ಸಿದ್ದರಾಮಯ್ಯ ಸಿಎಂ; ಹಾವೇರಿಯಲ್ಲಿ ಮೌನ ಮುರಿದ ಜಮೀರ್!
ಹಾವೇರಿ, ಜುಲೈ 23: "ಮುಂದಿನ ಸಿಎಂ ವಿಚಾರವಾಗಿ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನಮ್ಮದು ಹೈಕಮಾಂಡ್ ಪಕ್ಷ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ನಾಯಕರು. ಅವರೇ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ತೀರ್ಮಾನ ಮಾಡುತ್ತಾರೆ" ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಟಾಂಗ್ ನೀಡಿದರು.
ಶನಿವಾರ ಡಿ. ಕೆ. ಶಿವಕುಮಾರ್, "ಪಕ್ಷಕ್ಕೆ ಹಿನ್ನಡೆಯಾಗುವ ಯಾವುದೇ ಹೇಳಿಕೆಯನ್ನು ಯಾರೇ ಮಾತನಾಡಿದರೂ, ಅವರ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮ ತೆಗೆದುಕೊಳ್ಳಲಿದೆ" ಎಂದು ಜಮೀರ್ಗೆ ಎಚ್ಚರಿಕೆ ನೀಡಿದ್ದರು.
ಈ ಕುರಿತು ಹಾವೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, "ನಾವು ಹೈಕಮಾಂಡ್ ಹಾಕಿದ ಗೆರೆಯನ್ನು ದಾಟುವುದಿಲ್ಲ. ನನ್ನ ಅಭಿಪ್ರಾಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿಲ್ಲ" ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹುಟ್ಟುಹಬ್ಬ ಆಚರಿಸಲು ಮುಂದಾದರೆ ನಾವೆಲ್ಲಾ ಸೇರಿ ಅವರ ಜನ್ಮದಿನವನ್ನೂ ಇದೇ ರೀತಿ ಮಾಡುತ್ತೇವೆ. ಅಭಿಮಾನಿಗಳ ಒತ್ತಡದಿಂದ ಈಗ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇವೆ. ಇದಕ್ಕೆ ಕಾಂಗ್ರೆಸ್ ಪಕ್ಷದವರು ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ. ಕೆ. ಶಿವಕುಮಾರ್, ಎಂ. ಬಿ. ಪಾಟೀಲ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ನಾಯಕರು ಬರುತ್ತಿದ್ದಾರೆ" ಎಂದರು.
ಒಕ್ಕಲಿಗರ ಬಗ್ಗೆ ಮಾತಾಡಿ ಜಮೀರ್ ಎಡವಟ್ಟು ಮಾಡಿಕೊಂಡರೇ?
ಹೆಚ್ಚಿನ ಅಲ್ಪಸಂಖ್ಯಾತರು ಬರಬೇಕು
"ಸಿದ್ದರಾಮಯ್ಯ ಎಂದೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ನಾವು ದೆಹಲಿಗೆ ಹೋದಾಗ ಸಿದ್ದರಾಮಯ್ಯಗೆ ಸಾಕಷ್ಟು ಫೋನ್ ಬಂದವು. ಜನರ ಒತ್ತಡ ಜಾಸ್ತಿಯಾದಾಗ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬರಬೇಕೆಂದು ನಾನು ಓಡಾಡುತ್ತಿದ್ದೇನೆ. ಸಿದ್ದರಾಮಯ್ಯ ಋಣ ತೀರಿಸಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಕಾಲದಲ್ಲಿ ಸಾಕಷ್ಟು ಹಣ ಕೊಟ್ಟಿದ್ದಾರೆ. ನಾವೆಲ್ಲ ಅವರ ಋಣ ತೀರಿಸಬೇಕೋ?, ಬೇಡವೋ?" ಎಂದು ಜಮೀರ್ ಪ್ರಶ್ನಿಸಿದರು.
