ಕೊರೊನಾ: ಕೇದಾರನಾಥ ಪ್ರಧಾನ ಅರ್ಚಕರಿಗೆ 14ದಿನಗಳ ಕ್ವಾರಂಟೈನ್
ಡೆಹ್ರಾಡೂನ್, ಏಪ್ರಿಲ್ 20: ಭಾರತದ ಪ್ರಸಿದ್ಧ ಧಾರ್ಮಿ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ.
ಕೇದಾರನಾಥದ ಪ್ರಧಾನ ಅರ್ಚಕರು ಹಾಗೂ ಇತರ ಐದು ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಉತ್ತರಾಖಂಡ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಅನುಮತಿ ನೀಡಿದ ನಂತರ, ಪ್ರಧಾನ ಅರ್ಚಕ ಭೀಮಾಶಂಕರ್ ಅವರು ಮಹಾರಾಷ್ಟ್ರದ ನಾಂದೇಡ್ ನಿಂದ ರುದ್ರಪ್ರಯಾಗದ ಉಖಿಮತ್ ತಲುಪಿದ್ದರು.
ಕೊರೊನಾವೈರಸ್ ಹಾವಳಿಯ ಹಿನ್ನೆಲೆ ನಿಯಮಾನುಸಾರ ಅರ್ಚಕರು ಕ್ವಾರಂಟೈನ್ ನಲ್ಲಿದ್ದಾರೆ. ಬೇರೆ ರಾಜ್ಯದಿಂದ ಆಗಮಿಸಿರುವ ವ್ಯಕ್ತಿಯನ್ನು 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿರಿಸಬೇಕೆಂದು ಉತ್ತರಾಖಂಡ ರಾಜ್ಯ ಸರ್ಕಾರ ನಿಯಮಾವಳಿ ತಂದಿದೆ.
"ಪ್ರಧಾನ ಅರ್ಚಕರು ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೋ ಇಲ್ಲವೋ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಅವರು ಅನುಮತಿ ಪಡೆದರೂ ಸಹ ಅಲ್ಲಿಯೇ ಅವರು ಕ್ವಾರಂಟೈನ್ ನಲ್ಲಿರುತ್ತಾರೆ." ಎಂದು ರುದ್ರಪ್ರಯಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗೇಶ್ ಘಿಲ್ದಿಯಾಳ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
"ದೇವಾಲಯವನ್ನು ಮತ್ತೆ ತೆರೆದ ನಂತರ ಅವರು ಸಾಮಾಜಿ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ.ಅವರ ಆರೋಗ್ಯ ತಪಾಸಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ" ಎಂದು ಅವರು ಹೇಳಿದರು. ಇದರ ಮಧ್ಯೆ ಉತ್ತರಾಖಂಡದಲ್ಲಿ ಈವರೆಗೆ 44 ಕೋವಿಡ್1-19 ಪ್ರಕರಣಗಳು ವರದಿಯಾಗಿದೆ.