ರಾಮ ಮಂದಿರ ಉದ್ಘಾಟನೆ ಘೋಷಣೆ ಮಾಡಲು ನೀವು ಪೂಜಾರಿಯಲ್ಲ: ಅಮಿತ್ ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ನವದೆಹಲಿ, ಜ. 06: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನಾಂಕವನ್ನು ಗೃಹ ಸಚಿವ ಅಮಿತ್ ಶಾ ಗುರುವಾರ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಎದುರಿಸಲು ಸಿದ್ಧವಾಗಿರುವ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಗುರುವಾರ ಚುನಾವಣಾ ಪ್ರಚಾರದ ವೇಳೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನಾಂಕವನ್ನು ಅಮಿತ್ ಶಾ ಘೋಷಿಸಿದ್ದರು. ಇದಕ್ಕೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಲು ಕಾಂಗ್ರೆಸ್ನ 70 ವರ್ಷದ ಪ್ರಜಾಪ್ರಭುತ್ವ ಕಾರಣ: ಮಲ್ಲಿಕಾರ್ಜುನ ಖರ್ಗೆ
ನೀವು ರಾಜಕಾರಣಿ ಪೂಜಾರಿಯಲ್ಲ: ಮಲ್ಲಿಕಾರ್ಜುನ ಖರ್ಗೆ
ಜನವರಿ 1, 2024 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಸಿದ್ಧವಾಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ತ್ರಿಪುರಾದಲ್ಲಿ ಗುರುವಾರ ಘೋಷಿಸಿದ್ದರು. ಇದಾದ ಒಂದು ದಿನದ ನಂತರ ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
"ನೀವು ರಾಜಕಾರಣಿ ಪೂಜಾರಿಯಲ್ಲ. ನಿಮ್ಮ ಕರ್ತವ್ಯ ದೇಶವನ್ನು ರಕ್ಷಿಸುವುದು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ( ಎಂಎಸ್ಪಿ) ಒದಗಿಸುವುದು. ಇದು ಬಿಟ್ಟು ದೇವಸ್ಥಾನದ ಬಗ್ಗೆ ಘೋಷಣೆಗಳನ್ನು ಮಾಡಬಾರದು " ಎಂದು ಹರ್ಯಾಣದ ಪಾಣಿಪತ್ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ನಡುವೆ ಖರ್ಗೆ ಹೇಳಿದ್ದಾರೆ.
ಪ್ರಧಾನಿ ಮೋದಿಯಿಂದ ರಾಮ ಮಂದಿರ ನಿರ್ಮಾಣ ಆರಂಭ
ಗುರುವಾರ, ತ್ರಿಪುರಾದಲ್ಲಿ ಮಾತಾಡಿದ್ದ ಅಮಿತ್ ಶಾ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವು ರಾಮಮಂದಿರ ನಿರ್ಮಾಣ ಪ್ರಕರಣವನ್ನು ನ್ಯಾಯಾಲಯಗಳಲ್ಲಿ ತಡೆಯುತ್ತಿದೆ ಎಂದು ಆರೋಪಿಸಿದ್ದರು. ಉತ್ತರ ಪ್ರದೇಶದ ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಬಂದಿದೆ ಎಂದು ಒತ್ತಿ ಹೇಳಿದ್ದರು.
"ಸ್ವಾತಂತ್ರ್ಯ ಬಂದಾಗಿನಿಂದಲೂ ರಾಮ ಮಂದಿರ ವಿವಾದವನ್ನು ಕಾಂಗ್ರೆಸ್ ಸ್ಥಗಿತಗೊಳಿಸಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿತು. ಅದೇ ದಿನ 'ಭೂಮಿಪೂಜೆ ' ಮಾಡಿ ನಂತರ ದೇವಾಲಯದ ನಿರ್ಮಾಣ ಪ್ರಾರಂಭವಾಯಿತು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಬಿಜೆಪಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವಲ್ಲಿ ನಿರತವಾಗಿದೆ
ಶುಕ್ರವಾರದಂದು ಅಮಿತ್ ಶಾ ಆರೋಪಗಳಿಗೆ ಟಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, "ಬಿಜೆಪಿಯು ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವಲ್ಲಿ ನಿರತವಾಗಿದೆ. ಇದರ ಜೊತೆಗೆ ಪ್ರಜಾಪ್ರಭುತ್ವದಲ್ಲಿ ತಮಗೆ ನಂಬಿಕೆ ಇದೆ ಎಂದು ಹೇಳಿಕೊಳ್ಳುವಲ್ಲಿಯೂ ನಿರತವಾಗಿದೆ" ಎಂದು ವ್ಯಂಗ್ಯವಾಡಿದ್ದರು.
"ಬಿಜೆಪಿಗರು ದೊಡ್ಡ ಸುಳ್ಳುಗಾರರು, ಅವರು ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಇಲ್ಲಿಯವರೆಗೂ ಯಾರಿಗೂ ಉದ್ಯೋಗ ಸಿಕ್ಕಿಲ್ಲ. ಅವರು 15 ಲಕ್ಷ ರೂ ನೀರುವುದಾಗಿ ಘೋಷಿಸಿದ್ದರು. ಆದರೆ ಸು ಕೂಡ ಸುಳ್ಳು" ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ನಿರ್ನಾಮದ ಬಗ್ಗೆ ಮಾತನಾಡಿ ಆಪರೇಷನ್ ಕಮಲ ಮಾಡುತ್ತಾರೆ
ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಭರವಸೆಗಳನ್ನು ಉಲ್ಲೇಖಿಸಿರುವ ಮಲ್ಲಿಕಾರ್ಜುನ ಖರ್ಗೆ, ಭ್ರಷ್ಟಾಚಾರವನ್ನು ಕೊನೆಗಾಣಿಸುವ ಭರವಸೆಯನ್ನು ನೀಡುವ ಇವರು, ಚುನಾಯಿತ ಬಿಜೆಪಿಯೇತರ ಸರ್ಕಾರಗಳನ್ನು ಬೀಳಿಸಲು ಪ್ರಯತ್ನಿಸುತ್ತಿದೆ "ಆಪರೇಷನ್ ಕಮಲ" ನಡೆಸುತ್ತವೆ ಎಂದರು.
"ಬಿಜೆಪಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ, ಪ್ರಧಾನಿ 100 ಬೆಂಗಾವಲು ಕಾರುಗಳೊಂದಿಗೆ ಓಡಾಡುತ್ತಾರೆ. ಗೃಹ ಸಚಿವರು 50 ಕಾರುಗಳೊಂದಿಗೆ ಹೋಗುತ್ತಾರೆ ಆದರೆ, ನಮ್ಮ ಕಾರ್ಯಕ್ರಮಗಳಿಗೆ ತಲುಪಲು ಕ್ಲಿಯರೆನ್ಸ್ ಪಡೆಯಲು ನಾವು ಹರಸಾಹಸ ಪಡಬೇಕಾಗುತ್ತಿದೆ" ಎಂದು ಆರೋಪಿಸಿದ್ದಾರೆ.
ಈ ವರ್ಷ ಒಂಬತ್ತು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಿತ್ತಾಟದ ಕಾವು ಮತ್ತಷ್ಟು ಹೆಚ್ಚಾಗಲಿದೆ. ಈ ವರ್ಷದ ರಾಜ್ಯ ಚುನಾವಣಾ ಫಲಿತಾಂಶಗಳು ಮುಂದಿನ ವರ್ಷ ರಾಷ್ಟ್ರೀಯ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.