ಹಬ್ಬದ ವಾತಾವರಣ ನಿರ್ಮಾಣ
ಇದೇ ಸಂದರ್ಭದಲ್ಲಿ ಸಿದ್ದರಾಮೋತ್ಸವ ಪೂರ್ವ ಭಾವಿ ಸಭೆಯಲ್ಲಿ ಭಾಷಣ ಮಾಡಿದ ಜಮೀರ್, "ಜನ ಸಿದ್ದರಾಮಯ್ಯನವರ ಹುಟ್ಟಿದ ಹಬ್ಬವನ್ನು ನಾಡ ಹಬ್ಬದ ತರ ನೋಡಿದ್ದಾರೆ. ಸಿದ್ದರಾಮಯ್ಯನವರ ಬರ್ತಡೇ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. 21 ವರ್ಷಗಳಿಂದ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ನಾಲ್ಕು ತಿಂಗಳ ಹಿಂದಿನಿಂದಲೂ ಅವರ ಅಭಿಮಾನಿಗಳ ಒತ್ತಡ ಇತ್ತು. ಆದರೆ ಸಿದ್ದರಾಮಯ್ಯ ಸಾಹೇಬ್ರು ಒಪ್ಪಿರಲಿಲ್ಲಾ, ಕಳೆದ ತಿಂಗಳು ದೆಹಲಿಯಲ್ಲಿ ನಾವು 3 ದಿನ ಇದ್ದೆವು. ಅಂದು ಅವರ ಅಭಿಮಾನಿಗಳಿಂದ ನಿಮ್ಮ ಬರ್ತಡೆ ಆಚರಿಸುತ್ತೇವೆ 200 ಫೋನ್ಗಳು ಬಂದಿದ್ದವು, ಕೊನೆಗೆ ಕಾರ್ಯಕರ್ತರ ಒತ್ತಡಕ್ಕೆ ಒಪ್ಪಿಕೊಂಡಿದ್ದಾರೆ" ಎಂದು ತಿಳಿಸಿದರು.
ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ರ ಕಾರ್ಯಕರ್ತರು ಬಾಯಿಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ್ದ ಜಮೀರ್, "ನಾನು ಬಾಯಿ ಮುಚ್ಚೋದು ಸತ್ತಮೇಲೇನೆ, ನನ್ನ ಬಾಯಿ ಮುಚ್ಚಿಸೋಕೆ ಸಾಧ್ಯವಿಲ್ಲ. ನಾನೂ ಪಕ್ಷ ಪೂಜೆನೂ ಮಾಡ್ತೀನಿ, ಜೊತೆಗೆ ವ್ಯಕ್ತಿ ಪೂಜೇನು ಮಾಡುತ್ತೀನಿ, ನಾನು ನನ್ನ ಅಭಿಪ್ರಾಯ ಹೇಳಿಕೊಂಡಿದ್ದೇನೆ ಅಷ್ಟೇ, ಇದರಲ್ಲಿ ತಪ್ಪೇನಿದೆ ಎಂದು ಹುಬ್ಬಳ್ಳಿಯಲ್ಲಿ ತಿಳಿಸಿದ್ದರು.
ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ
ಸಿಎಂ ವಿಚಾರವಾಗಿ ಕೆಲವು ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಿರುವುದರ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ್ದ ಡಿ. ಕೆ. ಶಿವಕುಮಾರ್, ಪಕ್ಷದ ಬಗ್ಗೆ ನಿಜವಾಗಲೂ ಆಸಕ್ತಿ ಇದ್ದರೆ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಹೆಚ್ಚಿನ ಜನರನ್ನು ಪಕ್ಷಕ್ಕೆ ಕರೆ ತರುವತ್ತ ಗಮನಹರಿಸಿ. ಎಲ್ಲರೂ ತಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದಿದ್ದರು.
ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಜಮೀರ್ ಅಹ್ಮದ್ ಅವರು ನೀಡಿರುವ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, "ನನ್ನ ಲೆವೆಲ್ಗೆ ಮಾತನಾಡುವವರ ವಿಚಾರವನ್ನು ನಾನು ಮಾತನಾಡುತ್ತೇನೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಬಾಯಿ ಮುಚ್ಚಿಕೊಂಡು ಮಾಡಬೇಕು. ಎಲ್ಲರಿಗೂ ನಾನು ಈ ಮಾತನ್ನು ಹೇಳುತ್ತಿದ್ದೇನೆ" ಎಂದು ಖಡಕ್ ವಾರ್ನಿಂಗ್ ನೀಡಿದ್ದರು.