Dharwad Bandh: ನೇಹಾ ಹತ್ಯೆ ಖಂಡಿಸಿ ಧಾರವಾಡ ಬಂದ್ಗೆ ಕರೆ ನೀಡಿದ ಮುಸ್ಲಿಂ ಸಂಘಟನೆ
ಹುಬ್ಬಳ್ಳಿ, ಏಪ್ರಿಲ್ 21: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾಗಿರುವುದು ದುರ್ದೈವದ ಸಂಗತಿ. ನಮ್ಮ ಮಹಾನಗರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಘಟನೆಯನ್ನು ಖಂಡಿಸುತ್ತೇವೆ.
ನಮ್ಮ ಸಮುದಾಯದಿಂದ ನಾಳೆ (ಏ.22) ಅರ್ಧ ದಿನ ಸ್ವಯಂ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುತ್ತೇವೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಅಂಗಡಿ ಧಾರವಾಡ ಬಂದ್ ಇರಲಿದೆ. ಅಂಗಡಿಗಳ ಮೇಲೆ ಜಸ್ಟೀಸ್ ಫಾರ್ ನೇಹಾ ಅಂತ ಸ್ಟಿಕ್ಕರ್ ಹಚ್ಚುತ್ತೇವೆ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ಹೇಳಿದರು.

ಅಂಜುಮನ್ ಸಂಸ್ಥೆ ಮುಖಂಡರು ಇಂದು (ಏ.21) ನೇಹಾ ಮನೆಗೆ ತೆರಳಿ, ನೇಹಾ ತಂದೆ ನಿರಂಜನ ಹಿರೇಮಠ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಸ್ಮಾಯಿಲ್, ಫಯಾಜ್ ಮಾಡಿರುವುದು ಹೀನ ಕೆಲಸ. ಅವಳು ನಿರಂಜನ ಮಗಳಲ್ಲ, ನಮ್ಮ ಮಗಳು. ಕೊಲೆ ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಆಗಬೇಕು. ಈಗಾಗಲೇ ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಇದು ವಿಶೇಷ ಪ್ರಕರಣ ಎಂದು ತಿಳಿದು 90 ದಿನದಲ್ಲಿ ಪ್ರಕರಣ ಬಗೆಹರಿಸಬೇಕು. ಸಮಾಜ ಯಾವುದೇ ಇರಲಿ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ನಿನ್ನೆ (ಏ.20) ರಂದು ನಡೆದ ನಮ್ಮ ಸಭೆಯಲ್ಲಿ ಘಟನೆಯನ್ನು ಖಂಡಿಸಿದ್ದೇವೆ. ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಅಂಜುಮನ್ ಆವರಣದಿಂದ ಮೌನ ಮೆರವಣಿಗೆ ಮಾಡಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರನ್ನು ಇಡುತ್ತೇವೆ. ಫಯಾಜ್ ಪರ ಯಾರೂ ಮುಸ್ಲಿಂ ವಕೀಲರು ವಕಾಲತ್ತು ವಹಿಸಬಾರದು. ನಾವು ವಕೀಲರಿಗೆ ಹೇಳಿದ್ದೇವೆ ಅವರು ಒಪ್ಪಿದ್ದಾರೆ ಎಂದರು.
ಪ್ರಕರಣ ಮುಗಿಯವರೆಗೂ ನಮ್ಮ ಸಮಾಜ ಅವರ ಜೊತೆ ಇರತ್ತದೆ. ನಿರಂಜನ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಯಾರು ನೋಡದಂತಹ ಶಿಕ್ಷೆಯನ್ನು ದೇವರು ಫಯಾಜ್ಗೆ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಫಯಾಜ್ನ ತಂದೆ-ತಾಯಿ ಕೊಲೆಗೆ ಕೈ ಜೋಡಿಸಿದ್ದರೆ, ಅವರಿಗೂ ಶಿಕ್ಷೆ ನೀಡಲಿ. ಇಂತಹ ಕೆಲಸ ಯಾರೂ ಮಾಡಬೇಡಿ, ನಿಮ್ಮ ಭವಿಷ್ಯಕ್ಕಾಗಿ ಚೆನ್ನಾಗಿ ಓದಿ ಅಂತ ಎಲ್ಲಾ ಧರ್ಮದ ಮಕ್ಕಳಿಗೆ ನಾನು ಹೇಳುತ್ತೇನೆ. ಯಾರೂ ಲವ್ ಜಿಹಾದ್ ಪದ ಬಳಕೆ ಮಾಡಬಾರದು. ಲವ್ ಜಿಹಾದ್ ಕುರಿತು ನಾನು ಮಾತಾಡಲ್ಲ ಎಂದರು.












Click it and Unblock the Notifications