ಯೋಧ ಯಾದವ್ ನನ್ನು ಬಂಧಿಸಿಲ್ಲ: ಹೈಕೋರ್ಟ್ ಗೆ ಕೇಂದ್ರದ ಸ್ಪಷ್ಟನೆ
ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿದ್ದ ಯೋಧ ತೇಜ್ ಬಹದ್ದೂರ್ ಪತ್ನಿ ಶರ್ಮಿಳಾ; ರಕ್ಷಣಾ ಇಲಾಖೆಯ ಸ್ಪಷ್ಟನೆಯಿಂದ ಶರ್ಮಿಳಾಗೆ ಪತಿಯೊಂದಿಗೆ ಎರಡು ದಿನ ಕಳೆಯುವ ಅವಕಾಶ.
ನವದೆಹಲಿ, ಫೆಬ್ರವರಿ 10: ಗಡಿಯಲ್ಲಿ ಕಾವಲು ಕಾಯುತ್ತಿರುವ ಯೋಧರಿಗೆ ಭಾರತೀಯ ಸೇನೆಯಿಂದ ಕಳಪೆ ಆಹಾರ ಪೂರೈಕೆಯಾಗುತ್ತಿರುವುದನ್ನು ವೀಡಿಯೋ ಮಾಡಿ, ಆ ವೀಡಿಯೊ ಕ್ಲಿಪಿಂಗ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಬಿಎಸ್ ಎಫ್ ಯೋಧ ತೇಜ್ ಬಹಾದೂರ್ ಯಾದವ್ ಅವರನ್ನು ಬಂಧಿಸಿಲ್ಲ ಹಾಗೂ ಅವರನ್ನು ಮತ್ತೊಂದು ಬೆಟಾಲಿಯನ್ ಗೆ ವರ್ಗಾಯಿಸಲಾಗಿದೆ ಎಂದು ರಕ್ಷಣಾ ಇಲಾಖೆಯು ದೆಹಲಿ ಹೈಕೋರ್ಟ್ ಗೆ ವರದಿ ನೀಡಿದೆ.[ತೇಜ್ ಬಹದೂರ್ ಯಾದವ್, ಯೋಧ ಆರೋಪ!! ಕಳಪೆ ಆಹಾರ ಪೂರೈಕೆ !!!]
ಕಳಪೆ ಆಹಾರ ಕುರಿತಂತೆ ದೇಶದ ಗಮನ ಸೆಳೆದಿದ್ದ ಯಾದವ್ ಅವರು ಕೆಲ ದಿನಗಳ ನಂತರ ಕುಟುಂಬದ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ತಮಗೆ ತನ್ನ ಪತಿಯನ್ನು ಹುಡುಕಿಕೊಡಬೇಕೆಂದು ಯಾದವ್ ಪತ್ನಿ ಶರ್ಮಿಳಾ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಅರ್ಜಿಯಲ್ಲಿ ವಿವಾದ ಎಬ್ಬಿಸಿದ್ದ ಹಿನ್ನೆಲೆಯಲ್ಲಿ ಯಾದವ್ ಅವರನ್ನು ಅಕ್ರಮವಾಗಿ ಬಂಧನದಲ್ಲಿಸಿರಬಹುದೆಂಬ ಶಂಕೆಯನ್ನು ಶರ್ಮಿಳಾ ವ್ಯಕ್ತಪಡಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಾದವ್ ಅವರ ಬಗ್ಗೆ ಮಾಹಿತಿ ನೀಡುವಂತೆ ರಕ್ಷಣಾ ಇಲಾಖೆಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಶುಕ್ರವಾರ ಮಾಹಿತಿ ನೀಡಿದ ರಕ್ಷಣಾ ಇಲಾಖೆ, ಅವರನ್ನು ಜಮ್ಮು-ಕಾಶ್ಮೀರ ಗಡಿ ವಲಯದಿಂದ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದೆ.
ರಕ್ಷಣಾ ಇಲಾಖೆಯಿಂದ ಸ್ಪಷ್ಟನೆ ಬಂದ ನಂತರ, ಹೈಕೋರ್ಟ್, ಶರ್ಮಿಳಾ ಅವರಿಗೆ ತಮ್ಮ ಪತಿಯಿರುವ ಸ್ಥಳಕ್ಕೆ ಹೋಗಿ ಭೇಟಿಯಾಗಲು ಅವಕಾಶ ನೀಡುವಂತೆ ರಕ್ಷಣಾ ಇಲಾಖೆಗೆ ಸೂಚಿಸಿರುವುದಲ್ಲದೆ ಆಕೆಯು ಪತಿಯೊಟ್ಟಿಗೆ ಎರಡು ದಿನ ಉಳಿಯುವ ಅವಕಾಶ ಕೊಡಬೇಕೆಂದು ಹೇಳಿದೆ.












Click it and Unblock the Notifications