ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್ ಹಾದಿ ಸುಲಭವಲ್ಲ!
Recommended Video

ಮಂಡ್ಯ, ಮಾರ್ಚ್ 13 : ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆ. ಹಾಲಿ ಜೆಡಿಎಸ್ ವಶದಲ್ಲೇ ಇರುವ ಲೋಕಸಭಾ ಕ್ಷೇತ್ರ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣವಿಲ್ಲ. ಸುಮಲತಾ ಅಂಬರೀಶ್ ಪರವಾಗಿ ಜನರು ಒಲವು ಹೊಂದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಬಂದಿರುವ ಗುಪ್ತಚರ ಇಲಾಖೆ ವರದಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಸೇರಿದೆ. ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿರುವ ಅವರು ವರದಿ ತರಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಪಕ್ಷದ ಮುಂದಿನ ನಡೆ ಏನಾಗಿರಬೇಕು? ಎಂದು ಚರ್ಚಿಸಿದ್ದಾರೆ.
ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಆದರೆ, ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್, ಟಿಕೆಟ್ ನೀಡಲು ನಿರಾಕರಿಸಿದೆ. ಮಾ.18ರಂದು ತಮ್ಮ ಮುಂದಿನ ನಡೆಯನ್ನು ಘೋಷಣೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ವರದಿಯಲ್ಲಿ ಏನಿದೆ?
ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಜನ ಬೆಂಬಲ ಹೆಚ್ಚಿಗೆ ಸಿಗುತ್ತಿದೆ. ಸುಮಲತಾ ಅವರು ಯಾರ ಬಗ್ಗೆಯೂ ಟೀಕೆಗಳನ್ನು ಮಾಡದೇ ಪ್ರಚಾರ ಮಾಡುತ್ತಿದ್ದಾರೆ, ಇದು ಅವರಿಗೆ ಸಹಾಯಕವಾಗಲಿದೆ. ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ನ ಕೆಲವು ನಾಯಕರು ಅವರಿಗೆ ಬೆಂಬಲ ನೀಡುವುದರಿಂದ ಅವರಿಗೆ ಹೆಚ್ಚಿನ ಬಲ ಸಿಗಲಿದೆ.

ಅನುಕಂಪದ ಅಲೆ
ಮಂಡ್ಯ ಜಿಲ್ಲೆಯಲ್ಲಿ ಅನುಕಂಪದ ಅಲೆ ಸಾಮಾನ್ಯವಾಗಿದೆ. ಮದ್ದೂರಿನಲ್ಲಿ ಸಿದ್ದರಾಜು ನಿಧನರಾದಾಗ ಕಲ್ಪನಾ ಸಿದ್ಧರಾಜು ಆಯ್ಕೆಯಾಗಿದ್ದರು. ಮಾಜಿ ಸಚಿವ ಎಸ್.ಡಿ.ಜಯರಾಮ್ ನಿಧನರಾದಾಗ ಪತ್ನಿ ಪ್ರಭಾವತಿ ಆಯ್ಕೆಯಾಗಿದ್ದರು. ಹೀಗೆ ಅನುಕಂಪದ ಆಧಾರದ ಮೇಲೆ ಸುಮಲತಾ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿದೆ.

ರೇವಣ್ಣ ಹೇಳಿಕೆ ಪರಿಣಾಮ
ಸುಮಲತಾ ಅಂಬರೀಶ್ ವಿರುದ್ಧ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಅಂಬರೀಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಜೆಡಿಎಸ್ ಗೆಲ್ಲಲು ಭಾರೀ ಶ್ರಮ ಹಾಕಬೇಕು ಎಂದು ವರದಿ ಹೇಳಿದೆ.

ಕುಮಾರಸ್ವಾಮಿಗೆ ಪ್ರತಿಷ್ಠೆ
ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಆದ್ದರಿಂದ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಕುಮಾರಸ್ವಾಮಿ ಅವರ ಪಾಲಿಗೆ ಪ್ರತಿಷ್ಠೆಯಾಗಿದೆ. ಆದ್ದರಿಂದ, ಅವರು ಮಂಡ್ಯದಲ್ಲಿ ಕಾರ್ಯತಂತ್ರವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮಂಡ್ಯದಲ್ಲಿ ಜೆಡಿಎಸ್ ಬಲವೇನು?
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಂಡ್ಯ (ಎಂ.ಶ್ರೀನಿವಾಸ್), ಮದ್ದೂರು (ಡಿ.ಸಿ.ತಮ್ಮಣ್ಣ), ಶ್ರೀರಂಗಪಟ್ಟಣ (ರವೀಂದ್ರ ಶ್ರೀಕಂಠಯ್ಯ), ಮೇಲುಕೋಟೆ (ಸಿ.ಎಸ್.ಪುಟ್ಟರಾಜು), ಕೆ.ಆರ್.ಪೇಟೆ (ಕೆ.ಸಿ.ನಾರಾಯಣ ಗೌಡ), ನಾಗಮಂಗಲ (ಸುರೇಶ್ ಗೌಡ), ಮಳವಳ್ಳಿ (ಡಾ.ಕೆ.ಅನ್ನದಾನಿ) ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದಾರೆ. ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಸಹ ಜೆಡಿಎಸ್ ಪಕ್ಷದವರು.












Click it and Unblock the Notifications