ಗುಜರಾತ್: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಆಯ್ಕೆ
ಗಾಂಧಿನಗರ, ಡಿಸೆಂಬರ್ 10: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ.
ಇಂದು (ಡಿಸೆಂಬರ್ 10) ಗುಜರಾತ್ನ ಗಾಂಧಿನಗರದಲ್ಲಿ ಹೊಸದಾಗಿ ಆಯ್ಕೆಯಾದ ಭಾರತೀಯ ಜನತಾ ಪಕ್ಷದ (BJP) ಶಾಸಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ವರದಿಗಳ ಪ್ರಕಾರ, ಪಾರ್ಡೊ ಶಾಸಕ ಕಾನು ದೇಸಾಯಿ ಭೂಪೇಂದ್ರ ಪಟೇಲ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಅದಕ್ಕೆ ಎಲ್ಲಾ ಶಾಸಕರ ಅವಿರೋಧವಾಗಿ ಅನುಮೋದನೆ ನೀಡಿದರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅರ್ಜುನ್ ಮುಂಡಾ ಅವರು ಕೂಡ ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಭಾಗವಹಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್ ಅವರೊಂದಿಗೆ ಭೂಪೇಂದ್ರ ಪಟೇಲ್ ಅವರು ನವದೆಹಲಿಗೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರೊಂದಿಗೆ ಮಾತಕತೆ ನಡೆಸಲಿದ್ದಾರೆ. ಡಿಸೆಂಬರ್ 12 ರ ಸೋಮವಾರದಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಔಪಚಾರಿಕ ಆಹ್ವಾನವನ್ನು ನೀಡಲಿದ್ದಾರೆ.
ಸಭೆಯ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹಾರ್ದಿಕ್ ಪಟೇಲ್, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸಿದೆ. ಇದರಿಂದ ಗುಜರಾತ್ ಮತ್ತಷ್ಟು ಪ್ರಬಲವಾಗುತ್ತದೆ. ಮುಂದಿನ 5 ರಿಂದ ಹತ್ತು ವರ್ಷಗಳಲ್ಲಿ ಇಲ್ಲಿ ಅಭಿವೃದ್ಧಿ ಪರ್ವವೇ ಆರಂಭವಾಗಲಿದೆ ಎಂದು ಹೇಳಿದರು.
'ನನಗೆ ಗೊತ್ತಿಲ್ಲ, ನಾನು ಮೊದಲಿನಿಂದಲೂ ಕೇವಲ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದೇನೆ. ಪಕ್ಷವು ನನಗೆ ಯಾವುದೇ ಪಾತ್ರವನ್ನು ವಹಿಸಿದರೂ ನಾನು ಸ್ವೀಕರಿಸುತ್ತೇನೆ' ಎಂದು ಅವರು ಸಚಿವ ಸಂಪುಟದ ಬಗ್ಗೆ ಕೇಳಿದಾಗ ಹೇಳಿದರು.
ಬಿಜೆಪಿ ಶಾಸಕ ಹರ್ಷ ಸಾಂಘ್ವಿ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ ಗೆಲ್ಲಲು ಪ್ರತಿಪಕ್ಷಗಳು ಎಲ್ಲ ಆರೋಪಗಳನ್ನು ಮಾಡಿದ್ದರು. ಆದರೆ, ಜನರೇ ಅವರಿಗೆ ಉತ್ತರ ನೀಡಿದ್ದಾರೆ.
'ಈ ಚುನಾವಣೆಗಳು ಅಧಿಕಾರಕ್ಕಾಗಿ ಅಲ್ಲ, ಈ ಚುನಾವಣೆಗಳು ಸಂಬಂಧ ಮತ್ತು ನಂಬಿಕೆಗಾಗಿ ನಡೆದಿವೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಗೆದ್ದಿದೆ' ಎಂದು ಅವರು ಹೇಳಿದರು.
ಗುಜರಾತ್ನಲ್ಲಿ ಸತತ ಏಳನೇ ಬಾರಿ ಬಿಜೆಪಿ ಅಧಿಕಾರ ಹಿಡಿದಿದೆ. ಗುಜರಾತ್ನ 182 ಸ್ಥಾನಗಳ ಪೈಕಿ 156 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ 11 ಸ್ಥಾನಗಳಲ್ಲಿ ಜಯ ಗಳಿಸಿದೆ. ಎಎಪಿ ಐದು ಸ್ಥಾನಗಳನ್ನು ಪಡೆದುಕೊಂಡಿದೆ.