ನಟ ದರ್ಶನ್ ಕೇಸ್ನಿಂದ ಹಿಂದೆ ಸರಿದ ಲಾಯರ್, ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರ ಕಾನೂನು ಹೋರಾಟದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟ ದರ್ಶನ್ ತಮ್ಮ ವಕೀಲರನ್ನು ದಿಢೀರ್ ಬದಲಾಯಿಸಿದ್ದು, ಹೊಸ ಲಾಯರ್ ಎಂಟ್ರಿಯಾಗುತ್ತಿದ್ದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದುಬಂದಿದೆ.
ಸುಪ್ರೀಂ ಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ
ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಈ ಹಿಂದೆ ಒಂದು ವರ್ಷದ ಸುದೀರ್ಘ ಗಡುವನ್ನು ನಿಗದಿಪಡಿಸಿತ್ತು. ಆದರೆ, ಈಗ ಎಂಟ್ರಿ ಕೊಟ್ಟಿರುವ ನೂತನ ವಕೀಲರ ಮೂಲಕ ದರ್ಶನ್ ಸುಪ್ರೀಂಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. "ನಮಗೆ ನಿಗದಿಪಡಿಸಿರುವ ಒಂದು ವರ್ಷದ ಅವಧಿಯನ್ನು ಮರುಪರಿಶೀಲಿಸಬೇಕು ಮತ್ತು ಆ ಗಡುವನ್ನು ಕಡಿತಗೊಳಿಸಬೇಕು" ಎಂದು ಅರ್ಜಿಯಲ್ಲಿ ವಿನಂತಿಸಿದ್ದಾರೆ. ಅಲ್ಲದೆ ವಿಚಾರಣೆಯನ್ನು ಆದಷ್ಟು ಬೇಗ ಮುಗಿಸುವ ತಂತ್ರದ ಭಾಗವಾಗಿ ಈ ಹೆಜ್ಜೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ವಕಾಲತ್ತಿನಿಂದ ಹಿಂದೆ ಸರಿದ ವಕೀಲ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಇಷ್ಟು ದಿನ ದರ್ಶನ್ ಪರ ವಾದ ಮಂಡಿಸುತ್ತಿದ್ದ ಖ್ಯಾತ ವಕೀಲ ಸುನಿಲ್ ಕುಮಾರ್ ಅವರು ಈ ಪ್ರಕರಣದ ವಾದದಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಈ ಸಂಬಂಧ ಅವರು 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಮಾತ್ರವಲ್ಲದೆ, ಪ್ರಕರಣದ ಇತರ ಆರೋಪಿಗಳಾದ ಲಕ್ಷ್ಮಣ್ ಮತ್ತು ನಾಗರಾಜ್ ಸೇರಿದಂತೆ ಮೂವರ ಪರ ವಕಾಲತ್ತಿನಿಂದಲೂ ತಾವು ಮುಕ್ತರಾಗುತ್ತಿರುವುದಾಗಿ ಕೋರ್ಟ್ಗೆ ತಿಳಿಸಿದ್ದಾರೆ.
ದರ್ಶನ್ ಪರ ಕಣಕ್ಕಿಳಿದ ಹೊಸ ವಕೀಲ ಯಾರು?
ಸುನಿಲ್ ಕುಮಾರ್ ಅವರು ಕೇಸ್ನಿಂದ ಹಿಂದೆ ಸರಿಯುತ್ತಿದ್ದಂತೆ, ದರ್ಶನ್ ಪರವಾಗಿ ರಾಜ್ಯದ ಹಿರಿಯ ಮತ್ತು ಅತ್ಯಂತ ಪ್ರಭಾವಿ ವಕೀಲರಾದ ಹಷ್ಮತ್ ಪಾಷಾ ಅವರು ಕಣಕ್ಕಿಳಿದಿದ್ದಾರೆ. ನ್ಯಾಯಾಲಯದ ಕಲಾಪದ ವೇಳೆ ಸ್ವತಃ ಜಡ್ಜ್ ಅವರೇ ದರ್ಶನ್ಗೆ, "ನಿಮ್ಮ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಕಾಲತ್ತು ವಹಿಸಿಕೊಂಡಿದ್ದಾರೆ" ಎಂಬ ವಿಷಯವನ್ನು ತಿಳಿಸಿದ್ದಾರೆ.
ಇದೇ ವೇಳೆ ಪ್ರಕರಣದ ಎಲ್ಲ ಪ್ರಮುಖ ದಾಖಲೆಗಳನ್ನು ನೂತನ ವಕೀಲರಿಗೆ ಹಸ್ತಾಂತರಿಸುವಂತೆ ಕೋರ್ಟ್ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಅವರ ಪರ ನ್ಯಾಯವಾದಿಗಳು, "ಕೇಸ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಈಗಾಗಲೇ ದರ್ಶನ್ ಕುಟುಂಬದವರಿಗೆ ತಲುಪಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ಲಾಯರ್ ಹಷ್ಮತ್ ಪಾಷಾ ಅವರ ಎಂಟ್ರಿಯಿಂದ ದರ್ಶನ್ ಅವರ ಬೇಲ್ ಮತ್ತು ಕೇಸ್ನ ಮುಂದಿನ ವಿಚಾರಣೆಗೆ ಯಾವ ರೀತಿಯ ಹೊಸ ತಿರುವು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆಗಳಿಗೆ ಈಗ ಭಾರಿ ವೇಗ ಸಿಕ್ಕಿದೆ. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಈ ಹಿಂದೆ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ದೇಶದ ಅತ್ಯುನ್ನತ ನ್ಯಾಯಾಲಯವು, ಯಾವುದೇ ಕಾರಣಕ್ಕೂ ಕಾಲಹರಣ ಮಾಡದೆ ಒಂದು ವರ್ಷದ ಒಳಗೆ ಇಡೀ ಪ್ರಕರಣದ ತನಿಖೆ ಹಾಗೂ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಕಟ್ಟುನಿಟ್ಟಿನ ಗಡುವು ವಿಧಿಸಿತ್ತು.
ಸುಪ್ರೀಂ ಕೋರ್ಟ್ ನೀಡಿದ್ದ ಈ ಖಡಕ್ ನಿರ್ದೇಶನದ ಬೆನ್ನಲ್ಲೇ ಸೆಷನ್ಸ್ ನ್ಯಾಯಾಲಯವು ಈಗ ಪ್ರಕರಣವನ್ನು ಚುರುಕುಗೊಳಿಸಲು ಗಂಭೀರ ಹೆಜ್ಜೆ ಇಟ್ಟಿದೆ. ನ್ಯಾಯಾಧೀಶರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹತ್ವದ ಆದೇಶ ನೀಡಿದ್ದಾರೆ. ಇನ್ನು ಮುಂದೆ ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ಕಡ್ಡಾಯವಾಗಿ ಸಾಕ್ಷಿಗಳ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ವಾರದಲ್ಲಿ 5ನೇ ದಿನವೂ ವಿಚಾರಣೆಗೆ ಹಾಜರಾಗಲು ಸಿದ್ಧರಿರಬೇಕು ಎಂದು ವಕೀಲರಿಗೂ ಸೂಚನೆ ನೀಡಿದೆ.













Click it and Unblock the Notifications