ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ಯೋಧನ ವಿರುದ್ಧ ಬಿಎಸ್ಎಫ್ ಕಿಡಿ
ನವದೆಹಲಿ, ಜ. 10: ಗಡಿ ರೇಖೆಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಹೀಗಾಗಿ, ಅದೆಷ್ಟೋ ಬಾರಿ ಯೋಧರು ಖಾಲಿ ಹೊಟ್ಟೆಯಲ್ಲೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ ಎಫ್) ವಿರುದ್ಧ ಯೋಧ ತೇಜ್ ಬಹಾದೂರ್ ಯಾದವ್ ಅವರು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಎಸ್ಎಫ್ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರನ್ನು ನಿರ್ಲಕ್ಷಿಸಿ, ಆತನಿಗೆ ಹಿಂಬಡ್ತಿ ನೀಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಯೋಧ ಯಾದವ್ ಆರೋಪಗಳ ಬಗ್ಗೆ ಉತ್ತರ ನೀಡುವ ಬದಲಿಗೆ ಆಗ ಆತನ ವಿರುದ್ಧ ವಾಕ್ಸಮರಕ್ಕೆ ಮುಂದಾಗಿದೆ ಬಿಎಸ್ಎಫ್, ಯಾದವ್ ಒಬ್ಬ ಸೋಮಾರಿ ಯೋಧನೆಂದು ಟೀಕೆ ಮಾಡಿರುವುದಲ್ಲದೆ, ಸೇವೆಗೆ ಸೇರಿದಾಗಿನಿಂದ ಆತನ ವರ್ತನೆ ಸರಿಯಿಲ್ಲ. ಅನುಮತಿ ಇಲ್ಲದೇ ರಜೆ ತೆಗೆದುಕೊಳ್ಳುವುದು, ಕೆಲಸದಲ್ಲಿ ಸೋಮಾರಿತನ, ಅಶ್ರದ್ಧೆ ತೋರುವುದು ಆತನ ನಿತ್ಯಕಾಯಕವಾಗಿದ್ದವು. ಈಗಲೂ ಆತ ಹಾಗೆಯೇ ಇದ್ದಾನೆ. ಅನುಚಿತ ಹಾಗೂ ಅಸಭ್ಯ ವರ್ತನೆಗಳನ್ನು ತೋರುವ ಈತ ಹಿರಿಯ ಅಧಿಕಾರಿಗಳೊಂದಿಗೆ ಅಗೌರವವಾಗಿ ವರ್ತಿಸುತ್ತಾನೆಂದು ಪುಂಖಾನುಪುಂಖವಾಗಿ ಆರೋಪಗಳ ಸರಮಾಲೆ ಪೋಣಿಸುತ್ತಿದ ಬಿಎಸ್ಎಫ್.
ಹಿನ್ನೆಲೆ: ಜಮ್ಮು ಕಾಶ್ಮೀರದ ಗಡಿಯಲ್ಲಿ ಸೇವೆಯಲ್ಲಿ ನಿರತರಾಗಿದ್ದ ತೇಜ್ ಬಹಾದೂರ್ ಯಾದವ್, ಊಟದ ವಿಚಾರದಲ್ಲಿ ಬಿಎಸ್ಎಫ್ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ವೀಡಿಯೋ ತಯಾರಿಸಿ ಅದರ ತುಣುಕುಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು.
ನಾಲ್ಕು ವೀಡಿಯೋ ಕ್ಲಿಪಿಂಗ್ ಗಳಲ್ಲಿ, ಸೈನಿಕರ ಊಟಕ್ಕಾಗಿ ಕೇಂದ್ರ ಸರ್ಕಾರ ನೀಡುವ ಹಣ ದುರ್ಬಳಕೆಯಾಗುತ್ತಿದೆ. ಧವಸ, ಧಾನ್ಯಗಳನ್ನು ಬಿಎಸ್ಎಫ್ ನ ಹಿರಿಯ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಯಾದವ್ ಆರೋಪಿಸಿದ್ದರಲ್ಲದೆ, ಕಳಪೆ ಸೌಕರ್ಯಗಳಲ್ಲಿ ಸೈನಿಕರು ಜೀವನ ಸಾಗಿಸುತ್ತಿರುವುದನ್ನು ಹೇಳಿದ್ದರು.
ಈ ವೀಡಿಯೋಗಳು ಸೋಮವಾರ ರಾತ್ರಿಯಿಂದಲೇ ವೈರಲ್ ಆಗಿದ್ದಲ್ಲದೆ, ಅದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರಿಗೂ ಮುಟ್ಟಿತು. ತಕ್ಷಣವೇ ಸ್ಪಂದಿಸಿದ್ದ ರಾಜ್ ನಾಥ್ ಸಿಂಗ್, ಬಿಎಸ್ಎಫ್ ಅಧಿಕಾರಿಗಳಿಗೆ ಈ ಬಗ್ಗೆ ವಿವರ ನೀಡುವಂತೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದರು.












Click it and Unblock the Notifications