ಮಹದಾಯಿ ನದಿ ನೀರು ಹಂಚಿಕೊಳ್ಳುವುದು ಅನಿವಾರ್ಯ:ಪರಿಕ್ಕರ್
ಪಣಜಿ, ಜನವರಿ 04: ಮಹದಾಯಿ ನದಿಯು ಗೋವಾದಲ್ಲಿ 52 ಕಿ.ಮೀ. ಹರಿದರೆ, ಕರ್ನಾಟಕದಲ್ಲಿ 35 ಕಿ.ಮೀ ಮತ್ತು ಮಹಾರಾಷ್ಟ್ರದಲ್ಲಿ 16 ಕಿ.ಮೀ. ಹರಿಯುತ್ತದೆ ನದಿಯು ಮೂರು ರಾಜ್ಯಗಳಲ್ಲಿ ಹರಿಯುವುದರಿಂದ ನೀರನ್ನು ಹಂಚಿಕೊಳ್ಳುವುದು ಅನಿವಾರ್ಯ. ಮೂರೂ ರಾಜ್ಯಗಳಿಗೆ ಮಹದಾಯಿ ನೀರಿನ ಮೇಲೆ ಹಕ್ಕಿದೆ' ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಹೇಳಿದ್ದಾರೆ.
'ನ್ಯಾಯಮಂಡಳಿಯ ಆದೇಶದ ಮೂಲಕ ಕರ್ನಾಟಕಕ್ಕೆ ನೀರಿನ ಪಾಲು ದೊರೆಯದು ಎಂದು ಯಾರಾದರೂ ನಂಬಿದ್ದರೆ ಅವರು ಭ್ರಮಾಲೋಕದಲ್ಲಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ, ಕರ್ನಾಟಕವು ಮಹದಾಯಿ ನೀರನ್ನು ಬೇರೆಡೆಗೆ ತಿರುಗಿಸುವುದು ಅಥವಾ ಬೇರೆ ನದಿ ಪಾತ್ರಕ್ಕೆ ಹರಿಸುವುದಕ್ಕೆ ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕವು ಮಹದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು 'ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ಪ್ರಕಾರ, ನೀರಿನ ಕೊರತೆ ಇರುವ ನದಿ ಪಾತ್ರದಿಂದ ನೀರನ್ನು ಬೇರೆಡೆಗೆ ತಿರುಗಿಸುವುದಕ್ಕೆ ಅವಕಾಶ ಇಲ್ಲ. ಮಹದಾಯಿ ನದಿಯಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ನಾವು ದಾಖಲೆ ಸಮೇತ ಸಾಬೀತು ಮಾಡಿದ್ದೇವೆ' ಎಂದು ಪರಿಕ್ಕರ್ ತಿಳಿಸಿದ್ದಾರೆ.
ಮಹದಾಯಿ ನದಿಯ ನೀರನ್ನು ಇತರ ರಾಜ್ಯಗಳ ಜತೆ ಹಂಚಿಕೊಳ್ಳುವುದು ಅನಿವಾರ್ಯ ಆದರೆ ಈ ವಿಚಾರದಲ್ಲಿ ಗೋವಾದ ಹಿತಾಸಕ್ತಿ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.












Click it and Unblock the Notifications