ಕೂಚ್ ಬೆಹಾರ್ ಗಡಿಯಲ್ಲಿ ಫೈರಿಂಗ್: ಬಿಎಸ್ಎಫ್ ವ್ಯಾಪ್ತಿ ವಿಸ್ತರಣೆ ವಿರುದ್ಧ ಕೆರಳಿದ ಬಂಗಾಳ
ಕೋಲ್ಕತ್ತಾ, ನವೆಂಬರ್ 12: ಕೂಚ್ ಬೆಹಾರ್ನ ಗಡಿಯಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಜಾನುವಾರು ಕಳ್ಳಸಾಗಣೆದಾರರ ಹತ್ಯೆಯು ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವೆ ವಿವಾದಕ್ಕೆ ಕಾರಣವಾಗಿದೆ. ಇದರ ಮಧ್ಯೆ ಪಶ್ಚಿಮ ಬಂಗಾಳ ಸರ್ಕಾರವು ಬಿಎಸ್ಎಫ್ ಅಧಿಕಾರವನ್ನು ವಿಸ್ತರಿಸುವುದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲು ಯೋಜನೆ ಹಾಕಿಕೊಂಡಿದೆ.
ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತರಾಷ್ಟ್ರೀಯ ಗಡಿಯಿಂದ ಅಸ್ತಿತ್ವದಲ್ಲಿರುವ 15 ಕಿಲೋಮೀಟರ್ನಿಂದ 50 ಕಿಮೀ ವ್ಯಾಪ್ತಿಯೊಳಗೆ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನ ಮಾಡುವುದಕ್ಕೆ ಗಡಿ ಭದ್ರತಾ ಪಡೆಗೆ ಅಧಿಕಾರ ನೀಡಲು ಕೇಂದ್ರ ಸರ್ಕಾರವು ಕಳೆದ ತಿಂಗಳು ಬಿಎಸ್ಎಫ್ ಕಾಯ್ದೆಗೆ ತಿದ್ದುಪಡಿ ತಂದಿದೆ.
ಪಂಜಾಬ್ ವಿಧಾನಸಭೆಯಲ್ಲಿ ಬಿಎಸ್ಎಫ್ ವ್ಯಾಪ್ತಿ ವಿಸ್ತರಣೆ ವಿರುದ್ಧ ನಿರ್ಣಯ ಅಂಗೀಕಾರ
ಕೇಂದ್ರ ಸರ್ಕಾರದ ಹೊಸ ತಿದ್ದುಪಡಿಗೆ ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಸಂಬಂಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರಕ್ಕೆ ಪತ್ರ ಬರೆದ ಮಮತಾ ಬ್ಯಾನರ್ಜಿ
"ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ನಾವು ಪತ್ರ ಬರೆದಿದ್ದೇವೆ. ಈ ಹಿಂದೆ, ಅವರು 15 ಕಿಮೀ ವ್ಯಾಪ್ತಿಯನ್ನು ಹೊಂದಿದ್ದರು, ಅದಾಗ್ಯೂ, ಬಲೂರ್ಘಾಟ್ ಅಥವಾ ಕೂಚ್ ಬೆಹಾರ್ನಲ್ಲಿ ಗುಂಡಿನ ದಾಳಿಯ ಘಟನೆಗಳು ನಡೆದಿದ್ದವು. ಈಗ ಅದನ್ನು 50 ಕಿ.ಮೀ.ಗೆ ವಿಸ್ತರಿಸಿದ್ದಾರೆ. ಇದು ದೇಶದ ಸಂಯುಕ್ತ ರಾಷ್ಟ್ರದ ರಚನೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಾಗಿದೆ," ಎಂದು ಬ್ಯಾನರ್ಜಿ ಅಕ್ಟೋಬರ್ 25ರಂದು ಆಡಳಿತಾತ್ಮಕ ಪರಿಶೀಲನಾ ಸಭೆಯಲ್ಲಿ ಹೇಳಿದ್ದರು.
ಶುಕ್ರವಾರ ಕೂಚ್ ಬೆಹಾರ್ನ ಗಡಿಯಲ್ಲಿ ಇಬ್ಬರು ಬಾಂಗ್ಲಾದೇಶಿ ವ್ಯಕ್ತಿಗಳು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಬಿಎಸ್ಎಫ್ ಪಡೆಗಳು ಗುಂಡಿಕ್ಕಿ ಕೊಂದ ಘಟನೆಯು ನಡೆದಿದ್ದು, ಈ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.
