ಕೇಜ್ರಿವಾಲ್ರಿಂದ ಖಾಲಿಸ್ತಾನ್ ಚಳವಳಿ ಬೆಂಬಲ: ಮಾಜಿ ಎಎಪಿ ನಾಯಕ
ನವದೆಹಲಿ, ಫೆಬ್ರವರಿ 17: ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ಅವರು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಮಾಡಿರುವ ಈ ಆರೋಪ ಭಾರಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಕಂಡು ಬಂದಿದೆ.
"ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸುತ್ತಿದ್ದಾರೆ," ಎಂದು ಎಎಪಿ ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ದೂರಿದ್ದಾರೆ. "ಒಂದು ದಿನ, ಅರವಿಂದ್ ಕೇಜ್ರಿವಾಲ್ ಅವರು ಸಿಎಂ (ಪಂಜಾಬ್) ಅಥವಾ ಸ್ವತಂತ್ರ ರಾಷ್ಟ್ರದ (ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು," ಎಂದು ವಿಶ್ವಾಸ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಭಯೋತ್ಪಾದಕನ ಮನೆಯಲ್ಲಿ ಕಾಣಿಸಿಕೊಂಡಿದ್ದೇಕೆ ಕೇಜ್ರಿವಾಲ್: ರಾಹುಲ್ ಗಾಂಧಿ
"ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಗಾದರೂ ಕೂಡಾ ಅಧಿಕಾರವನ್ನು ಮಾತ್ರ ಬಯಸುತ್ತಾರೆ," ಎಂದು ಕೂಡಾ ಆರೋಪ ಮಾಡಿರುವ ಕವಿ ಕುಮಾರ್ ವಿಶ್ವಾಸ್, ಎಎಪಿ ನಾಯಕರ ವಿರುದ್ಧ ಭಾರಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಎಎಪಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಕುಮಾರ್ ವಿಶ್ವಾಸ್
ಈ ಹಿಂದೆ ಒಮ್ಮೆ ಅರವಿಂದ್ ಕೇಜ್ರಿವಾಲ್ ಅವರ ವಿಶ್ವಾಸಾರ್ಹ ಮತ್ತು ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಕುಮಾರ್ ವಿಶ್ವಾಸ್ ಎಎಪಿ ತನ್ನನ್ನು ನಿರ್ಲಕ್ಷಿಸಿದ ನಂತರ ಮತ್ತು 2018 ರಲ್ಲಿ ಸಂಜಯ್ ಸಿಂಗ್ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ ನಂತರ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಂದಿನಿಂದ, ಕುಮಾರ್ ವಿಶ್ವಾಸ್ ಅವರು ಕೆಲವೊಮ್ಮೆ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಟ್ವೀಟ್ ಮಾಡುವುದನ್ನು ಹೊರತುಪಡಿಸಿ ಬಹುತೇಕ ಕೇಜ್ರಿವಾಲ್ನಿಂದ ದೂರವನ್ನು ಉಳಿಸಿಕೊಂಡಿದ್ದಾರೆ. ಆದರೆ, ಕುಮಾರ್ ವಿಶ್ವಾಸ್ ಅಧಿಕೃತವಾಗಿ ಎಎಪಿ ತೊರೆದಿಲ್ಲ.
'ಭಿಯಾಗಳು': ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಸಿಎಂ ಚನ್ನಿ ವಿವಾದಾತ್ಮಕ ಹೇಳಿಕೆ
ಕೇಜ್ರಿವಾಲ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಈ ಹಿಂದೆ ವಾಗ್ದಾಳಿ ನಡೆಸಿದ್ದಾರೆ. ಬರ್ನಾಲಾದಲ್ಲಿ ನಡೆದ ಪ್ರಚಾರದಲ್ಲಿ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಪಕ್ಷದ ನಾಯಕರು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದ್ದು, ರಾಷ್ಟ್ರೀಯತೆ ಬಗ್ಗೆ ವಿಶ್ವಾಸವಿಲ್ಲ ಎಂದು ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕಾಂಗ್ರೆಸ್ ನಾಯಕರು ಏನೇ ಆಗಿದ್ದರೂ, ಒಬ್ಬ ಭಯೋತ್ಪಾದಕನ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಜಾಡು ಚಿಹ್ನೆಯುಳ್ಳ (ಆಪ್ ಪಕ್ಷದ ಚಿಹ್ನೆ ಪೊರಕೆ) ಪಕ್ಷದ ನಾಯಕರು ಭಯೋತ್ಪಾದಕನ ಮನೆಯಲ್ಲಿ ಕಂಡು ಬಂದಿದ್ದಾರೆ, ಇದು ಸತ್ಯ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
2017ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಂಜಾಬ್ನ ಮೋಗಾದಲ್ಲಿ ಮಾಜಿ ಖಲಿಸ್ತಾನಿ ಭಯೋತ್ಪಾದಕರ ನಿವಾಸದಲ್ಲಿ ತಂಗಿದ್ದ ಕೇಜ್ರಿವಾಲ್ಗೆ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದರು. ಪಂಜಾಬಿನಲ್ಲಿ ಸರ್ಕಾರ ರಚಿಸುವುದಕ್ಕೆ ಒಂದು ಅವಕಾಶವನ್ನು ಕೇಳುತ್ತಿರುವವರು ರಾಜ್ಯವನ್ನೇ ನಾಶಪಡಿಸುತ್ತಾರೆ, ಸುಟ್ಟು ಹಾಕುತ್ತಾರೆ ಎಂದು ದೂಷಿಸಿದ್ದಾರೆ. ಪಂಜಾಬ್ ಗಡಿ ಮತ್ತು ಸೂಕ್ಷ್ಮ ರಾಜ್ಯವಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಪಂಜಾಬ್ ಅನ್ನು ಅರ್ಥಮಾಡಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವೇ ಶಾಂತಿಯನ್ನು ಕಾಪಾಡುವುದಕ್ಕೆ ಸಾಧ್ಯವಾಗುತ್ತದೆ. ಶಾಂತಿ ಹೋದರೆ ಏನೂ ಉಳಿಯುವುದಿಲ್ಲ ಎಂದು ನಮಗೆ ತಿಳಿದಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14ರಂದು ವಿಧಾನಸಭೆ ಚುನಾವಣೆಯ ಎರಡು ಹಂತಗಳಮತದಾನ ಪ್ರಕ್ರಿಯೆ ನಡೆದಿದೆ. ಇನ್ನು 20, 23 ಮತ್ತು ಮಾರ್ಚ್ 3, 7 ರಂದು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್ಇಂಡಿಯಾ ಸುದ್ದಿ)
Recommended Video