ಗುಜರಾತ್: ಜನರ ಜೀವ ಉಳಿಸಲು ನದಿಗೆ ಹಾರಿದ್ದ ಮಾಜಿ ಶಾಸಕನಿಗೆ ಬಿಜೆಪಿ ಟಿಕೆಟ್
ಅಹಮದಾಬಾದ್, ನ.10 : ಗುಜರಾತ್ನ ಮೋರ್ಬಿಯಲ್ಲಿ ಸಂಭವಿಸಿದ ಮಾರಣಾಂತಿಕ ಸೇತುವೆ ದುರಂತ ಇನ್ನು ಜನರ ಮನಸ್ಸಿನಿಂದ ಅಳಿಸಿಲ್ಲ. ಸಂತ್ರಸ್ತರ ಮನೆಗಳಲ್ಲಿ ಇನ್ನೂ ಕಣ್ಣೀರಿನ ಕೋಡಿ ಹರಿಯುತ್ತಿದೆ. ಈ ಘಟನೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆ ಮೇಲೂ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಇದರ ಬೆನ್ನಲ್ಲೆ ಗುರುವಾರ ಭಾರತೀಯ ಜನತಾ ಪಾರ್ಟಿ ಗುಜರಾತ್ ವಿಧಾನಸಭಾ ಚುನಾವಣಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜನರ ಜೀವ ಕಾಪಾಡಲು ಮಚು ನದಿಗೆ ಇಳಿದಿದ್ದ ಮಾಜಿ ಶಾಸಕರಿಗೆ ಟಿಕೆಟ್ ನೀಡಿದೆ.
ಗುಜರಾತ್ ಚುನಾವಣೆ: ಬಿಜೆಪಿಯಿಂದ ರವೀಂದ್ರ ಜಡೇಜಾ ಪತ್ನಿ, ಹಾರ್ದಿಕ್ ಪಟೇಲ್ ಕಣಕ್ಕೆ
ಈ ಮೂಲಕ ಹಾಲಿ ಶಾಸಕರನ್ನು ಚುನಾವಣಾ ಕಣದಿಂದ ಹೊರಗಿಟ್ಟು, ಜನರ ಮತಗಳನ್ನು ಪಡೆಯುವ ಲೆಕ್ಕಾಚಾರ ಹಾಕಿದೆ. ಸೇತುವೆ ದುರಂತ ಬಿಜೆಪಿಗೆ ದೊಡ್ಡ ಹೊಡೆತ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಬಯಸುತ್ತಿದೆ.
60 ವರ್ಷದ ಕಾಂತಿಲಾಲ್ ಅಮೃತಿಯಾ ದುರಂತ ನಡೆದ ಮೊರ್ಬಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿದ್ದ ಮಾಜಿ ಶಾಸಕ
ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ಮೊರ್ಬಿಯಲ್ಲಿರುವ ತೂಗು ಸೇತುವೆಯ ಕೇಬಲ್ಗಳು ಮುರಿದು ಬಿದ್ದು, ನೂರಾರು ಜನರು ನದಿಗೆ ಬಿದ್ದಿದ್ದರು. ಈ ವೇಳೆ 60 ವರ್ಷದ ಕಾಂತಿಲಾಲ್ ಅಮೃತಿಯ ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.
ಜೀವ ಉಳಿಸಲು ಮಾಜಿ ಶಾಸಕ ನದಿಗೆ ಹಾರಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಈ ವೇಳೆ ಅವರು ಹಲವು ಜನರನ್ನು ರಕ್ಷಿಸಿದ್ದರು.
