ಸತ್ಯ ಹೇಳಿದ್ದ ಯೋಧ ಪ್ಲಂಬರ್ ಆಗಿ ನಿಯೋಜನೆ!
ನವದೆಹಲಿ, ಜ. 11: ಗಡಿ ಕಾಯುವ ಸೈನಿಕರಿಗೆ ಕಳಪೆ ಆಹಾರ ಪೂರೈಸುತ್ತಿರುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕರಾಳ ಮುಖ ಅನಾವರಣಗೊಳಿಸಿದ್ದ ಯೋಧ ತೇಜ್ ಬಹಾದೂರ್ ಯಾದವ್ ಅವರನ್ನು ಅವರು ಕಾರ್ಯ ನಿರ್ವಹಿಸುತ್ತಿದ್ದ ಜಮ್ಮು ಕಾಶ್ಮೀರ ಗಡಿ ಭಾಗದಿಂದ ಎತ್ತಂಗಡಿ ಮಾಡಿ ಅವರನ್ನು ಕೊಳಾಯಿ ರಿಪೇರಿ ಮಾಡುವ ಕೆಲಸಕ್ಕೆ ದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರವಷ್ಟೇ ಗಡಿಯಲ್ಲಿ ಸೈನಿಕರು ಪಡುತ್ತಿರುವ ಯಾತನೆಯನ್ನು ವೀಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಹಾಕಿದ್ದ ಯಾದವ್, ಗಡಿಯಲ್ಲಿ ಕಾವಲು ಕಾಯುವ ಸೈನಿಕರು, ಕಳಪೆ ಆಹಾರ ತಿನ್ನುವ ಹಾಗೂ ಆಹಾರ ಕೊರತೆ ಎದುರಿಸುವ ಪ್ರಸಂಗಗಳು ಸಾಮಾನ್ಯವಾಗಿದ್ದು, ಇದಕ್ಕೆ ಬಿಎಸ್ ಎಫ್ ಅಧಿಕಾರಿಗಳೇ ನೇರ ಕಾರಣವೆಂದು ಆರೋಪಿಸಿದ್ದರು.

ಸರ್ಕಾರದಿಂದ ಸರಬರಾಜಾಗುವ ದಿನಸಿ ಮತ್ತಿತರ ಉಪಯುಕ್ತ ಪದಾರ್ಥಗಳನ್ನು ಬಿಎಸ್ಎಫ್ ಅಧಿಕಾರಿಗಳು ಕ್ಯಾಂಪ್ ನ ಹೊರಗಡೆ ಜನ ಸಾಮಾನ್ಯರಿಗೆ ಮಾರಿಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ಇದರ ಸತ್ಯಾಸತ್ಯತೆ ಬಯಲಾಗಲು ಕೇಂದ್ರ ಸರ್ಕಾರದಿಂದ ಸ್ವತಂತ್ರ್ಯ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.
ಆದರೆ, ಬಿಎಸ್ಎಫ್ ಯಾದವ್ ವಿರುದ್ಧವೇ ಹರಿಹಾಯ್ದಿತ್ತು. ಆತನೊಬ್ಬ ಮದ್ಯವ್ಯಸನಿ, ಅವಿಧೇಯ. ತನ್ನ ಹತಾಶ ಮನೋಭಾವನೆಯಿಂದಾಗಿ ಆತ ಹೀಗೆ ಆರೋಪಿಸಿದ್ದಾನೆಂದು ಹೇಳಿತ್ತು.












Click it and Unblock the Notifications