ವಿನಯ್ ಕುಲಕರ್ಣಿ ಧಾರವಾಡಕ್ಕೆ ಭೇಟಿ ನೀಡಲು ಕೋರ್ಟ್ ಅನುಮತಿ
ಬೆಂಗಳೂರು, ಡಿಸೆಂಬರ್ 04; ನ್ಯಾಯಾಲಯ ವಿಧಿಸಿದ್ದ ಷರತ್ತಿನಿಂದಾಗಿ ಬೆಳಗಾವಿ ಜೈಲಿನಿಂದ ಬಿಡುಗಡೆಯಾಗಿದ್ದರೂ ಧಾರವಾಡಕ್ಕೆ ಭೇಟಿ ನೀಡಲು ಸಾಧ್ಯವಾಗಿರದ ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ.
ಆದು ಮಾಮೂಲಿಯಾಗಲ್ಲ, ಅನಾರೋಗ್ಯಕ್ಕೆ ತುತ್ತಾಗಿ ತುರ್ತು ನಿಗಾ ಘಟಕ (ಐಸಿಯು)ನಲ್ಲಿರುವ ಸಹೋದರಿ ಭೇಟಿ ಮಾಡಲು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ವಿನಯ್ ಕುಲಕರ್ಣಿ ಅನಾರೋಗ್ಯದಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಸಹೋದರಿಯ ಕ್ಷೇಮ ವಿಚಾರಿಸಲು ಮೂರು ತಾಸುಗಳ ಕಾಲಾವಕಾಶ ಕೋರಿದ್ದರು. ಆ ಮನವಿಯನ್ನು ಮಾನ್ಯ ಮಾಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಿನಯ್ ಕುಲಕರ್ಣಿಗೆ ಅನುಮತಿ ಮಂಜೂರು ಮಾಡಿದೆ.

ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡುವವರೆಗೆ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಸುಪ್ರೀಂಕೋರ್ಟ್ ವಿಧಿಸಿತ್ತು. ಹಾಗಾಗಿ, ವಿನಯ್ ಕುಲಕರ್ಣಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಸಹೋದರಿ ವಿಜಯಲಕ್ಷ್ಮಿ ಪಾಟೀಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಮಾನ್ಯ ಮಾಡಿ, ಅನುಮತಿಯನ್ನು ಮಂಜೂರು ಮಾಡಿದ್ದಾರೆ.
ಷರತ್ತಿನ ಅನುಮತಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸುಮ್ಮನೆ ಅನುಮತಿ ನೀಡಿಲ್ಲ, ಷರತ್ತಿನ ಅನುಮತಿ ನೀಡಿದೆ. ಅದೆಂದರೆ ಬೆಂಗಳೂರಿನ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮೊದಲೇ ಮಾಹಿತಿ ನೀಡಬೇಕು, ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಬರುವ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಅವರನ್ನು ಕೇವಲ ಮೂರು ತಾಸುಗಳ ಕಾಲ ಭೇಟಿ ಮಾಡಬೇಕು, ಮೂರು ಗಂಟೆಗೂ ಅಧಿಕ ಸಮಯ ಧಾರವಾಡ ವ್ಯಾಪ್ತಿಯಲ್ಲಿ ಉಳಿಯುವಂತಿಲ್ಲ ಎಂದು ಹೇಳಿದೆ.
ಅಲ್ಲದೇ, ಪ್ರಾಸಿಕ್ಯೂಷನ್ ಸಾಕ್ಷ್ಯಗಳಿಗೆ ಬೆದರಿಕೆ ಹಾಕುವ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ. ಆಸ್ಪತ್ರೆಗೆ ಭೇಟಿ ಮಾಡುವುದನ್ನು ಹೊರತುಪಡಿಸಿ ಅಲ್ಲಿ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಪ್ರಾಸಿಕ್ಯೂಷನ್ನ ಯಾವುದೇ ಸಾಕ್ಷ್ಯಗಳನ್ನು ಭೇಟಿ ಮಾಡುವಂತಿಲ್ಲ ಎಂದು ಹಲವು ಷರತ್ತಗಳನ್ನು ನ್ಯಾಯಾಲಯ ವಿಧಿಸಿದೆ.
ಸುಪ್ರೀಂಕೋರ್ಟ್ ಕಳೆದ ಆಗಸ್ಟ್ನಲ್ಲಿ ನೀಡಿದ್ದ ನಿರ್ದೇಶನದಂತೆ ಕಠಿಣ ಷರತ್ತುಗಳನ್ನು ವಿಧಿಸಿ ವಿನಯ್ ಕುಲಕರ್ಣಿಯನ್ನು ವಿಶೇಷ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಈ ಪೈಕಿ, ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡುವವರೆಗೆ ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂಬ ಷರತ್ತನ್ನು ಸುಪ್ರೀಂಕೋರ್ಟ್ ವಿಧಿಸಿತ್ತು. ಹಾಗಾಗಿ ವಿನಾಯಿತಿ ಕೋರಿ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.












Click it and Unblock the Notifications