ಇನ್ಫೋಸಿಸ್ ಮುಖ್ಯಸ್ಥರಾಗಿ ನಿಲೇಕಣಿ: ಅಧಿಕೃತ ಘೋಷಣೆ
ನಂದನ್ ನಿಲೇಕಣಿಯನ್ನು ತನ್ನ ಮುಖ್ಯಸ್ಥರನ್ನಾಗಿ ಮರು ನೇಮಿಸಿಕೊಂಡ ಇನ್ಫೋಸಿಸ್. ಗುರುವಾರ ರಾತ್ರಿ ಸಂಸ್ಥೆಯಿಂದ ಅಧಿಕೃತ ಘೋಷಣೆ.
ಬೆಂಗಳೂರು, ಆಗಸ್ಟ್ 24: ಪ್ರಖ್ಯಾತ ಸಾಫ್ಟ್ ವೇರ್ ಸಂಸ್ಥೆಯಾದ ಇನ್ಫೋಸಿಸ್ ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಇದೀಗ ಅದೇ ಸಂಸ್ಥೆಯ ಮುಖ್ಯಸ್ಥರಾಗಿ ಮರುನೇಮಕಗೊಂಡಿದ್ದಾರೆ. ಈ ಹಿಂದೆಯೂ ಅವರು ಅದೇ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.
ಹೊಸ ನೇಮಕಾತಿ ಪ್ರಕಾರ, ಸಂಸ್ಥೆಯಲ್ಲಿ ಅವರ ಪಾತ್ರ 'ನಾನ್ ಎಕ್ಸಿಕ್ಯೂಟಿವ್ ಚೇರ್ಮನ್' ಎಂದು ಕಂಪನಿ ಹೇಳಿದ್ದರೂ, ಸಂಸ್ಥೆಯನ್ನು ಗುರಿಯೆಡೆಗೆ ಮುನ್ನಡೆಸುವ ಜವಾಬ್ದಾರಿ ನಿಲೇಕಣಿ ಅವರ ಮೇಲೇ ಇದೆ.

ಹತ್ತು ವರ್ಷಗಳ ಹಿಂದೆ, ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನಂದನ್ ನಿಲೇಕಣಿ ಅವರನ್ನು ಆಧಾರ್ ಕಾರ್ಡ್ ನ ಮಹತ್ವದ ಯೋಜನೆಯ ಮುಖ್ಯಸ್ಥರನ್ನಾಗಿ ಸರ್ಕಾರ ಆರಿಸಿತ್ತು. ಆ ಹಿನ್ನೆಲೆಯಲ್ಲಿ, ಅವರು ಅನಿವಾರ್ಯವಾಗಿ ಇನ್ಫೋಸಿಸ್ ಸಂಸ್ಥೆಯನ್ನು ತೊರೆದಿದ್ದರು. ಇದೀಗ, 10 ವರ್ಷಗಳ ನಂತರ, ಅವರು ಪುನಃ ಸಂಸ್ಥೆಗೆ ಮರಳಿರುವುದು ಕಂಪನಿಯಲ್ಲಿ ಹೊಸ ಉತ್ಸಾಹ ಗರಿಗೆದರುವಂತೆ ಮಾಡಿದೆ ಎಂದು ಹೇಳಲಾಗಿದೆ.
ಈ ನಡುವೆ ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ ಅವರನ್ನು ಮತ್ತೆ ಸಂಸ್ಥೆಯ ಮುಖ್ಯಸ್ಥರನ್ನಾಗಿ ಕರೆ ತರಲು ಇನ್ಫೋಸಿಸ್ ನ ಬೋರ್ಡ್ ಮುಂದಾಗಿತ್ತು. ಇತ್ತೀಚೆಗೆ, ಕೆಲವಾರು ಆಂತರಿಕ ವಿದ್ಯಾಮಾನಗಳಿಂದಾಗಿ ಸಂಸ್ಥೆಯು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇರುಸು ಮುರುಸಿಗೆ ಕಾರಣವಾಗಿತ್ತು.
ಈ ಹಿಂದೆ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ಸಲ್ಲಿಸಿದ್ದು, ಇದಕ್ಕೆ ಕಾರಣ ಸಂಸ್ಥೆಯ ಮತ್ತೊಬ್ಬ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೇ ಕಾರಣವೆಂದು ಕಂಪನಿ ಬಹಿರಂಗವಾಗಿ ಘೋಷಿಸಿದ್ದು, ಅದರ ಬೆನ್ನಲ್ಲೇ ಷೇರು ಪೇಟೆಯಲ್ಲಿ ಇನ್ಫಿ ಷೇರುಗಳ ಮೌಲ್ಯ ಕೆಳಗಿಳಿದಿದ್ದು ಸಂಸ್ಥೆಗೆ ಭಾರೀ ಮುಜುಗಕ್ಕೀಡು ಮಾಡಿದ್ದವು.

