ಮಹಾ ಮಳೆಗೆ ಚಿಕ್ಕಮಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಗುಡ್ಡ ಕುಸಿತ, ಸಂಪರ್ಕ ಕಡಿತ
ಚಿಕ್ಕಮಗಳೂರು, ಆಗಸ್ಟ್ 11: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದಿದೆ. ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ನಿತೀಶ್ ಹಾಗೂ ನಂದೀಶ್ ಎಂಬುವವರ ಮನೆ ಮಣ್ಣಿನಲ್ಲಿ ಮುಚ್ಚಿಹೋಗಿದೆ.
ಮನೆಯಲ್ಲಿದ್ದ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಇಲ್ಲಿನ ಗ್ರಾಮಸ್ಥರು ರಾತ್ರೋರಾತ್ರಿ ಗ್ರಾಮವನ್ನೇ ತೊರೆದಿದ್ದಾರೆ. ಇದೇ ವೇಳೆ ನಾಲ್ಕು ಎಕರೆ ಕಾಫಿ ತೋಟ ಮಣ್ಣಿನಲ್ಲಿ ಕೊಚ್ಚಿಹೋಗಿದೆ. ಸಿರಿವಾಸೆ ಗ್ರಾಮದಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದು, ಸಿರಿವಾಸೆ ಹಾಗೂ ಅಡಲುಗದ್ದೆ ಮಧ್ಯೆ ರಸ್ತೆ ಸಂಪರ್ಕ ಕಡಿತವಾಗಿದೆ.
ಮುಂದೆನಾಗುತ್ತದೋ ಎಂಬ ಭಯದಲ್ಲಿ ಗ್ರಾಮಸ್ಥರಿದ್ದಾರೆ. ದತ್ತಪೀಠ, ಮುಳ್ಳಯ್ಯನಗಿರಿಯಲ್ಲೂ ಗುಡ್ಡ ಕುಸಿತವಾಗಿದೆ. ರಸ್ತೆಗೆ ಕುಸಿದ ಭಾರೀ ಪ್ರಮಾಣದ ಮಣ್ಣು ತೆರವುಗೊಳಿಸಲಾಗಿದೆ. ಈ ಮಧ್ಯೆ ಆಗಸ್ಟ್ 14ರ ವರೆಗೆ ವಾಹನ ಸಂಚಾರ ನಿರ್ಬಂಧಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಎಲ್ಲೆಲ್ಲಿ ಮಣ್ಣು ಕುಸಿದಿದೆಯೋ ಅಲ್ಲಿ ಮಣ್ಣು ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣು ತೆರವು ಮಾಡಲಾಗುತ್ತಿದೆ. ಗಿರಿಪ್ರದೇಶದಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು, ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ರಕ್ಷಿಸಲು ಬಂದವರೇ ಸಂಕಷ್ಟದಲ್ಲಿ
ಅಲೇಖಾನ್ ಹೊರಟ್ಟಿ ಗ್ರಾಮಸ್ಥರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮಸ್ಥರ ರಕ್ಷಣೆ ಕಾರ್ಯಕ್ಕೆ ಹೆಲಿಕಾಪ್ಟರ್ ಬಂದಿದೆ. ಮೂಡಿಗೆರೆ ತಾಲೂಕಿನಲ್ಲಿ ಆಲೇಖಾನ್ ಹೊರಟ್ಟಿ ಗ್ರಾಮ ಇದ್ದು, ಈಗಾಗಲೇ ಚಿಕ್ಕಮಗಳೂರಿಗೆ ಹೆಲಿಕಾಪ್ಟರ್ ತಲುಪಿದೆ. ಶನಿವಾರದಂದು ರಕ್ಷಣೆಗಾಗಿ ತೆರಳಿದವರ ಸ್ಥಿತಿಯೇ ಅತಂತ್ರವಾಗಿತ್ತು. ಶನಿವಾರ ರಾತ್ರಿ ರಕ್ಷಣೆಗಾಗಿ ಹೋದವರು ಕೂಡ ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ನೂರಾರು ಗ್ರಾಮಸ್ಥರು ಸಹ ಸಿಲುಕಿದ್ದಾರೆ. ಗ್ರಾಮಕ್ಕೆ ತೆರಳಲು ದಾರಿ ಇಲ್ಲದ ಕಾರಣಕ್ಕೆ ಹೆಲಿಕಾಪ್ಟರ್ ಬಂದಿದೆ. ಶನಿವಾರ ರಾತ್ರಿ ರಕ್ಷಣೆಗೆ ಹೋದ 10 ಮಂದಿ ಅಗ್ನಿಶಾಮಕ ಸಿಬ್ಬಂದಿಯೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದೀಗ ಅವರ ರಕ್ಷಣೆಗೆ ಯೋಧರ ತಂಡ ಹಾಗೂ ತಾಲೂಕು ಅಧಿಕಾರಿಗಳು ತೆರಳಿದ್ದಾರೆ. ಅಲೇಖಾನ್ ಗ್ರಾಮಸ್ಥರು ಹಾಗೂ ಸಿಬ್ಬಂದಿ ಭಯದಲ್ಲೇ ಶನಿವಾರ ರಾತ್ರಿ ಕಳೆದಿದ್ದಾರೆ. ಸದ್ಯಕ್ಕೆ ಗುಡ್ಡಗಳು ಕುಸಿಯುತ್ತಲೇ ಇದ್ದು, ಆತಂಕ ಕಡಿಮೆ ಆಗಿಲ್ಲ.
ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ
ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ನಾಲ್ಕು ದಿನದ ಬಳಿಕ ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ. ಟಿಲ್ಲರ್ ತರಲು ಹೋದಾಗ ಈ ಘಟನೆ ಸಂಭವಿಸಿತ್ತು. ಶ್ರೀವತ್ಸ (22) ಮೃತ ಯುವಕ. ಇನ್ನು ಮೂಡಿಗೆರೆ ತಾಲೂಕಿನಲ್ಲಿ ಮತ್ತೊಂದು ಜೀವ ಬಲಿಯಾದ ಶಂಕೆ ವ್ಯಕ್ತವಾಗಿದೆ.

ಶನಿವಾರ ಗುಡ್ಡ ಕುಸಿತದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾಗಪ್ಪ ಗೌಡ (70) ಕಾಣೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಗುಡ್ಡ ಕುಸಿತವಾಗುವ ಸಂದರ್ಭದಲ್ಲಿಯೇ ಆತ ಕಾಣೆಯಾಗಿದ್ದಾರೆ. ಇದೇ ವೇಳೆ ಐದು ಹಸುಗಳು ಗುಡ್ಡ ಕುಸಿತಕ್ಕೆ ಬಲಿಯಾಗಿವೆ. ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ.












Click it and Unblock the Notifications