ಮಂಡ್ಯದಲ್ಲಿ ಮಗನ ಸ್ಪರ್ಧೆ; ಎಚ್ ಡಿಕೆಯಿಂದ ಡಿವಿಎಸ್, ಬಿಎಸ್ ವೈ ಉದಾಹರಣೆ
Recommended Video
ನಿಖಿಲ್ ಹೊರಗಿನ ಅಭ್ಯರ್ಥಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದರಿಂದ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಹೇಳಿದ್ದಾರೆ.
ಮಂಡ್ಯದಿಂದ ನಿಖಿಲ್ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಆದ ಮೇಲೆ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಸಮಾಧಾನ ಇದೆ. ಮಂಡ್ಯದಲ್ಲಿ ಸ್ಪರ್ಧೆ ಮಾಡುವುದಕ್ಕೆ ನಿಖಿಲ್ ಗೆ ವಿರೋಧವಿದೆ ಎಂದು ಬಿಂಬಿಸುವಂಥ ಪ್ರಚಾರ ನಡೆಯುತ್ತಿದೆ. ಆದರೆ ವಾಸ್ತವವೇ ಬೇರೆ ಇದೆ ಎಂದು ಅವರು ಹೇಳಿದ್ದಾರೆ.
ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್ ಹಾದಿ ಸುಲಭವಲ್ಲ!
ಮಂಡ್ಯದ ಜನರಿಗೆ ವರ್ಷಗಳಿಂದ ನಮ್ಮ ಕುಟುಂಬದ ಬಗ್ಗೆ ಗೊತ್ತಿದೆ ಎಂದಿರುವ ಕುಮಾರಸ್ವಾಮಿ, ತಮ್ಮ ತಂದೆ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ನಂತರ ಮಾತನಾಡಿ, ನಮಗೆ ಉತ್ತಮ ಬಾಂಧವ್ಯ ಇದೆ. ಇದಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಹಾಗೂ ಅಂತಃಕರಣವನ್ನು ನಾವೆಂದೂ ದುರುಪಯೋಗ ಮಾಡಿಕೊಂಡಿಲ್ಲ. ಮಂಡ್ಯದಿಂದ ಯಾರು ಸ್ಪರ್ಧಿಸಬೇಕು ಎಂದು ಜನ ನಿರ್ಧರಿಸುತ್ತಾರೆ. ಸಾಮಾಜಿಕ ಮಾಧ್ಯಮ ಅಥವಾ ರಾಜಕೀಯ ಪಕ್ಷವಲ್ಲ ಎಂದಿದ್ದಾರೆ.
ಸದಾನಂದ ಗೌಡ, ಯಡಿಯೂರಪ್ಪ ಹೊರಗಿನವರಲ್ಲವಾ?
ಮಂಡ್ಯದಿಂದ ನಿಖಿಲ್ ನನ್ನು ಕಣಕ್ಕೆ ಇಳಿಸಬೇಕು ಎಂಬ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಒಂದು ಕ್ಷೇತ್ರದವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿದ ಹಲವು ಉದಾಹರಣೆಗಳಿವೆ. ಬಿ.ಎಸ್.ಯಡಿಯೂರಪ್ಪ ಮೂಲತಃ ಮಂಡ್ಯದವರು. ಶಿವಮೊಗ್ಗದಿಂದ ಚುನಾವಣೆಗೆ ಸ್ಪರ್ಧಿಸಿದರು. ಮಂಗಳೂರಿನ ಸದಾನಂದ ಗೌಡ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರು ಎಂದಿದ್ದಾರೆ.
ಚುನಾವಣೆಯಲ್ಲಿ ಯಾವುದೇ ಮಹತ್ವ ಇರಲ್ಲ
ಇನ್ನೂ ಮುಂದುವರಿದು, ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಹಾಗೂ ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಿದರು. ನಾನು ಕೂಡ ಹಾಸನದವನಾದರೂ ರಾಮನಗರದಿಂದ ಗೆದ್ದಿದ್ದೇನೆ. ಆದ್ದರಿಂದ ಹೊರಗಿನ ಅಭ್ಯರ್ಥಿ ಎಂಬ ವಾದಕ್ಕೆ ಚುನಾವಣೆಯಲ್ಲಿ ಮಹತ್ವ ಇರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜನರ ಮುಂದೆ ಹೋಗುವುದು ನಿಶ್ಚಿತ
ಈಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಸ್ಪರ್ಧಿಸುವುದರ ಬಗ್ಗೆ ನಿರ್ಧಾರ ಆಗಿದೆ. ಮತ್ತು ನಾವು ಜನರ ಮುಂದೆ ಹೋಗುತ್ತೇವೆ ಎಂದಿರುವ ಕುಮಾರಸ್ವಾಮಿ, ತೀರ್ಮಾನದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಸದ್ಯದಲ್ಲೇ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಾರೆ.
ಸುಮಲತಾ ಅಂಬರೀಶ್ ಸ್ಪರ್ಧೆಗೆ ಪಟ್ಟು
ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಸುಮಲತಾ ಅವರ ಮನವೊಲಿಸಲು ಕಾಂಗ್ರೆಸ್ ನಿಂದ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ. ಇನ್ನು ಅಂಬರೀಶ್ ನಿಧನದ ನಂತರ ಸುಮಲತಾ ಅವರು ಸ್ಪರ್ಧೆಗೆ ಇಳಿದಿರುವುದರಿಂದ ಜನರ ಅನುಕಂಪ ಗಳಿಸಬಹುದು. ಅದರಿಂದ ಜೆಡಿಎಸ್ ಗೆ ಹಿನ್ನಡೆ ಆಗಬಹುದು ಎಂಬ ಆತಂಕ ಇದ್ದರೆ, ಮತ್ತೊಂದು ಕಡೆ ನಿಖಿಲ್ ಸ್ಪರ್ಧೆಗೆ ಕಾಂಗ್ರೆಸ್ ನ ಕೆಲ ನಾಯಕರು ವಿರೋಧಿಸಿದ್ದಾರೆ.