ನಿರ್ದೇಶಕರ ಮಂಡಳಿ ಮುಖ್ಯಸ್ಥರೂ ಹೌದು
ನಂದನ್ ನಿಲೇಕಣಿಯವರು ಸಂಸ್ಥೆಯಲ್ಲಿ ನಾನ್ ಎಕ್ಸಿಕ್ಯೂಟಿವ್ ಆಗಿ ಮಾತ್ರವಲ್ಲ, ಇವರು ನಾನ್-ಇಂಡಿಪೆಂಡೆಂಟ್ ಹಾಗೂ ಸಂಸ್ಥೆಯ ನಿರ್ದೇಶಕರ ಮಂಡಳಿಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಲಿದ್ದಾರೆ.

ಸಂಸ್ಥೆ ತೊರೆದಿದ್ದ ಜೆಫ್ರಿ, ಜಾನ್
ಈ ಹಿಂದೆ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಪ್ರೊ. ಜೆಫ್ರಿ ಲೇಮನ್ ಹಾಗೂ ಪ್ರೊ. ಜಾನ್ ಎಚೆಮೆಂಡಿ ಅವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರ ಸ್ಥಾನಕ್ಕೆ ಹೊಸಬರ ನೇಮಕವಾಗಲಿದೆ ಎನ್ನಲಾಗಿದೆ.
(ಚಿತ್ರ ಕೃಪೆ: ಇನ್ಫೋಸಿಸ್)

ಪ್ರವೀಣ್ ಅವರಿಗೆ ಹೊಸ ಜವಾಬ್ದಾರಿ
ಇತ್ತೀಚೆಗೆ, ಸಂಸ್ಥೆಯ ಸಹ-ಮುಖ್ಯಸ್ಥರಾಗಿದ್ದ ರವಿ ವೆಂಕಟೇಶನ್ ಅವರು ಇನ್ನು ಮುಂದೆಯೂ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಯು. ಪ್ರವೀಣ್ ರಾವ್ ಅವರು, ಸಂಸ್ಥೆಯ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಅತಂತ್ರ ಸ್ಥಿತಿಗೆ ನಿರ್ದಿಷ್ಟ ದಿಶೆ
ಇದೀಗ, ನಂದನ್ ನಿಲೇಕಣಿಯವರ ಮರು ನೇಮಕಾತಿ, ಕಳೆದ ಮೂರು ವರ್ಷಗಳಲ್ಲಿ ಸಮರ್ಥ ನಾಯಕತ್ವ ಕಾಣುವಲ್ಲಿ ವಿಫಲವಾಗಿದ್ದ ಇನ್ಫೋಸಿಸ್ ಸಂಸ್ಥೆಗೆ ಹೊಸ ಚೈತನ್ಯ ತಂದಿದೆ ಎಂದು ಹೇಳಲಾಗಿದೆ. ಈ ಹಿಂದೆ, ಆರ್. ಶೇಷಸಾಯಿ ಹಾಗೂ ವಿಶಾಲ್ ಸಿಕ್ಕಾ ಅವರು ರಾಜಿನಾಮೆ ಸಲ್ಲಿಕೆಯಿಂದಾಗಿ ಸಂಸ್ಥೆಯ ಆಡಳಿತ ಪದೇ ಪದೇ ಅತಂತ್ರ ಸ್ಥಿತಿಗೆ ಸಿಲುಕುವಂತಾಗಿತ್ತು.












Click it and Unblock the Notifications