ಸಿಜೆಐ ದೀಪಕ್ ಮಿಶ್ರಾ ತೀರ್ಪು ನೀಡಲಿರುವ 7 ಪ್ರಮುಖ ಪ್ರಕರಣಗಳು
ನವದೆಹಲಿ, ಸೆಪ್ಟೆಂಬರ್ 24 : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತರಾಗಲಿದ್ದಾರೆ. ನಿವೃತ್ತರಾಗುವ ಮೊದಲು ಅವರು ಸಂವಿಧಾನಿಕ ಪೀಠದಿಂದ 7 ಪ್ರಮುಖ ತೀರ್ಪುಗಳು ನೀಡಲಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ದೀಪಕ್ ಮಿಶ್ರಾ ಅವರಷ್ಟು ಸಂವಿಧಾನಿಕ ಪೀಠದಲ್ಲಿ ಯಾವ ಮುಖ್ಯ ನ್ಯಾಯಮೂರ್ತಿಗಳು ಕುಳಿತಿಲ್ಲ. ಇನ್ನೂ ಒಂದು ವಾರ ಅವರು ಕಾರ್ಯ ನಿರ್ವಹಣೆ ಮಾಡಲಿದ್ದು, 6 ದಿನಗಳ ಕಾಲ ಕೋರ್ಟ್ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ
ಆಧಾರ್ನಿಂದ ಅಯೋಧ್ಯೆ ತನಕ ದೀಪಕ್ ಮಿಶ್ರಾ ಅವರು ಹಲವು ಪ್ರಮುಖ ಪ್ರಕರಣಗಳ ತೀರ್ಪನ್ನು ನೀಡಲಿದ್ದಾರೆ. ಸೆಕ್ಷನ್ 377 ಸಹ ಒಂದು ಪ್ರಮುಖ ಪ್ರಕರಣವಾಗಿತ್ತು. ಈ ಕುರಿತ ತೀರ್ಪನ್ನು ಈಗಾಗಲೇ ಸಂವಿಧಾನಿಕ ಪೀಠ ನೀಡಿದೆ.
ಗಾಂಧಿ ಜಯಂತಿ ಮರುದಿನದಂದು ಸಿಜೆಐಯಾಗಿ ರಂಜನ್ ಅಧಿಕಾರಕ್ಕೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗಾಯ್ ಅವರನ್ನು ನೇಮಿಸಲಾಗಿದೆ. 2019ರ ನವೆಂಬರ್ ತನಕ ರಂಜನ್ ಗೋಗಾಯ್ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ....ಪ್ರಮುಖ 8 ಪ್ರಕರಣಗಳು ಯಾವುವು? ಇಲ್ಲಿದೆ ಮಾಹಿತಿ....
'ಸುಪ್ರೀಂ ಕೋರ್ಟ್ 'ನರಭಕ್ಷಕ ಹುಲಿಯಲ್ಲ', ಸರಕಾರಗಳು ಹೆದರಬಾರದು'
ಆಧಾರ್ ಮಾನ್ಯತೆ
ಆಧಾರ್ ಕಾರ್ಡ್ ಮಾನ್ಯತೆ ಕುರಿತು ಹಲವು ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಪುಟ್ಟಸ್ವಾಮಿ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ತೀರ್ಪು ಬಾಕಿ ಇದೆ. ಆಧಾರ್ ಕಾರ್ಡ್ನಿಂದ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ ಎಂದು ಅರ್ಜಿಗಳನ್ನು ಸಲ್ಲಿಸಲಾಗಿದೆ. 40 ದಿನಗಳ ಕಾಲ ಸಂವಿಧಾನಿಕ ಪೀಠ ಅರ್ಜಿಗಳ ವಿಚಾರಣೆ ನಡೆಸಿ, 4 ತಿಂಗಳ ಹಿಂದೆ ತೀರ್ಪನ್ನು ಕಾಯ್ದಿರಿಸಲಾಗಿದೆ.
