ಉತ್ತರ ಪ್ರದೇಶ: ಡಾ. ಕಫೀಲ್ ಖಾನ್ ಸಹೋದರನ ಮೇಲೆ ಗುಂಡಿನ ದಾಳಿ
ಗೋರಖ್ಪುರ, ಜೂನ್ 11: ಉತ್ತರ ಪ್ರದೇಶದ ಗೋರಖ್ಪುರದ ಆಸ್ಪತ್ರೆಯಲ್ಲಿ ನಡೆದ ಶಿಶುಗಳ ಸರಣಿ ಸಾವಿನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಆರೋಪಿ ಡಾ. ಕಫೀಲ್ ಖಾನ್ ಅವರ ಸಹೋದರ ಮೇಲೆ ಗುಂಡಿನ ದಾಳಿ ನಡೆದಿದೆ.
ಉದ್ಯಮಿ ಆಗಿರುವ ಖಾಶಿಫ್ ಜಮೀಲ್ ಮೇಲೆ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್ನಲ್ಲಿ ಬಂದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ಹರಿದ ಬಸ್: 6 ಮಂದಿ ಸಾವು
ಜಮೀಲ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.
ಜಮೀಲ್ ಅವರ ಕತ್ತಿನ ಭಾಗಕ್ಕೆ ಗುಂಡು ಹೊಕ್ಕಿದ್ದು, ಅದನ್ನು ಹೊರತೆಗೆಯಲು ತುರ್ತು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಎಂದು ಡಾ. ಕಫೀಲ್ ಖಾನ್ ತಿಳಿಸಿದರು.
ಗುಂಡನ್ನು ಹೊರ ತೆಗೆಯಲಾಗಿದ್ದು, ಜಮೀಲ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರನ್ನು 48 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಜಮೀಲ್ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯಾವುದೇ ನಿರ್ದಿಷ್ಟ ಕಾರಣಗಳು ತಿಳಿಯುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಬಳಿಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯೋಗಿ ಆದಿತ್ಯನಾಥ ಅವರ ಬಳಿ ಆಮ್ಲಜನಕಕ್ಕೆ ಹಣವಿಲ್ಲದೆ ಹೋದಾಗ ಡಾ. ಕಫೀಲ್ ಅವರು ಮಕ್ಕಳನ್ನು ಉಳಿಸಿದರು. ಅದರ ಪರಿಣಾಮ ಅವರನ್ನು ಜೈಲಿನ ಕಂಬಿ ಹಿಂದೆ ಇರಿಸಲಾಯಿತು. ಈಗ ಅವರ ಸಹೋದರನ ಮೇಲೆ ಗುಂಡು ಹಾರಿಸಲಾಗಿದೆ.
ದ್ವೇಷ ಭಾಷಣಗಳು, ಹಿಂಸಾಚಾರ, ರಕ್ತಪಾತ ಮತ್ತು ಗುಂಡಿನ ದಾಳಿಯ ಕೊಡುಗೆಗಳನ್ನು ನಿಮ್ಮ ಅಚ್ಛೇ ದಿನ್ ನೀಡುತ್ತಿರುವುದಕ್ಕೆ ಮೋದಿಜಿ ಅವರಿಗೆ ಧನ್ಯವಾದಗಳು ಎಂದು ಮೇವಾನಿ ಟ್ವೀಟ್ ಮಾಡಿದ್ದಾರೆ.
2017ರ ಆಗಸ್ಟ್ ತಿಂಗಳಿನಲ್ಲಿ ಗೋರಖ್ಪುರದ ಬಿಆರ್ಡಿ ಆಸ್ಪತ್ರೆಯಲ್ಲಿ ಒಂದು ವಾರದ ಅವಧಿಯಲ್ಲಿಯೇ 60ಕ್ಕೂ ಅಧಿಕ ಹಸುಳೆಗಳು ಮೃತಪಟ್ಟಿದ್ದವು. ಆಮ್ಲಜನಕದ ಪೂರೈಕೆಯ ಕೊರತೆಯಿಂದ ಈ ಮಕ್ಕಳು ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು.
This is the price you pay for being the brother of Dr. Kafeel who exposed Yogi gov. Your brother will be shot at, your mother Gauri Lankesh will be killed, your Professors Dabholkars, Kalburgis, Pansares will be killed. U bloody activist shut your mouth pic.twitter.com/rcCwRMJ86H
— Jignesh Mevani (@jigneshmevani80) 10 June 2018
ಆದರೆ, ಶಿಶುಗಳ ಸಾವಿಗೆ ಆಮ್ಲಜನಕದ ಕೊರತೆಯ ವರದಿಗಳನ್ನು ಉತ್ತರ ಪ್ರದೇಶ ಸರ್ಕಾರ ತಳ್ಳಿಹಾಕಿತ್ತು. ಮಕ್ಕಳ ವಿಭಾಗದ ಉಸ್ತುವಾರಿಯಾಗಿದ್ದ ಡಾ. ಖಾನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಖಾನ್ ಅವರು ಎಂಟು ತಿಂಗಳ ಕಾಲ ಜೈಲಿನಲ್ಲಿದ್ದರು. ಖಾನ್ ಅವರ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.