ಪಂಜಾಬ್ನಲ್ಲಿ ಬಡವರ ಮನೆ ಬಾಗಿಲಿಗೆ ಪಡಿತರ ತಲುಪಿಸಲಿರುವ ಸರ್ಕಾರ!
ಚಂಡೀಗಢ, ಮಾರ್ಚ್ 28: ಪಂಜಾಬ್ನಲ್ಲಿ ಅಧಿಕಾರ ಹಿಡಿದಿರುವ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದಾರೆ. ಇನ್ಮುಂದೆ ಮನೆ ಬಾಗಿಲಿಗೆ ಪಡಿತರ ವಿತರಿಸುವುದಕ್ಕೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
"ಪಂಜಾಬ್ನ ಜನರಿಗೆ "ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಪಡಿತರವನ್ನು ಬಡವರ ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ. ಪಡಿತರವನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳೇ ನಿಮಗೆ ಕರೆ ಮಾಡುತ್ತಾರೆ, ನೀವು ಹೇಳಿದ ಸಮಯಕ್ಕೆ ಪಡಿತರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ," ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಪಡಿತರವನ್ನು ಪಡೆಯುವುದು ನಿಮ್ಮ ಐಚ್ಛಿಕ ಯೋಜನೆ ಆಗಿದ್ದು, ಪಡಿತರ ಚೀಟಿದಾರರು ಇದರಿಂದ ಹೊರಗುಳಿಸುವುದಕ್ಕೂ ಅವಕಾಶವಿದೆ. ಆದರೆ ಸರ್ಕಾರದಿಂದ ಈ ಯೋಜನೆ ಅಡಿ ನೀಡುವ ಪಡಿತರವು ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ ಎಂದರು.

ಉತ್ತಮ ಗುಣಮಟ್ಟದ ಪಡಿತರ ವಿತರಣೆ:
"ಪಡಿತರವು ಉತ್ತಮ ಗುಣಮಟ್ಟದಿಂದ ಕೂಡಿರಲಿದ್ದು, ಕ್ಲೀನ್ ಪ್ಯಾಕೇಜ್ಗಳಲ್ಲಿ ನಿಮಗೆ ತಲುಪಿಸಲಾಗುವುದು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವರು ಮತ್ತು ಜನಸಾಮಾನ್ಯರು ತಮ್ಮ ಪಾಲಿನ ಪಡಿತರವನ್ನು ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದು ಬೇಸರದ ಸಂಗತಿಯಾಗಿದೆ. ಪ್ರಪಂಚವು ಡಿಜಿಟಲೀಕರಣ ಆಗುತ್ತಿದ್ದು, ಸುಲಭದಲ್ಲಿಯೇ ಸುಲಭವಾಗಿ ಆಹಾರವನ್ನು ತಲುಪಿಸಲಾಗುತ್ತದೆ. ಏಕೆಂದರೆ ಕೆಲವೊಮ್ಮೆ, ಬಡವರು ತಮ್ಮ ಪಾಲಿನ ಪಡಿತರಕ್ಕಾಗಿ ಸರದಿಯಲ್ಲಿ ನಿಲ್ಲಲು ತಮ್ಮ ದೈನಂದಿನ ಕೂಲಿಯನ್ನು ಸಹ ಬಿಡಬೇಕಾಗುತ್ತದೆ. ಕೆಲವು ವಯಸ್ಸಾದ ಮಹಿಳೆಯರು ಪಡಿತರ ಪಡೆಯಲು ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ," ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ಆಪ್ ಪ್ರಣಾಳಿಕೆಯಲ್ಲಿ ಈ ಅಂಶದ ಉಲ್ಲೇಖ:
ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ಪಡಿತರವನ್ನು ಬಾಗಿಲಿಗೆ ತಲುಪಿಸುವುದರ ಬಗ್ಗೆ ಉಲ್ಲೇಖಿಸಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಅಂಶವನ್ನೇ ಪ್ರಚಾರದ ಅಸ್ತ್ರವಾಗಿ ಆಪ್ ಬಳಸಿಕೊಂಡಿತ್ತು. ಅದೇ ಯೋಜನೆಯನ್ನು ಎಎಪಿ ಸರ್ಕಾರವು ದೆಹಲಿಯಲ್ಲಿ ಜಾರಿಗೆ ತಂದಿದೆ ಎಂದು ಮನ್ ಉಲ್ಲೇಖಿಸಿದ್ದರು.
ಪಂಜಾಬ್ ಚುನಾವಣೆಯಲ್ಲಿ ಮತದಾರರ ತೀರ್ಪು:
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಭರ್ಜರಿ ಗೆಲುವು ದಾಖಲಿಸಿದೆ. ಆಡಳಿತಾರೂಢ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಶಿರೋಮಣಿ ಅಕಾಲಿದಳ (ಎಸ್ಎಡಿ) ಕೇವಲ ಮೂರು ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿಯು ಎರಡು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 1 ಹಾಗೂ ಸ್ವತಂತ್ರ್ಯ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ದೆಹಲಿಯಲ್ಲಿ ಬಹು ಚರ್ಚೆಗೆ ಕಾರಣವಾಗಿದ್ದ ಯೋಜನೆ:
ಕಳೆದ ವರ್ಷ ನವೆಂಬರ್ನಲ್ಲಿ, ದೆಹಲಿ ಸರ್ಕಾರವು ಪಡಿತರ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸುವ ಮಾರ್ಗವನ್ನು ತೆರವುಗೊಳಿಸಿದ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಇತ್ತೀಚಿನ ದಿನಗಳಲ್ಲಿ ಬೇಯಿಸಿದ ಆಹಾರ ಮತ್ತು ಮದ್ಯ ಸೇರಿದಂತೆ ಎಲ್ಲವನ್ನೂ ಮನೆಗೆ ತಲುಪಿಸಲಾಗುತ್ತಿದೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.












Click it and Unblock the Notifications