Popcorn: ಥಿಯೇಟರ್ನಲ್ಲಿ ಪಾಪ್ಕಾರ್ನ್ ದುಬಾರಿ ಎಂದ ಸ್ಟಾರ್ ನಟನಿಗೆ 'ಮೊದಲು ನಿಮ್ಮ ಸಂಭಾವನೆ ಕಡಿಮೆ ಮಾಡಿ' ಅಂದ್ರು ಜನ
ಥಿಯೇಟರ್ಗಳಲ್ಲಿ ಪಾಪ್ಕಾರ್ನ್ ಸವಿಯುತ್ತಾ ನೆಚ್ಚಿನ ಸಿನಿಮಾ ನೋಡುವ ಮಜಾನೇ ಬೇರೆ. ಆದ್ರೆ ಸಿನಿಮಾ ಟಿಕೆಟ್ ದರಕ್ಕಿಂತ ಪಾಪ್ಕಾರ್ನ್ ಹಾಗೂ ಇನ್ನಿತರೆ ತಿನಿಸುಗಳ ದರವೇ ದುಪ್ಪಟ್ಟಿರುತ್ತವೆ ಎನ್ನುವುದು ಸಿನಿ ಪ್ರೇಕ್ಷಕರ ನೋವು. ಇದೇ ವಿಚಾರದ ಬಗ್ಗೆ ಧ್ವನಿ ಎತ್ತೋಣ ಎಂದು ಮುಂದೆ ಬಂದ ಪ್ಯಾನ್ ಇಂಡಿಯಾ ಸ್ಟಾರ್ ನಟರೊಬ್ಬರು, "ಮಲ್ಟಿಪ್ಲೆಕ್ಸ್ಗಳಲ್ಲಿ ಪಾಪ್ಕಾರ್ನ್ ಬೆಲೆ ತುಂಬಾ ಹೆಚ್ಚಾಗಿದೆ, ಇವುಗಳ ದರ ತಗ್ಗಬೇಕು" ಎಂದು ಸಾರ್ವಜನಿಕ ವೇದಿಕೆಯಲ್ಲೇ ಹೇಳಿಕೆ ನೀಡಿದ್ದಾರೆ. ಆದರೆ ಪ್ರೇಕ್ಷಕರ ಪರವಾಗಿ ಆಡಿದ ಈ ಮಾತುಗಳು ಆ ನಟನಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ತಿರುಗುಬಾಣವಾಗುತ್ತದೆ ಎಂದು ಬಹುಶಃ ಅವರು ಕೂಡ ಯೋಚಿಸಿರಲಿಲ್ಲ.
ಪಾಪ್ಕಾರ್ನ್ ಬೆಲೆ ಕಡಿಮೆ ಇರಲಿ ಎನ್ನುವ ನೀವು, ನೂರಾರು ಕೋಟಿ ಪಡೆಯುವ ನಿಮ್ಮ ಸಂಭಾವನೆಯನ್ನು ಮೊದಲು ಕಡಿಮೆ ಮಾಡಿಕೊಳ್ಳಬಾರದೇ?" ಎಂದು ನೆಟ್ಟಿಗರು ಈಗ ಅದೇ ಸ್ಟಾರ್ ನಟನಿಗೆ ಟಾಂಗ್ ಕೊಟ್ಟಿದ್ದಾರೆ. ಬಾಕ್ಸ್ ಆಫೀಸ್ ಸಕ್ಸಸ್ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ 'ಸ್ಟಾರ್ ನಟರ ಸಂಭಾವನೆ ವರ್ಸಸ್ ಮಲ್ಟಿಪ್ಲೆಕ್ಸ್ ಪಾಪ್ಕಾರ್ನ್ ಬೆಲೆ' ವಿವಾದದ ಬಗ್ಗೆ ಚರ್ಚೆ ಜೋರಾಗಿದೆ. ಸದ್ಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ 'ಪೆದ್ದಿ' (Peddi) ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದ್ದಾರೆ.

ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಮ್ ಚರಣ್, ಚಿತ್ರಮಂದಿರಗಳಲ್ಲಿನ ತಿಂಡಿ-ತಿನಿಸುಗಳ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದರು. ಆದರೆ, ಈ ಹೇಳಿಕೆಯೇ ಈಗ ಅವರ ವಿರುದ್ಧ ತಿರುಗುಬಾಣವಾಗಿದೆ. ವಿಶೇಷ ಸಂವಾದದಲ್ಲಿ ಭಾಗವಹಿಸಿದ್ದ ರಾಮ್ ಚರಣ್, ಕೋವಿಡ್ ನಂತರದ ಚಿತ್ರರಂಗದ ಪರಿಸ್ಥಿತಿ ಹಾಗೂ ಮಧ್ಯಮ ವರ್ಗದ ಪ್ರೇಕ್ಷಕರ ಬಗ್ಗೆ ಮಾತನಾಡುತ್ತಾ ಒಂದು ವಿಷಯ ಪ್ರಸ್ತಾಪಿಸಿದ್ದರು.
"ಇಂದಿಗೂ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಸಿನಿಮಾ ಅತ್ಯಂತ ದೊಡ್ಡ ಮನರಂಜನೆ. ಆದರೆ, ಪ್ರಸ್ತುತ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ 'ಪಾಪ್ಕಾರ್ನ್' (Popcorn) ಮತ್ತು ಸ್ನಾಕ್ಸ್ ಬೆಲೆ ಗಗನಕ್ಕೇರಿದೆ. ಸಾಮಾನ್ಯ ಪ್ರೇಕ್ಷಕರಿಗಾಗಿ ಈ ಬೆಲೆಗಳನ್ನು ಕಡಿಮೆ ಮಾಡಿದರೆ ಸಿನಿಮಾ ನೋಡಲು ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದರು.
