Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ
Kannada: ಕರ್ನಾಟಕದ ಕಾಲೇಜು ಕ್ಯಾಂಪಸ್ನಲ್ಲಿ ಇಂಗ್ಲಿಷ್ನಲ್ಲೇ ಮಾತನಾಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಹೇಳಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಕಾಲೇಜು ಕ್ಯಾಂಪಸ್ನಲ್ಲಿ ಇಂಗ್ಲೀಶ್ನಲ್ಲೇ ಮಾತನಾಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಹೇಳಿಕೆ ನೀಡಿದ್ದಾರೆ. ಇದು ಒಂದು ರೀತಿಯಲ್ಲಿ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದು ಕರೆಯಿರಿ ಎಂಬಂತಾಗಿದೆ.
ಸಚಿವರ ಹೇಳಿಕೆ ಕನ್ನಡಿಗರ ಸ್ವಾಭಿಮಾನಕ್ಕೆ ನೇರ ದೊಡ್ಡ ಏಟು. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ಪರಭಾಷೆಯವರ ಜೊತೆಯಲ್ಲಿ ಕನ್ನಡದಲ್ಲೇ ಮಾತನಾಡಿ" ಎಂದು ಕರೆ ನೀಡುತ್ತಿರುವಾಗ, ಇದೇ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರು ಕ್ಯಾಂಪಸ್ನಲ್ಲಿ ಇಂಗ್ಲೀಶ್ನಲ್ಲೇ ಮಾತನಾಡಬೇಕು ಎಂದು ಪ್ರೋತ್ಸಾಹಿಸುವ ಮೂಲಕ ಕನ್ನಡ ವಿರೋಧಿ ನಿಲುವನ್ನು ಬಹಿರಂಗಪಡಿಸಿದ್ದಾರೆ.

ಎಐ ಯುಗದಲ್ಲಿ ಭಾಷಾ ಅನುವಾದ ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಇಂಗ್ಲೀಶ್ ಮಾತನಾಡದಿದ್ದರೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಎಂಬುದು ಸಂಪೂರ್ಣ ಭ್ರಮೆಯಾಗಿದೆ. ಜಗತ್ತಿನ ಮುಂದುವರೆದ ದೇಶಗಳು ತಮ್ಮ ತಾಯಿಭಾಷೆಗೆ ಹೆಚ್ಚಿನ ಮನ್ನಣೆ ನೀಡಿ, ತಂತ್ರಜ್ಞಾನದ ಮೂಲಕ ಜಾಗತಿಕ ಸ್ಪರ್ಧೆಯಲ್ಲಿ ಮುಂದುವರೆಯುತ್ತಿವೆ. ಆದರೆ ಕರ್ನಾಟಕದ ಉನ್ನತ ಸಚಿವರು ಇಂಗ್ಲೀಶ್ನಿಂದಲೇ ಯಶಸ್ಸು ಸಿಗುತ್ತದೆ ಎಂಬ ಹಳೆಯ ಗುಲಾಮಗಿರಿ ಮನೋಭಾವದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಕನ್ನಡದ ಮಣ್ಣಿನಲ್ಲಿ ಕನ್ನಡದ ಅನ್ನ ಉಣ್ಣುತ್ತಾ, ಕನ್ನಡಿಗರ ಮತದಿಂದ ಆಯ್ಕೆಯಾಗಿ ಬಂದ ಸಚಿವರು ಕನ್ನಡವನ್ನೇ ಕಾಲೇಜು ಆವರಣದಿಂದ ಹೊರಹಾಕುವಂತೆ ಹೇಳುವುದು ನಿಜಕ್ಕೂ ನಾಚಿಕೆಗೇಡು.
ಸಚಿವ ಸುಧಾಕರ್ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆದು ಕ್ಷಮೆಯಾಚಿಸಬೇಕು. ಕನ್ನಡವೇ ನಮ್ಮ ಅಸ್ಮಿತೆ, ನಮ್ಮ ಶಕ್ತಿ - ಅದನ್ನು ಯಾರೂ ಕಸಿದುಕೊಳ್ಳಲಾರರು. ಸುಧಾಕರ್ ಅವರು ಕನ್ನಡ ನಾಡಿನ ಸರ್ಕಾರದ ಸಚಿವರಾಗಿ ಒಂದೇ ಒಂದು ಕ್ಷಣ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಅವರು ಈ ಕೂಡಲೇ ರಾಜೀನಾಮೆ ಕೊಟ್ಟು ಹೋಗಲಿ. ಇಂಥವರನ್ನು ಕನ್ನಡಿಗರು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications