ಶೃಂಗೇರಿ ಆಸಿಡ್ ದಾಳಿ ಪ್ರಕರಣ, ಜೀವಾವಧಿ ಶಿಕ್ಷೆ, 5 ಲಕ್ಷ ದಂಡ
ಚಿಕ್ಕಮಗಳೂರು, ಜುಲೈ 15; ಶೃಂಗೇರಿಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ್ದ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2015ರ ಏಪ್ರಿಲ್ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಮೇಲೆ ಆಸಿಡ್ ದಾಳಿ ಮಾಡಲಾಗಿತ್ತು.
ಚಿಕ್ಕಮಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಲಯ 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳವಾರ ಆರೋಪಿಗಳ ಆರೋಪ ಸಾಬೀತಾಗಿತ್ತು. ಗುರುವಾರ ಶಿಕ್ಷೆ ಪ್ರಕಟಿಸಲಾಗಿದೆ.
ಏಪ್ರಿಲ್ 18, 2015ರಲ್ಲಿ ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಸುಮನ ಎಂಬುವರು ಮದುವೆ ಆಗಲು ನಿರಾಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಗಣೇಶ್, ವಿನೋದ್, ಮಹಮದ್ ಕಬೀರ್, ಅಬ್ದುಲ್ ಮಜೀದ್ ಆರೋಪ ಸಾಬೀತಾಗಿದೆ.

ಸುಮನ ಮೇಲೆ ಮನೆಯ ಬಳಿ ಆಸಿಡ್ ದಾಳಿ ನಡೆಸಲಾಗಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣ ಸಂಬಂಧ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಗಿನ ವೃತ್ತ ನಿರೀಕ್ಷಿಕ ಸುಧೀರ್ ಹೆಗ್ಡೆ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಧೀಶರಾದ ಮಂಜುನಾಥ ಸಂಗ್ರೇಶಿ ಗುರುವಾರ ತೀರ್ಪು ನೀಡಿದ್ದು, ವಕೀಲರಾದ ಮಮತಾ ಬಿ. ಎಸ್. ವಾದ ಮಂಡಿಸಿದ್ದರು. ಸತತ ಆರು ವರ್ಷಗಳ ಬಳಿಕ ಸುದೀರ್ಘ ವಿಚಾರಣೆ ನಂತರ ನ್ಯಾಯಲಯ ತೀರ್ಪು ನೀಡಿದೆ.











Click it and Unblock the Notifications