಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಮ್ ಚರಣ್ ನಟನೆಯ ಮಗಧೀರ, ರಂಗಸ್ಥಳಂ ಮತ್ತು ಆರ್.ಆರ್.ಆರ್ (RRR) ಸಿನಿಮಾಗಳು ಭಾರತೀಯ ಚಿತ್ರರಂಗದ ಅಪರೂಪದ ಚಿತ್ರಗಳು. ಆದರೆ 'ಪೆದ್ದಿ' ಸಿನಿಮಾ ಇವೆಲ್ಲಕ್ಕಿಂತ ಭಿನ್ನ ಹಾಗೂ ಶ್ರೇಷ್ಠ ಚಿತ್ರ ಎಂದು ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ನನಗೆ ಅಲ್ಲಿ ನನ್ನ ಮಗ ಚರಣ್ ಕಾಣಿಸಲಿಲ್ಲ. ಕೇವಲ 'ಪೆದ್ದಿ' ಎಂಬ ಪಾತ್ರ ಮಾತ್ರ ಕಾಣಿಸಿತು. ನಿರ್ದೇಶಕರಿಗೆ ಏನು ಬೇಕೋ ಅದನ್ನು ಚರಣ್ ನೂರಕ್ಕೆ ನೂರರಷ್ಟು ನೀಡಿದ್ದಾನೆ. ಈ ಪಾತ್ರದ ಮೂಲಕ ರಾಮ್ ಚರಣ್ ಪ್ರೇಕ್ಷಕರನ್ನು ನಗಿಸಿದ್ದಾನೆ, ಅಳಿಸಿದ್ದಾನೆ ಮತ್ತು ಭಾವನಾತ್ಮಕವಾಗಿ ಎಲ್ಲರ ಮನ ಗೆದ್ದಿದ್ದಾನೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಇಂತಹದ್ದೊಂದು ಅದ್ಭುತ ಪಾತ್ರ ಚರಣ್ಗೆ ಸಿಕ್ಕಿರುವುದು ಆತನ ಅದೃಷ್ಟ ಎಂದು ಚಿರಂಜೀವಿ ಹೊಗಳಿದ್ದಾರೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಪೆದ್ದಿ' ಚಿತ್ರದ ಯಶಸ್ಸು ಮತ್ತು ರಾಮ್ ಚರಣ್ ಅವರ ನಟನೆ ಇಡೀ ಮೆಗಾ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ.













Click it and Unblock the Notifications