ಸಂತ್ರಸ್ತರಿಗೆ ನೀಡಿದ ಸಹಾಯಹಸ್ತ ಟಿಕೆಟ್ಗೆ ಕಾರಣ
ಈ ಹಿಂದೆ ತಯಾರಿಸಲಾಗಿದ್ದ ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಕಾಂತಿಲಾಲ್ ಅಮೃತಿಯ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸೇತುವೆ ದುರಂತದ ವಳೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದವರ ಜೀವ ಉಳಿಲು ತಾವೇ ನದಿಗೆ ಧುಮುಕಿದ ಅವರ ಸಾಹಸದಿಂದಾಗಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಪಘಾತದ ಸಂದರ್ಭದಲ್ಲಿ ತೋರಿದ ಧೈರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಮೊರ್ಬಿ ಜನರ ಮರೆಯಾಲಾಗದ ಸೇತುವೆ ದುರಂತ
ಅಕ್ಟೋಬರ್ 29 ರ ಸಂಜೆ, ಮೊರ್ಬಿಯ ಮಚು ನದಿಯ ಸೇತುವೆಯು ಜನರ ಭಾರೀ ತೂಕ ಮತ್ತು ಅಸಮರ್ಪಕ ನವೀಕರಣದ ಕಾರ್ಯಗಳಿಂದಾಗಿ ಕುಸಿದಿತ್ತು. ಇದರ ಪರಿಣಾಮವಾಗಿ 135 ಮಂದಿ ಸಾವನ್ನಪ್ಪಿದ್ದು, 177 ಮಂದಿಯನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಸೇತುವೆ ನಿರ್ವಹಣಾ ಗುತ್ತಿಗೆಯನ್ನು ಗುಜರಾತ್ ಮೂಲದ ಗಡಿಯಾರ ತಯಾರಕ ಒರೆವಾ ಅವರಿಗೆ ನೀಡಿತ್ತು. ಇದು ಭಾರಿ ಆಕ್ರೋಶಕ್ಕೂ ಕಾರಣವಾಗಿತ್ತು.
ಗಡಿಯಾರಗಳು, ಕೈಗಡಿಯಾರಗಳು, ಫ್ಯಾನ್ಗಳು, ಇ-ಬೈಕ್ಗಳು ಮತ್ತು ಎಲ್ಇಡಿ ದೀಪಗಳನ್ನು ತಯಾರಿಸಲು ಹೆಸರುವಾಸಿಯಾದ ಒರೆವಾ, ಸಾರ್ವಜನಿಕ ಮೂಲಸೌಕರ್ಯಗಳನ್ನು ದುರಸ್ತಿ ಮಾಡುವಲ್ಲಿ ಅನುಭವದ ಕೊರತೆಯ ಹೊರತಾಗಿಯೂ ಸೇತುವೆಯನ್ನು ನಿರ್ವಹಿಸಲು 15 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.
ಪ್ರಕರಣದಲ್ಲಿ ಕಂಪನಿಯ ಅಧಿಕಾರಿಗಳು, ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಆದರೆ ಒರೆವಾದ ಉನ್ನತ ಮುಖ್ಯಸ್ಥರು ನಾಪತ್ತೆಯಾಗಿದ್ದಾರೆ.
ಜಡೇಡಾ ಪತ್ನಿ, ಹಾರ್ದಿಕ್ ಪಟೇಲ್ಗೆ ಟಿಕೆಟ್
ಗುಜರಾತ್ ಚುನಾವಣೆಗೆ ಬಿಜೆಪಿ ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 182 ವಿಧಾನಸಭಾ ಸ್ಥಾನಗಳಲ್ಲಿ 160 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
2019 ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರನ್ನು ಗುಜರಾತ್ ವಿಧಾನಸಭಾ ಚುನಾವಣೆಗೆ ಜಾಮ್ನಗರ ಉತ್ತರ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಸೇಪ್ಡೆಗೊಂಡ ಹಾರ್ದಿಕ್ ಪಟೇಲ್ ಕೂಡ ಗುರುವಾರ ಘೋಷಿಸಲಾಗಿರುವ 160 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿದ್ದಾರೆ.
ಗುಜರಾತ್ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.