ಅಯೋಧ್ಯೆಯ ಭೂ ವಿವಾದ
ದಶಕಗಳ ಹಿಂದಿನ ಅಯೋಧ್ಯೆಯ ಭೂ ಹಂಚಿಕೆ ವಿವಾದದ ತೀರ್ಪು ಸಹ ಬಾಕಿ ಇದೆ. ಅಹಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. 2.77 ಎಕರೆ ಜಾಗವನ್ನು ರಾಮಜನ್ಮಭೂಮಿ, ಬಾಬ್ರೀ ಮಸೀದಿ ನಡುವೆ ಸಮವಾಗಿ ಹಂಚಿಕೆ ಮಾಡುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಾಗಿದೆ.
ಶಬರಿಮಲೆ ದೇವಾಲಯದ ತೀರ್ಪು
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಭೇಟಿ ನೀಡುವ ಕುರಿತ ವಿವಾದದ ತೀರ್ಪು ಸಹ ಬಾಕಿ ಇದೆ. ಹಲವಾರು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು, ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡುವಾಗ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳು ಇರಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ತೀರ್ಪು ಸಹ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಕೋರ್ಟ್ ಕಲಾಪ ಪ್ರಸಾರ
ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಲು ಅವಕಾಶ ನೀಡುವ ಕುರಿತು ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಪ್ರಾಯೋಗಿಕವಾಗಿ ಮಹತ್ವದ ಕೇಸುಗಳ ತೀರ್ಪನ್ನು ನೀಡುವಾಗ ಅವುಗಳನ್ನು ನೇರ ಪ್ರಸಾರ ಮಾಡುವ ಪ್ರಸ್ತಾವನೆ ಇದೆ. ಈ ಕುರಿತು ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ದೀಪಕ್ ಮಿಶ್ರಾ ಅವರು ತೀರ್ಪು ನೀಡಿದರೆ ಅದನ್ನು ನೇರ ಪ್ರಸಾರ ಮಾಡುವ ಸಾಧ್ಯತೆ ಇದೆ.
ಎಸ್ಸಿ/ಎಸ್ಟಿ ಮೀಸಲಾತಿ
2006ರಲ್ಲಿ ಎಂ.ನಾಗರಾಜು ಅವರು ನೀಡಿರುವ ತೀರ್ಪಿನ ಕುರಿತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಎಸ್ಸಿ/ಎಸ್ಟಿಯ ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ಮೀಸಲಾತಿ ನೀಡುವ ಪ್ರಕರಣ ವಿದಾಗಿದೆ. ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದೆ. ಆದರೆ, ಸುಪ್ರೀಂಕೋರ್ಟ್ ಐಎಎಸ್ ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಬಾರದು ಎಂದು ಅಭಿಪ್ರಾಯಪಟ್ಟಿದೆ. ಈ ವಿವಾದದ ಕುರಿತ ತೀರ್ಪು ಸಹ ಬಾಕಿ ಇದೆ.
ರಾಜಕಾರಣಿಗಳ ಕುರಿತು ತೀರ್ಪು
ಜನಪ್ರತಿನಿಧಿಗಳು ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈಗ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಅವರು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಯಮವಿದೆ. ಇದನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಸೆಕ್ಷನ್ 497 ಕುರಿತ ತೀರ್ಪು
ಐಪಿಸಿ ಸೆಕ್ಷನ್ 497ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪು ಬಾಕಿ ಇದೆ. ಮಹಿಳೆ ಇನ್ನೊಬ್ಬ ವ್ಯಕ್ತಿಯ ಪತ್ನಿ ಎಂಬುದು ತಿಳಿದಿದ್ದರೂ ಆತನ ಒಪ್ಪಿಗೆ ಇಲ್ಲದೇ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸುವುದು ಅತ್ಯಾಚಾರವಾಗುವುದಿಲ್ಲ, ವ್ಯಭಿಚಾರದ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂಬುದು ಕಾನೂನು. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.