Gujarat Elections: ನಿಮ್ಮ ಗೆಲುವಿಗಿಂತ ನಮ್ಮ ಸೋಲಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ- ಬಿಜೆಪಿಗೆ ಎಎಪಿ ತಿರುಗೇಟು
ನವದೆಹಲಿ, ಡಿಸೆಂಬರ್ 9: ನಿಮ್ಮ ಗೆಲುವಿಗಿಂತ ನಮ್ಮ ಸೋಲಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ ಎಂದು ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ(Gujarat Election Results 2022) ಕುರಿತು ಅವರು ಮಾಧ್ಯಮಗಳಿಗೆ ಮಾತನಾಡಿದ್ದಾರೆ.
ಎಎಪಿಯ ರಾಘವ್ ಚಡ್ಡಾ ಅವರು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಗೆಲುವಿಗಾಗಿ ಬಿಜೆಪಿಯನ್ನು ಅಭಿನಂದಿಸಿದ್ದಾರೆ.
Breaking:ತುಂಗಭದ್ರಾ ಯೋಜನೆ ಆಂಧ್ರದಲ್ಲಿದೆ, ಸಿಬಿಎಸ್ಇ ಪಠ್ಯದಲ್ಲಿ ತಪ್ಪು ಮಾಹಿತಿ: ಎಎಪಿ
ಆಮ್ ಆದ್ಮಿ ಪಕ್ಷವು '41 ಲಕ್ಷಕ್ಕೂ ಹೆಚ್ಚು ಗುಜರಾತಿಗಳ ಹೃದಯವನ್ನು ಗೆದ್ದಿದೆ' ಎಂದು ತಿಳಿಸಿದ್ದಾರೆ.
ಸುದ್ದಿವಾಹಿನಿ 'ಎನ್ಡಿಟಿವಿ' ಜೊತೆ ಮಾತನಾಡಿದ ಅವರು, 'ಬಿಜೆಪಿಯು ಎರಡು ಚುನಾವಣೆಗಳಲ್ಲಿ ಸೋತಿದೆ. ಹಿಮಾಚಲ ಪ್ರದೇಶ ಹಾಗೂ ದೆಹಲಿಯ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪರಾಭವಗೊಂಡಿದೆ ಎಂದು ಹೇಳಿದ್ದಾರೆ.
'ನಿಮ್ಮ ಗೆಲುವಿಗಿಂತ ಹೆಚ್ಚು ಚರ್ಚೆ ನಮ್ಮ ಸೋಲಿನ ಬಗ್ಗೆ ನಡೆಯುತ್ತಿದೆ. ನಾವು ಗುಜರಾತ್ನಲ್ಲಿ ಶೇ 13ರಷ್ಟು ಮತಗಳನ್ನು ತೆಗೆದುಕೊಂಡಿದ್ದೇವೆ. ನಾವು 41 ಲಕ್ಷಕ್ಕೂ ಹೆಚ್ಚು ಗುಜರಾತಿಗಳ ಹೃದಯವನ್ನು ಗೆದ್ದಿದ್ದೇವೆ' ಎಂದು ರಾಘವ್ ಚಡ್ಡಾ ತಿಳಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಗುಜರಾತ್ ಕೋಟೆಯೊಳಗೆ ನುಗ್ಗಿ ನೇರ ಹೋರಾಟ ಮಾಡುತ್ತೇವೆ ಎಂದೂ ರಾಘವ್ ಚಡ್ಡಾ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ. ಶೇ 13ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ. ಗುಜರಾತ್ ಚುನಾವಣೆ ಫಲಿತಾಂಶದ ಮೂಲಕ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.
ದೆಹಲಿ ಹಾಗೂ ಪಂಜಾಬ್ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ್ದ ಪಕ್ಷಕ್ಕೆ ಗುಜರಾತ್ನಲ್ಲಿ ಹೆಚ್ಚು ಶಾಸಕರನ್ನು ಗೆಲ್ಲುವ ಬಗ್ಗೆ ಭರವಸೆ ಇತ್ತು. ಆದರೆ, ಎಎಪಿ ನಾಯಕರು ಹೊಂದಿದ್ದ ಭರವಸೆಗಳು ಹುಸಿಯಾಗಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಗೆಲುವು ಸಾಧಿಸಿದೆ. 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿಯನ್ನು ಪರಾಭವಗೊಳಿಸಿದೆ.
ಹಿಮಾಚಲ ಪ್ರದೇಶದಲ್ಲಿ ಎಎಪಿ ಯಾವುದೇ ಕ್ಷೇತ್ರವನ್ನು ಗೆದ್ದುಕೊಂಡಿಲ್ಲ. ಅಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಕೇವಲ 1.1 ಶೇಕಡಾ ಮತಗಳನ್ನು ಎಎಪಿ ಗಳಿಸಿದೆ.
ಗುಜರಾತ್ನಲ್ಲಿ ಸತತ ಏಳನೇ ಬಾರಿ ಬಿಜೆಪಿ ಅಧಿಕಾರ ಹಿಡಿದಿದೆ. ಗುಜರಾತ್ನ 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ 11 ಸ್ಥಾನಗಳಲ್ಲಿ ಜಯ ಗಳಿಸಿದೆ. ಎಎಪಿ ಐದು ಸ್ಥಾನಗಳನ್ನು ಪಡೆದುಕೊಂಡಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಬ್ಬರದ ಪ್ರಚಾರ ಮಾಡಿತ್ತು. 40 ರಿಂದ 50 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಪಕ್ಷದ ಪ್ರಮುಖ ನಾಯಕರು ಹೇಳಿಕೊಂಡಿದ್ದರು. ಸ್ವತಃ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಸಾರ್ವಜನಿಕ ಸಭೆ ಹಾಗೂ ರೋಡ್ ಶೋಗಳಲ್ಲಿ ಭಾಗವಹಿಸಿದ್ದರು.
ಗುಜರಾತ್ ಚುನಾವಣೆ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಎಪಿ ನಾಯಕರು ನೀಡಿದ್ದ ಭರವಸೆಗಳು ಗುಜರಾತ್ನಲ್ಲಿ ಕೆಲಸ ಮಾಡಿಲ್ಲ. ಶಾಲೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ವಿದ್ಯುತ್ನಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಎಎಪಿ ನಾಯಕರು ಮಾತನಾಡಿದ್ದರು. ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುಜರಾತ್ನಲ್ಲಿ ಪ್ರಚಾರ ಕೈಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹಾಗೂ ಹಿಂದುತ್ವದ ಅಲೆಯು ಗುಜರಾತ್ನಲ್ಲಿ ಕೆಲಸ ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಬಿಜೆಪಿಯ ಅಭೂತಪೂರ್ವ ಗೆಲುವು ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಆಘಾತ ನೀಡಿದೆ ಎಂದೇ ಹೇಳಬಹುದು.
ಈಗಿನ ಸಿಎಂ ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅದೇ ರೀತಿ, ಇಸುದಾನ ಗಧ್ವಿ ಅವರನ್ನು ಎಎಪಿ ಚುನಾವಣಾ ಅಭ್ಯರ್ಥಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
ದ್ವಾರಕಾ ಜಿಲ್ಲೆಯ ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಸುದಾನ್ ಗಧ್ವಿ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಮುಲುಭಾಯ್ ಬೇರಾ ಅವರು ಗಧ್ವಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎಎಪಿ ಸಿಎಂ ಅಭ್ಯರ್ಥಿ ಅಭ್ಯರ್ಥಿ 19,000 ಅಧಿಕ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.