Ramayana: ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ನಟ ಯಶ್ 'ರಾಮಾಯಣ', ಚಿತ್ರಕ್ಕೆ 10,000ಕ್ಕೂ ಅಧಿಕ ತಂತ್ರಜ್ಞರ ದಂಡು
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ವಿಶಿಷ್ಟ ಹಾಗೂ ಬೃಹತ್ ಮಟ್ಟದ ದೃಶ್ಯ ವೈಭವಕ್ಕೆ ಯಶ್ ನಟನೆಯ 'ರಾಮಾಯಣ' (Ramayana) ಸಿನಿಮಾ ಸಜ್ಜಾಗುತ್ತಿದೆ. ಪ್ರಸ್ತುತ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ಪ್ರೊಡಕ್ಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಇಡೀ ಸಿನಿಮಾದ ದೃಶ್ಯವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬರೋಬ್ಬರಿ 10,000ಕ್ಕೂ ಅಧಿಕ ಚಿತ್ರತಂಡದ ಸದಸ್ಯರು (Crew Members) ರಾತ್ರಿ-ಹಗಲು ಕೆಲಸ ಮಾಡುತ್ತಿದ್ದಾರೆ.
ರಾವಣನಾಗಿ 'ರಾಕಿಂಗ್ ಸ್ಟಾರ್' ಯಶ್
ಈ ಮಹಾಕಾವ್ಯ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರು ಲಂಕೇಶ್ವರ 'ರಾವಣ'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮತ್ತು ಅವರ ಜಾಗತಿಕ ಅಭಿಮಾನಿಗಳಿಗೆ ಅತ್ಯಂತ ರೋಮಾಂಚನಕಾರಿ ಸಂಗತಿಯಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ಯಶ್ ಅವರು ತಮ್ಮದೇ ಸಂಸ್ಥೆಯಾದ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮೂಲಕ ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿಯೂ ಕೈಜೋಡಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ 'ಶ್ರೀರಾಮ'ನಾಗಿ ಹಾಗೂ ನಟಿ ಸಾಯಿ ಪಲ್ಲವಿ 'ಸೀತೆ'ಯಾಗಿ ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ, ಯಶ್ ಅವರ ರಾವಣನ ಲುಕ್ ಮತ್ತು ನಟನೆ ಇಡೀ ವಿಶ್ವದಾದ್ಯಂತ ಭಾರಿ ಕುತೂಹಲ ಮೂಡಿಸಿದೆ.

ಆಸ್ಕರ್ ವಿಜೇತ ತಂತ್ರಜ್ಞರ ಸಾಥ್
ಪ್ರೈಮ್ ಫೋಕಸ್ ಸ್ಟುಡಿಯೋಸ್ ಅಡಿಯಲ್ಲಿ ನಮಿತ್ ಮಲ್ಹೋತ್ರಾ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಹಾಲಿವುಡ್ನಲ್ಲಿ 8 ಬಾರಿ ಆಸ್ಕರ್ ಪ್ರಶಸ್ತಿ ಗೆದ್ದಿರುವ ಪ್ರಖ್ಯಾತ ವಿಎಫ್ಎಕ್ಸ್ ಸಂಸ್ಥೆ 'DNEG' ಈ ಚಿತ್ರದ ದೃಶ್ಯವೈಭವದ ಜವಾಬ್ದಾರಿ ಹೊತ್ತಿದೆ. ಪ್ರೊಡಕ್ಷನ್ ಡಿಸೈನ್, ಅಂತರರಾಷ್ಟ್ರೀಯ ಮಟ್ಟದ ಸಾಹಸ ಸಂಯೋಜನೆ ಮತ್ತು ವಸ್ತ್ರವಿನ್ಯಾಸಕ್ಕಾಗಿ ಪ್ರಪಂಚದ ಮೂಲೆ ಮೂಲೆಗಳಿಂದ ಅತ್ಯುತ್ತಮ ತಂತ್ರಜ್ಞರನ್ನು ಕರೆತರಲಾಗಿದೆ. ಭಾರತದ ಸಿನಿಮಾವೊಂದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ತಂತ್ರಜ್ಞರು ಏಕಕಾಲಕ್ಕೆ ಕೆಲಸ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಎರಡು ಭಾಗಗಳಲ್ಲಿ ರಿಲೀಸ್
