'ಫಾರೂಕ್ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ'
ಹುಬ್ಬಳ್ಳಿ, ಜೂನ್ 03 : ರಾಜ್ಯಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಕ್ ಮತಕ್ಕಾಗಿ 100 ಕೋಟಿ ರೂ. ಖರ್ಚು ಮಾಡುತ್ತೇನೆ ಎಂದು ಹೇಳಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಎಚ್ ಡಿ ಕುಮಾರಸ್ವಾಮಿ ಅವರು, ಕುಟುಕು ಕಾರ್ಯಾಚರಣೆ ಮಾಡಲು ಬಂದವರು ಮಾಧ್ಯಮದವರೇ ಎಂದು ನಮ್ಮ ಪಕ್ಷದವರಿಗೆ ಮೊದಲೇ ಗೊತ್ತಿತ್ತು ಎಂದರು.
ಟೈಮ್ಸ್ ನೌ ಸುದ್ದಿವಾಹಿನಿ ಮತ್ತು ಇಂಡಿಯಾ ಟುಡೇ ಪತ್ರಿಕೆ ನಡೆಸಿರುವ ಸ್ಟಿಂಗ್ ಆಪರೇಷನ್ ನಲ್ಲಿ, ಜೆಡಿಎಸ್ ಅಭ್ಯರ್ಥಿ, ಉದ್ಯಮಿ ಬಿಎಂ ಫಾರೂಕ್ ಸೇರಿದಂತೆ ಹಲವಾರು ಶಾಸಕರ ಹೆಸರು ಕೇಳಿಬಂದಿವೆ. ಮತಕ್ಕಾಗಿ ಭರ್ತಿ ಕುದುರೆ ವ್ಯಾಪಾರ ನಡೆಯುತ್ತಿದ್ದು, ಕೋಟಿಗಟ್ಟಲೆ ಆಮಿಷ ಒಡ್ಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. [ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]
ಖಾಸಗಿ ಚಾನೆಲ್ ವೊಂದರ ಪತ್ರಕರ್ತರು ನಡೆಸಿರುವ ಕುಟುಕು ಕಾರ್ಯಾಚರಣೆಯ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು. ತನಿಖೆ ಮುಕ್ತಾಯವಾಗುವವರೆಗೆ ರಾಜ್ಯಸಭೆ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು. [ಪಾಟೀಲರ ಬಾಯಲ್ಲಿ ಇದೆಂಥ ಅವಾಚ್ಯ ಶಬ್ದ, ಶಿವಶಿವ!]
ರಾಜ್ಯಸಭಾ ಚುನಾವಣೆಯ ಪ್ರಕ್ರಿಯೆಯನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ ಕುಮಾರಸ್ವಾಮಿ, ನಮ್ಮ ಪಕ್ಷದ ಶಾಸಕರು ದುಡ್ಡಿ ಕೇಳಿ ಪಡೆದುಕೊಂಡಿಲ್ಲ. ನಮ್ಮ ಪಕ್ಷದಲ್ಲಿ ಅಂಥವರಿಲ್ಲ. ಈ ಕುಟುಕು ಕಾರ್ಯಾಚರಣೆಯಿಂದ ಜೆಡಿಎಸ್ ಪಕ್ಷವನ್ನು ನಿರ್ಮೂಲನೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. [ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]