'ಭೈಯಾಗಳು': ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಸಿಎಂ ಚನ್ನಿ ವಿವಾದಾತ್ಮಕ ಹೇಳಿಕೆ
ಚಂಡೀಗಢ, ಫೆಬ್ರವರಿ 17: ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಬುಧವಾರ ಚುನಾವಣಾ ರ್ಯಾಲಿಯಲ್ಲಿ ವಿವಾದಾದ್ಮಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಸಮ್ಮುಖದಲ್ಲೇ ನೀಡಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ "ಭೈಯಾ" ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಎಎಪಿ ನಾಯಕರನ್ನು ಗುರಿಯಾಗಿರಿಸಿಕೊಂಡು ಹೇಳಿಕೆ ನೀಡಿದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಭೈಯಾಗಳೂ (ಭೈಯಾ-bhiyas) ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದ ಜನರನ್ನು ಉಲ್ಲೇಖಿಸುವ "ಭೈಯಾ" ಪದವನ್ನು ಸಾಮಾನ್ಯವಾಗಿ ಬಳಕೆ ಮಾಡುವುದು ಆಕ್ರಮಣಕಾರಿ ಎಂದು ಪರಿಗಣಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಪಂಜಾಬ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ರೂಪನಗರದಲ್ಲಿ ರೋಡ್ಶೋ ಅನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಈ ಹೇಳಿಕೆಯನ್ನು ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡಾ ಉಪಸ್ಥಿತರಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹಾಗೆಯೇ ಈ ಹೇಳಿಕೆಯ ಬೆನ್ನಲ್ಲೇ ಚಪ್ಪಾಳೆ ತಟ್ಟಿರುವುದು ಕೂಡಾ ಕಂಡು ಬಂದಿದೆ.
|
ಟ್ವೀಟ್ ಮೂಲಕ ಅಸ್ಸಾಂ ಮುಖ್ಯಮಂತ್ರಿ ಆಕ್ರೋಶ
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈಶಾನ್ಯವನ್ನು ನಿರ್ಲಕ್ಷಿಸಿದರೂ ಅವರ ಸಹೋದರ ವೈವಿಧ್ಯತೆ ಮತ್ತು 'ಭಾರತದ ಸ್ಪೂರ್ತಿ' ಕುರಿತು ನಮಗೆ ಉಪದೇಶಿಸಿದ ಕೆಲವು ದಿನಗಳ ನಂತರ, ಈಗ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ಬಿಹಾರ ಮತ್ತು ಯುಪಿ ಜನರ ವಿರುದ್ಧ ಅವರ ಹೇಯವಾದ ಹೇಳಿಕೆಯನ್ನು ನೀಡುವಾಗ ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿಗೆ ಹುರಿದುಂಬಿಸುತ್ತಿದ್ದಾರೆ!. ಬೂಟಾಟಿಕೆ ಮತ್ತು ತುಕ್ಡೆ ತುಕ್ಡೆಯ ರಾಜಕೀಯ ಅತ್ಯುತ್ತಮವಾಗಿದೆ!," ಎಂದು ಟೀಕೆ ಮಾಡಿದ್ದಾರೆ.

ಚನ್ನಿ ಹೇಳಿದ್ದು ಏನು?
"ಪ್ರಿಯಾಂಕಾ ಗಾಂಧಿ ಪಂಜಾಬ್ನ ಸೊಸೆ. ಇಲ್ಲಿ ಆಡಳಿತ ನಡೆಸಲು ಬಂದಿರುವ 'ಉತ್ತರ ಪ್ರದೇಶ, ಬಿಹಾರ, ದೆಹಲಿ ದೇ ಭೈಯಾ'ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ," ಎಂದು ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದ ಜನರನ್ನು ಉಲ್ಲೇಖಿಸುವ "ಭೈಯಾ" ಪದವನ್ನು ಸಾಮಾನ್ಯವಾಗಿ ಬಳಕೆ ಮಾಡುವುದು ಆಕ್ರಮಣಕಾರಿ ಎಂದು ಪರಿಗಣಿಸಲಾಗಿದೆ.

ಚನ್ನಿಯ ಈ ಹಿಂದಿನ ಹೇಳಿಕೆ ಉಲ್ಲೇಖ ಮಾಡಿದ ಕೇಜ್ರಿವಾಲ್
ಚನ್ನಿ ಹೇಳಿಕೆಗೆ ಆಮ್ ಆದ್ಮಿ ಪಕ್ಷದಿಂದ ಟೀಕೆ ವ್ಯಕ್ತವಾಗಿದೆ. ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಹೇಳಿಕೆಯನ್ನು "ತುಂಬಾ ನಾಚಿಕೆಗೇಡಿನದು" ಎಂದು ಹೇಳಿದ್ದಾರೆ. "ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ನೀಡಿದ ತಪ್ಪು ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ," ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಹಿಂದೆ ಚನ್ನಿ ತನ್ನ ಚರ್ಮದ ಮೈಬಣ್ಣದ ಮೇಲೆ ತನ್ನನ್ನು ಕಾಲಾ (ಕಪ್ಪು)' ಎಂದು ಕರೆದಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. ಪ್ರಿಯಾಂಕಾ ಗಾಂಧಿ ಕೂಡ ಉತ್ತರ ಪ್ರದೇಶಕ್ಕೆ ಸೇರಿದವರು ಎಂದು ಭಗವಂತ್ ಮಾನ್ ಹೇಳಿದಾಗ, ಕೇಜ್ರಿವಾಲ್ ಅವರು ಕೂಡ ಭಯ್ಯಾ ಎಂದು ಹೇಳಿದರು.

ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಪ್ರತಿಕ್ರಿಯೆ
ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಟ್ವಿಟರ್ನಲ್ಲಿ ಚನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗುರಿಯಾಗಿಸಿದ್ದಾರೆ. "ಪ್ರಿಯಾಂಕಾ ವಾದ್ರಾ ಜಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ತನ್ನನ್ನು ಉತ್ತರ ಪ್ರದೇಶದ ಮಗಳು ಎಂದು ಕರೆದುಕೊಳ್ಳುತ್ತಾರೆ ಮತ್ತು ಉತ್ತರ ಪ್ರದೇಶ ಮತ್ತು ಬಿಹಾರದ ಜನರನ್ನು ಪಂಜಾಬ್ನಲ್ಲಿ ಅವಮಾನಿಸಿದಾಗ ಚಪ್ಪಾಳೆ ತಟ್ಟುತ್ತಾರೆ. ಅವರದ್ದು ದ್ವಿಮುಖ ಇಲ್ಲಿ ಸ್ಪಷ್ಟವಾಗಿದೆ," ಎಂದು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications