ಮಲೆಗಾಂವ್ ಸ್ಫೋಟ: ಸಾಧ್ವಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್
ಮುಂಬೈ, ಏಪ್ರಿಲ್ 25: ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಮಲೆಗಾಂಗ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
2008ರಲ್ಲಿ ಮಹಾರಾಷ್ಟ್ರದ ಮಲೆಗಾಂವ್ ನಲ್ಲಿ ನಡೆದ ಸ್ಫೋಟದಲ್ಲಿ 7 ಜನರು ಮೃತಪಟ್ಟು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.[ಮಾಲೆಗಾಂವ್ ಸ್ಫೋಟ : ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಿಲೀಫ್]

ಆದರೆ, ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನು ನಿರೀಕ್ಷಿಸುತ್ತಿರುವ ಲೆಫ್ಟಂನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಈ ಇಬ್ಬರೂ ಕಳೆದ ಎಂಟು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ, ಸಾಧ್ವಿ ಅವರು ವೈದ್ಯಕೀಯ ಕಾರಣಗಳಿಗಾಗಿ ಭೋಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.
2008ರ ಸೆಪ್ಟಂಬರ್ 29ರಂದು ಮುಂಬೈನಿಂದ ಸುಮಾರು 270 ಕಿ.ಮೀ. ದೂರದಲ್ಲಿರುವ ಮಾಲೆಗಾಂವ್ ನ ಎರಡು ಕಡೆ ಬಾಂಬ್ ಸ್ಫೋಟಗಳಾಗಿದ್ದವು. ಈ ಎರಡೂ ಸ್ಫೋಟ ಪ್ರಕರಣಗಳಲ್ಲಿ ಬಾಂಬ್ ಗಳನ್ನು ಬೈಕ್ ಗಳಲ್ಲಿ ಇಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು, ಸಾಧ್ವಿ ಪ್ರಗ್ಯಾ ಅವರನ್ನು ಅದೇ ವರ್ಷ ಅಕ್ಟೋಬರ್ ನಲ್ಲಿ, ಕರ್ನಲ್ ಶ್ರೀಕಾಂತ್ ಅವರನ್ನು ನವೆಂಬರ್ ನಲ್ಲಿ ಬಂಧಿಸಿದ್ದರು. ಈ ಇಬ್ಬರೂ, ಅಭಿನವ ಭಾರತ ಎಂಬ ಹಿಂದೂ ಪರ ಸಂಘಟನೆಯನ್ನು ಹುಟ್ಟುಹಾಕಿ ಮುಸ್ಲಿಂ ವಿರೋಧಿ ಹಾಗೂ ಇನ್ನಿತರ ವಿಧ್ವಂಸಕ ಕೃತ್ಯಗಳಿಗೆ ಕೈ ಹಾಕಿದ್ದರು ಎಂಬ ಆರೋಪವಿದೆ.
ಇವರ ಮುಸ್ಲಿಂ ವಿರೋಧಿ ಧೋರಣೆಯಿಂದಾಗಿಯೇ, ಮುಸ್ಲಿಮರು ಅಧಿಕವಾಗಿರುವ ಮಾಲೆಗಾಂವ್ ನಲ್ಲಿ ಸ್ಫೋಟ ನಡೆಸಲಾಗಿತ್ತು. ಮಾಲೆಗಾಂವ್ ನಲ್ಲಿ ಅಂದಾಜು ಶೇ. 79ರಷ್ಟು ಮುಸ್ಲಿಮರಿದ್ದಾರೆ.












Click it and Unblock the Notifications