2nd Puc Result 2024: ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು- ಪಿಯುಸಿ ಟಾಪರ್
ಬೆಂಗಳೂರು, ಏಪ್ರಿಲ್ 10: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 10) ಬುಧವಾರ ಪ್ರಕಟವಾಗಿದೆ. ಈ ಬಾರಿ 84.87% ಬಾಲಕಿಯರು ಉತ್ತೀರ್ಣರಾಗಿದ್ದು, 76.98% ಬಾಲಕರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದರೆ, ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ಟಾಪರ್ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಜ್ಞಾನುಭನವಿ ಮತ್ತು ಕವಿತಾ ಬಿ.ವಿ 600ಕ್ಕೆ 596 ಅಂಕ ಪಡೆದಿದ್ದಾರೆ.

ಈ ಪೈಕಿ ಕಲಾ ವಿಭಾಗದ ಟಾಪರ್ ಆದ ವಿಜಯಪುರದ ವೇದಾಂತ್ ಜ್ಞಾನುಭನವಿ ತನ್ನ ಕುಟುಂಬದ ಪರಿಸ್ಥಿತಿಯನ್ನು ವಿವರಿಸುವ ವೇಳೆ ರಾಜ್ಯ ಸರ್ಕಾರದಿಂದ ಬಂದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದು ಹೇಳಿದ್ದಾನೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ದ್ವಿತೀಯ ಪಿ.ಯು.ಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು.
ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಗೃಹಲಕ್ಷ್ಮಿ ಆ ಕನಸನ್ನು ಸಾಕಾರಗೊಳಿಸಿದೆ. ನಮ್ಮ ಸರ್ಕಾರದ ಕಾರ್ಯಕ್ರಮವೊಂದು ನಿರೀಕ್ಷೆಗೂ ಮೀರಿದ್ದನ್ನು ಸಾಧಿಸಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ.' ಎಂದು ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ವ್ಯಂಗ್ಯ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ದ್ವಿತೀಯ ಪಿ.ಯು.ಸಿ ಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು.
— Siddaramaiah (@siddaramaiah) April 10, 2024
ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ… pic.twitter.com/IOGxBpkoLr
ಪಿಯುಸಿ ಟಾಪರ್ ಹೇಳಿದ್ದೇನು..?
'ನಮ್ಮ ತಂದೆ ಮೊದಲು ಕ್ಷೌರಿಕ ವೃತ್ತ ಮಾಡುತ್ತಿದ್ದರು. ಈಗ ಅವರಿಲ್ಲ ತೀರಿಕೊಂಡಿದ್ದಾರೆ. ಅಮ್ಮನೂ ಮನೆಯಲ್ಲೇ ಇದ್ದಾರೆ. ಮೊದಲು ಕೂಲಿ ಮಾಡಿ ಸಾಕುತ್ತಿದ್ದರು. ಈಗ ಅವರಿಗೆ ಅನಾರೋಗ್ಯ ಮನೆಯಲ್ಲೇ ಇದ್ದಾರೆ. ಸದ್ಯ ಮನೆಯ ಪರಿಸ್ಥಿತಿ ನೋಡಿಕೊಳ್ಳಲು ಸರ್ಕಾರದಿಂದ ಬರುವ ಎರಡು ಸಾವಿರ ರೂಪಾಯಿಯಿಂದ ಸಹಾಯವಾಗುತ್ತಿದೆ. ಇದರಿಂದ ನಮ್ಮ ಮನೆ ನಡೆಯುತ್ತಿದೆ' ಎಂದು ವಿಜಯಪುರದ ವೇದಾಂತ್ ಜ್ಞಾನುಭನವಿ ತಮ್ಮ ಮನೆಯ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾನೆ.












Click it and Unblock the Notifications