ಸಿಬಿಎಸ್ಇ ಸೋರಿಕೆ ನಷ್ಟ, ಪಿಯುಸಿ ಗಣಿತ ಭಾರೀ ಕಷ್ಟ
ನವದೆಹಲಿ/ಬೆಂಗಳೂರು, ಮಾರ್ಚ್, 16: ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಗುಲ್ಲೆದ್ದಿದೆ. ಸಿಬಿಎಸ್ ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷೆ ಬರೆದು ಬಂದ ಅನೇಕ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ವಿಚಾರಣೆ ಅಗತ್ಯವೆಂದು ತೋರಿದರೆ ಮಾಹಿತಿ ಕಲೆಹಾಕಲಾಗುವುದು ಮತ್ತು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಜತೆಗೂ ಮಾತನಾಡಲಾಗುವುದು ಎಂದು ತಿಳಿಸಿದ್ದಾರೆ.[ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ 2016]
ಪ್ರಶ್ನೆ ಪತ್ರಿಕೆಯಲ್ಲಿದ್ದ 51 ಪ್ರಶ್ನೆಗಳು ವಾಟ್ಸಪ್ ನಲ್ಲಿ ಮೊದಲೆ ಹರಿದಾಡುತ್ತಿದ್ದವು ಎಂದು ರಾಂಚಿ, ಧನ್ ಬಾದ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ಸಿಬಿಎಸ್ ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ ನಡೆಯಲಿದ್ದು ಮತ್ತೊಂದು ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಆದರೂ ಆಶ್ಚರ್ಯವಿಲ್ಲ.
ಮಕ್ಕಳನ್ನು ಗಳಗಳನೆ ಅಳುವಂತೆ ಮಾಡಿದ ಗಣಿತ ಪರೀಕ್ಷೆ: ಇತ್ತ ಪಿಯುಸಿ ಗಣಿತ ಪರೀಕ್ಷೆ ಬರೆದು ಬಂದ ಕರ್ನಾಟಕದ ಮಕ್ಕಳು ಗಳಗಳನೇ ಅಳುತ್ತಿದ್ದಾರೆ. ಅತಿ ಕಠಿಣ ಗಣಿತದ ಪರೀಕ್ಷೆಯಾಗಿದೆ ಎಂದು ಮಕ್ಕಳು ಆರೋಪಿಸಿದ್ದಾರೆ. ಪಿಯುಸಿ ಗಣಿತ ಪರೀಕ್ಷೆಯನ್ನುಹೊಸದಾಗಿ ನಡೆಸಬೇಕು ಎಂದು ಆನ್ ಲೈನ್ ಪೆಟಿಶನ್ ಸಹ ಶುರುವಾಗಿದ್ದಾರೆ. ಸುಮಾರು 8 ಸಾವಿರ ಜನ ಸಹಿ ಮಾಡಿದ್ದಾರೆ.[ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ 2016 ವೇಳಾಪಟ್ಟಿ]
ವಿದ್ಯಾರ್ಥಿಗಳು ಹೇಳುವಂತೆ ಪ್ರಶ್ನೆ ಪತ್ರಿಕೆಯನ್ನು ಸಮರ್ಪಕವಾಗಿ ಉತ್ತರಿಸಬೇಕಾದರೆ ನಾಲ್ಕು ವರೆ ಗಂಟೆ ಕಾಲ ಬೇಕಾಗಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಕೆಲ ಪ್ರಶ್ನೆಗಳಿಗೆ ಉತ್ತರಿಸಲೇ ಸಾಧ್ಯವಿಲ್ಲ. ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯನ್ನು ಮೀರಿ ಪತ್ರಿಕೆ ತಯಾರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.