ಕೇವಲ ಒಂದು ಸಿನಿಮಾವಾಗಿರದೆ ಭಾರತೀಯ ಪುರಾಣದ ಹೆಮ್ಮೆಯ ಸಂಕೇತವಾಗಿ ಮೂಡಿಬರುತ್ತಿರುವ ಈ 'ರಾಮಾಯಣ' ಎರಡು ಭಾಗಗಳ ಜಾಗತಿಕ ಮಹಾಕಾವ್ಯವಾಗಿ ತೆರೆಗೆ ಬರಲಿದೆ. ಭಾಗ 1 2026ರ ದೀಪಾವಳಿ ಹಬ್ಬದ ವಿಶೇಷವಾಗಿ ವಿಶ್ವದಾದ್ಯಂತ ಐಮ್ಯಾಕ್ಸ್ ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಭಾಗ 2ರ ಸಿನಿಮಾ 2027ರ ದೀಪಾವಳಿಗೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕನ್ನಡದ ಯಶ್ ಅವರ ನಿರ್ಮಾಣ ಮತ್ತು ನಟನೆಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಾಯಿಸಲಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
4000 ಕೋಟಿ ಬಜೆಟ್; ಭಾರತದ ಅತ್ಯಂತ ದುಬಾರಿ ಸಿನಿಮಾ
ಇದು ಕೇವಲ ಭಾರತದ ಅತಿ ದೊಡ್ಡ ತಂತ್ರಜ್ಞರ ಸಿನಿಮಾ ಮಾತ್ರವಲ್ಲ, ದೇಶದ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಬಜೆಟ್ನ ಸಿನಿಮಾವಾಗಿದೆ. ವರದಿಗಳ ಪ್ರಕಾರ, ಈ ಎರಡು ಭಾಗಗಳ ಮಹಾಕಾವ್ಯಕ್ಕಾಗಿ ಬರೋಬ್ಬರಿ ₹4000 ಕೋಟಿಗೂ ಅಧಿಕ ಜಂಟಿ ಬಜೆಟ್ ಹೂಡಿಕೆ ಮಾಡಲಾಗುತ್ತಿದೆ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಅವರ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಅವರ 'ರಾವಣ'ನ ಪಾತ್ರ ಕೇವಲ ಒಂದು ಆಯಾಮದ ವಿಲನ್ ಆಗಿರುವುದಿಲ್ಲ. ಬದಲಿಗೆ ರಾವಣನಲ್ಲಿದ್ದ ಶಿವಭಕ್ತಿ, ಆತನ ಸಂಗೀತ ಜ್ಞಾನ ಮತ್ತು ಒಬ್ಬ ಸಮರ್ಥ ರಾಜನಾಗಿದ್ದ ಆತನ ಸದ್ಗುಣಗಳ ಜೊತೆಗೆ, ಕೇವಲ ಅಹಂಕಾರ ಮತ್ತು ಕೋಪದಿಂದ ಆತ ಹೇಗೆ ವಿನಾಶದತ್ತ ಸಾಗಿದ ಎನ್ನುವುದನ್ನು ಅತ್ಯಂತ ವಿಭಿನ್ನವಾಗಿ ತೋರಿಸಲಾಗುತ್ತಿದೆ. ಯಶ್ ಅವರ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಸ್ಟಾರ್ಡಮ್ಗೆ ತಕ್ಕಂತೆ ಈ ಪಾತ್ರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸುಳಿವು ನೀಡಿದ್ದಾರೆ.













Click it and Unblock the Notifications