ಕೇಂದ್ರ ಸರ್ಕಾರದ ನಿರ್ಧಾರ ವಾಪಸ್ ಪಡೆಯುವ ಬಗ್ಗೆ ಒತ್ತಾಯ
"ಗಡಿಯಲ್ಲಿ ಏನಾಯಿತು ಎಂಬುದನ್ನು ಒಮ್ಮೆ ನೋಡಿ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುತ್ತದೆ. ಬಿಎಸ್ಎಫ್ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ. ಪೊಲೀಸರು ಮತ್ತು ಬಿಎಸ್ಎಫ್ ನಡುವೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಾವು ನಿಯಮ 185 ರ ಅಡಿಯಲ್ಲಿ ವಿಧಾನಸಭೆಯಲ್ಲಿ ಈ ಕುರಿತು ಚರ್ಚಿಸುತ್ತೇವೆ. ಬಿಎಸ್ಎಫ್ ಅಧಿಕಾರ ವ್ಯಾಪ್ತಿಯ ವಿಸ್ತರಣೆಯನ್ನು ಹಿಂತೆಗೆದುಕೊಳ್ಳುವ ಬೇಡಿಕೆಯನ್ನು ಇಡುತ್ತೇವೆ," ಎಂದು ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.
ಬಿಎಸ್ಎಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ನಿರ್ಣಯ
ಭಾರತದ ಗಡಿ ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪಂಜಾಬ್ ವಿಧಾನಸಭೆಯು ಗುರುವಾರ ನಿರ್ಣಯವನ್ನು ಅಂಗೀಕರಿಸಿದೆ. ರಾಜ್ಯದ ಪೊಲೀಸರಿಗೆ ಇದರಿಂದ ಅವಮಾನವಾಗಲಿದೆ ಎಂದಿರುವ ಪಂಜಾಬ್, ಕೇಂದ್ರವು ಈ ಅಧಿಸೂಚನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಕೇವಲ ಇಬ್ಬರು ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕೇಂದ್ರದ ಆದೇಶವನ್ನು ತಿರಸ್ಕರಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಪೊಲೀಸರಿಗೆ ಅವಮಾನ ಮಾಡುವ ಆದೇಶ ಎಂದು ಉಲ್ಲೇಖ
"ಕೇಂದ್ರ ಸರ್ಕಾರವು ಗಡಿ ಭದ್ರತಾ ಪಡೆ (ಬಿಎಸ್ಎಫ್) ವ್ಯಾಪ್ತಿಯನ್ನು 15 ಕಿ.ಮೀ ನಿಂದ 50 ಕಿ.ಮೀ ವರೆಗೆ ವಿಸ್ತರಿಸುವ ನಿರ್ಧಾರವು ರಾಜ್ಯ ಪೊಲೀಸರು ಮತ್ತು ಪಂಜಾಬ್ನ ಜನರ ಮೇಲಿನ ಅಪನಂಬಿಕೆ ಸಂಕೇತವಾಗಿದೆ. ಇದರಿಂದ ರಾಜ್ಯದ ಪೊಲೀಸರಿಗೆ ಮತ್ತು ಜನರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಪಂಜಾಬ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ. ಬಿಎಸ್ಎಫ್ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಗಡಿಯಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿ ವಿಸ್ತರಣೆ
ಗುಜರಾತ್ನಲ್ಲಿ ಬಿಎಸ್ಎಫ್ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 80 ಕಿಮೀ ಪ್ರದೇಶದಿಂದ 50 ಕಿಮೀಗೆ ತಗ್ಗಿಸಲಾಗಿದೆ. ರಾಜಸ್ಥಾನದಲ್ಲಿ 50 ಕಿಮೀ ದೂರದಲ್ಲಿ ಹಾಗೆಯೇ ಉಳಿದಿದ್ದು, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಈ ಹಿಂದಿನಂತೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಗಡಿ ಭದ್ರತಾ ಪಡೆ ಕಾಯಿದೆ, 1968ರ ಸೆಕ್ಷನ್ 139, ಭದ್ರತಾ ಪಡೆಯ ಅಧಿಕಾರ ವ್ಯಾಪ್ತಿಯನ್ನು ಸೂಚಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಅಂತಹ ಯಾವುದೇ ಆದೇಶವನ್ನು ಸಂಸತ್ ಪ್ರತಿ ಸದನದ ಮುಂದೆ ಇಡಲಿದ್ದು, ಅದನ್ನು ಮಾರ್ಪಾಡು ಮಾಡುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಸಂಸತ್ ಹೊಂದಿರುತ್ತದೆ.