ಬಿಎಸ್ಎಫ್ ಪ್ರಕರಣ: ಮೋದಿ ವಿರುದ್ಧ ಪಾಕ್ ಮಾಧ್ಯಮಗಳ ಪ್ರಹಾರ
ನವದೆಹಲಿ, ಜ. 10: ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಕಾವಲು ಕಾಯುತ್ತಿರುವ ಬಿಎಸ್ ಎಫ್ ಯೋಧರಿಗೆ ಕಳಪೆ ಊಟದ ವ್ಯವಸ್ಥೆ ನೀಡಲಾಗುತ್ತಿದೆ ಎಂದು ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಎಂಬಾತ ಮಾಡಿದ್ದ ಆರೋಪಗಳನ್ನು ಪಾಕಿಸ್ತಾನ ಮಾಧ್ಯಮಗಳು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹಣಿಯಲು ಬಳಸಿಕೊಂಡಿವೆ.
ತನ್ನ ಟೀಕೆಗಳನ್ನು ವೀಡಿಯೊ ತುಣುಕುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತೇಜ್ ಬಹದ್ದೂರ್ ಹಾಕಿದ್ದ. ಇದು ಇದೀಗ ದೇಶಾದ್ಯಂತ ಸುದ್ದಿ ಮಾಡಿದೆ. ಭಾರತೀಯ ಮಾಧ್ಯಮಗಳಲ್ಲಿ ಬಿಎಸ್ಎಫ್ ಯೋಧರ ಬವಣೆಗಳ ಬಗ್ಗೆ ಚರ್ಚೆ ಆರಂಭವಾಗಿದ್ದರೆ, ಅತ್ತ, ಪಾಕಿಸ್ತಾನದಲ್ಲಿ ಈ ಪ್ರಸಂಗವನ್ನು ಮೋದಿ ಸರ್ಕಾರದ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಲು ಬಳಸಲಾಗುತ್ತಿದೆ.
ಪಾಕಿಸ್ತಾನದ ಪ್ರಮುಖ ಸುದ್ದಿ ವಾಹಿನಿಯಾದ ಜಿಯೋ ಟಿವಿ, 'ಮೋದಿ ಸರ್ಕಾರಕ್ಕೆ ಮಂಗಳಾರತಿ ಎತ್ತಿದ ಬಿಎಸ್ಎಫ್ ಯೋಧ' ಎಂಬರ್ಥದ ಹೆಡ್ ಲೈನ್ ಗಳನ್ನು ಬಳಸಿ ಇಡೀ ಸುದ್ದಿಗೆ ಸಂಕುಚಿತ ದೃಷ್ಟಿಕೋನ ನೀಡಿದೆ.
ಇದೊಂದೇ ವಾಹಿನಿಯಲ್ಲದೆ, ಪಾಕಿಸ್ತಾನದ ಇನ್ನೂ ಕೆಲವಾರು ವಾಹಿನಿಗಳು ಈ ಪ್ರಕರಣವನ್ನು ಭಾರತದ ಕಳಂಕ, ಶೇಮ್ ಇಂಡಿಯಾ ಎಂಬ ಹೆಡ್ ಲೈನ್ ಗಳೊಂದಿಗೆ ಬಿತ್ತರಿಸಿರುವುದಾಗಿ ಮೂಲಗಳು ತಿಳಿಸಿವೆ.