ನಿಮ್ಮ ಸಂಭಾವನೆ ಏನ್ ಕಡಿಮೆ ಇದ್ಯಾ?
ಪ್ರೇಕ್ಷಕರ ಪರವಾಗಿ ರಾಮ್ ಚರಣ್ ಆಡಿದ ಈ ಮಾತುಗಳು ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಇದನ್ನು ತೀವ್ರವಾಗಿ ವಿರೋಧಿಸಿ ನಟನಿಗೆ ಟ್ರೋಲ್ ಬಿಸಿ ಮುಟ್ಟಿಸುತ್ತಿದ್ದಾರೆ. ರಾಮ್ ಚರಣ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹಾಗೂ ಸಿನಿಮಾ ವಿಶ್ಲೇಷಕರು ಸ್ಟಾರ್ ನಟರ ದುಬಾರಿ ಸಂಭಾವನೆಯನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. "ಥಿಯೇಟರ್ಗಳಲ್ಲಿ ಪಾಪ್ಕಾರ್ನ್ ಬೆಲೆ ಕಡಿಮೆ ಇರಬೇಕು ಎಂದು ಬಯಸುವ ಸ್ಟಾರ್ ನಟರು, ಮೊದಲು ತಮ್ಮ ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಏಕೆ ಕಡಿಮೆ ಮಾಡಿಕೊಳ್ಳಬಾರದು?" ಎಂದು ಪ್ರಶ್ನಿಸುತ್ತಿದ್ದಾರೆ.
ಸಾಮಾನ್ಯರ ಮೇಲೆ ಟಿಕೆಟ್ ಹೊರೆ
ಸ್ಟಾರ್ ನಟರ ಭಾರಿ ಸಂಭಾವನೆಯಿಂದಾಗಿ ಸಿನಿಮಾದ ಒಟ್ಟು ಬಜೆಟ್ ನೂರಾರು ಕೋಟಿ ದಾಟುತ್ತದೆ. ಇದನ್ನು ವಸೂಲಿ ಮಾಡಲು ನಿರ್ಮಾಪಕರು ಸಿನಿಮಾ ರಿಲೀಸ್ ಆದ ಮೊದಲ ವಾರ ಟಿಕೆಟ್ ದರವನ್ನು ದುಪ್ಪಟ್ಟು ಮಾಡುತ್ತಾರೆ. ಇದು ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ವಾಸ್ತವ ಬಿಚ್ಚಿಟ್ಟಿದ್ದಾರೆ. ಮತ್ತೊಂದೆಡೆ ರಾಮ್ ಚರಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರ ನಿಂತಿದ್ದಾರೆ. "ಕುಟುಂಬ ಸಮೇತ ಮಲ್ಟಿಪ್ಲೆಕ್ಸ್ಗೆ ಸಿನಿಮಾ ನೋಡಲು ಹೋದಾಗ ಟಿಕೆಟ್ ದರಕ್ಕಿಂತ ಅಲ್ಲಿನ ತಿಂಡಿಗಳ ಬೆಲೆಯೇ ಹೆಚ್ಚಾಗಿರುತ್ತದೆ. ಪ್ರೇಕ್ಷಕರ ಈ ಕಷ್ಟವನ್ನು ಅರ್ಥಮಾಡಿಕೊಂಡು ನಮ್ಮ ಹೀರೋ ಧ್ವನಿ ಎತ್ತಿದ್ದಾರೆ. ಇದರಲ್ಲಿ ಅವರನ್ನು ಟ್ರೋಲ್ ಮಾಡುವ ಅಗತ್ಯವಿಲ್ಲ" ಎಂದು ಫ್ಯಾನ್ಸ್ ಸಮರ್ಥಿಸಿಕೊಳ್ಳುತ್ತಿದ್ದಾರೆ.
'ಆರ್ಆರ್ಆರ್' ನಂತರ ಬಂದ ರಾಮ್ಚರಣ್ ನಟನೆಯ 'ಆಚಾರ್ಯ' ಮತ್ತು 'ಗೇಮ್ ಚೇಂಜರ್' ಚಿತ್ರಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಲಿಲ್ಲ. ಆದರೆ ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾದ 'ಪೆದ್ದಿ' ಸಿನಿಮಾ ರಾಮ್ ಚರಣ್ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದೆ. ಸಿನಿಮಾದ ಯಶಸ್ಸಿನ ನಡುವೆಯೂ ಸ್ಟಾರ್ ನಟರ ಸಂಭಾವನೆ ವರ್ಸಸ್ ಮಲ್ಟಿಪ್ಲೆಕ್ಸ್ ತಿಂಡಿಗಳ ಬೆಲೆ ಕುರಿತಾದ ಈ ಹೊಸ ವಿವಾದ ಸದ್ಯಕ್ಕೆ ಚಿತ್ರರಂಗದಲ್ಲಿ ದೊಡ್ಡ ಚರ್ಚೆಯಲ್ಲಿದೆ.













Click it and Unblock the Notifications