Ramayana: ಯಶ್ ಪತ್ನಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್; ರಾಮಾಯಣ ಸೀಕ್ರೆಟ್ ರಿವೀಲ್ ಮಾಡಿದ ನಟಿ
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬರುತ್ತಿವೆ. ಬಾಲಿವುಡ್ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ದೃಶ್ಯ ಕಾವ್ಯದಲ್ಲಿ ನಟಿ ಕಾಜಲ್ ಅಗರ್ವಾಲ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಯಶ್ ಕಾಣಿಸಿಕೊಳ್ಳುತ್ತಿದ್ದರೆ, ಅವರ ಪತ್ನಿ ಮಂಡೋದರಿಯ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕಾಜಲ್, ತಮ್ಮ ಪಾತ್ರದ ಸ್ವರೂಪ ಹಾಗೂ ನಟ ಯಶ್ ಅವರೊಂದಿಗಿನ ಕೆಲಸದ ಅನುಭವದ ಬಗ್ಗೆ ಆಸಕ್ತಿದಾಯಕ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ಮೊದಲ ಭಾಗದಲ್ಲಿ ಕಾಜಲ್ ಇರ್ತಾರಾ?
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಜಲ್ ಅಗರ್ವಾಲ್, 'ರಾಮಾಯಣ' ಚಿತ್ರದ ಮೊದಲ ಭಾಗದಲ್ಲಿ ತಮ್ಮ ಮಂಡೋದರಿ ಪಾತ್ರದ ಅವಧಿ ತುಂಬಾ ಕಡಿಮೆ ಇರಲಿದೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸದ್ಯ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಮಾತ್ರ ಮುಕ್ತಾಯಗೊಂಡಿದ್ದು, ಕಥೆಯ ಪ್ರಕಾರ ಮೊದಲ ಅಧ್ಯಾಯದಲ್ಲಿ ಲಂಕಾ ನಗರಿಗೆ ಸಂಬಂಧಿಸಿದ ದೃಶ್ಯಗಳು ತುಂಬಾ ಕಡಿಮೆ ಇರಲಿವೆ. ಕಥೆಯು ಹೆಚ್ಚಾಗಿ ಅಯೋಧ್ಯೆ ಮತ್ತು ವನವಾಸದ ಸುತ್ತ ಸಾಗುವುದರಿಂದ, ಮೊದಲ ಭಾಗದಲ್ಲಿ ನನಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಿರುವ ಇಂತಹದೊಂದು ದೃಶ್ಯ ವೈಭವದ ಭಾಗವಾಗಿರುವುದಕ್ಕೆ ತಮಗೆ ಹೆಮ್ಮೆ ಇದೆ ಎಂದೂ ಕಾಜಲ್ ಸಂತಸ ಹಂಚಿಕೊಂಡಿದ್ದಾರೆ.
ಯಶ್ ಜೊತೆ ರೋಮಾಂಚಕ ಅನುಭವ
ಇನ್ನು ಈ ಚಿತ್ರದಲ್ಲಿ ತಮ್ಮ ಪತಿಯಾಗಿ (ರಾವಣ) ನಟಿಸುತ್ತಿರುವ ಕನ್ನಡದ ಸೂಪರ್ಸ್ಟಾರ್ ಯಶ್ ಅವರ ಬಗ್ಗೆ ಕಾಜಲ್ ಅಗರ್ವಾಲ್ ಕೊಂಡಾಡಿದ್ದಾರೆ. ಯಶ್ ಅವರ ಅಭಿನಯ ಹಾಗೂ ಉತ್ಸಾಹವನ್ನು ಶ್ಲಾಘಿಸಿರುವ ಅವರು, "ಯಶ್ ಅದ್ಭುತ ನಟ. ಅವರ ಕೆಲಸವನ್ನು ನಾನು ದೀರ್ಘಕಾಲದಿಂದ ಗಮನಿಸುತ್ತಿದ್ದೇನೆ ಮತ್ತು ಗೌರವಿಸುತ್ತೇನೆ. ಈ ಚಿತ್ರಕ್ಕಾಗಿ ಅವರು ತೊಡಗಿಸಿಕೊಂಡಿರುವ ರೀತಿ ನಿಜಕ್ಕೂ ಆಶ್ಚರ್ಯ ತರುತ್ತದೆ. ಸೆಟ್ನಲ್ಲಿ ಅವರ ವೃತ್ತಿಪರತೆ ಮತ್ತು ಅಪಾರ ಪ್ರತಿಭೆಯನ್ನು ಹತ್ತಿರದಿಂದ ನೋಡುವುದೇ ಒಂದು ರೋಮಾಂಚಕ ಅನುಭವ" ಎಂದು ಹೊಗಳಿದ್ದಾರೆ.

ಎರಡು ಭಾಗಗಳಲ್ಲಿ ರಾಮಾಯಣ ರಿಲೀಸ್
ನಿರ್ದೇಶಕ ನಿತೇಶ್ ತಿವಾರಿ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ 'ರಾಮಾಯಣ' ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ನಟಿ ಸಾಯಿ ಪಲ್ಲವಿ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರದ ಸಣ್ಣ ಝಲಕ್ ಬಿಡುಗಡೆಯಾಗಿದ್ದು, ಅದರಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರಗಳ ಪರಿಚಯದ ಜೊತೆಗೆ ಅಯೋಧ್ಯೆಯ ಭವ್ಯ ಲೋಕವನ್ನು ತೋರಿಸಲಾಗಿದೆ. ಇದರೊಂದಿಗೆ ರಾವಣನಾಗಿ ಯಶ್ ಅವರ ಒಂದು ಸಣ್ಣ ಹಾಗೂ ಖಡಕ್ ಲುಕ್ ಕೂಡ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಚಿತ್ರದ ಮೊದಲ ಭಾಗವು ಈ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.













Click it and Unblock the Notifications