ದಿಶಾ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ: ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹ
ಬೆಂಗಳೂರು, ಡಿಸೆಂಬರ್ 03: ಹೈದರಾಬಾದ್ ನಲ್ಲಿ ವೈದ್ಯೆ ದಿಶಾ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಅಮಾನುಷ ಹತ್ಯೆಯನ್ನು ಖಂಡಿಸಿ ಇಂದು ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕಿನಲ್ಲಿ ಮೌನ ಪ್ರತಿಭಟನೆ ಹಾಗೂ ಮೆರವಣಿಗೆಯನ್ನು ನಡೆಸಲಾಯಿತು.
ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕರ್ನಾಟಕ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ ಶಿವರಾಮ್ ಎ.ಡಿ. ಮಾತನಾಡಿ, ಈ ಪ್ರಕರಣದ ಅಪರಾಧಿಗಳಿಗೆ ಶೀಘ್ರವಾಗಿ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಿದರೆ ಮಾತ್ರ ಡಾ. ದಿಶಾ(ಹೆಸರು ಬದಲಾಯಿಸಲಾಗಿದೆ) ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಕಾರ್ಯನಿರತ ಮಹಿಳೆಯರು ನಿರ್ಭಯದಿಂದ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಹಾಗೂ ಇಂತಹ ಪ್ರಕರಣಗಳನ್ನು ಮರುಕಳಿಸದಂತೆ ತಡೆಗಟ್ಟಲು ಸುರಕ್ಷಿತಾ ಕ್ರಮಗಳನ್ನೂ ಹೆಚ್ಚಿಸಬೇಕಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಲಹಾ ಮಾರ್ಗ ಸೂಚಿಗಳನ್ನು ಹಾಗೂ ಕಠಿಣ ಕಾನೂನು ಕ್ರಮಗಳನ್ನು ತೆಲಂಗಾಣ ರಾಜ್ಯ ಅಷ್ಟೇ ಅಲ್ಲದೆ ದೇಶಾದ್ಯಂತ ರೂಪಿಸಬೇಕು ಮತ್ತು ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಸ್ ಸಿ ಸುರೇಶ್ ಮಾತನಾಡಿ, ಗಾಂಧೀಜಿಯಂತಹ ಮಹಾತ್ಮರು ಜನಿಸಿದ ನಮ್ಮ ದೇಶದಲ್ಲಿ ನಿರ್ಭಯ ಪ್ರಕರಣದ ನಂತರವೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ನಿಲ್ಲದಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಫ್ರೀಡಂ ಪಾರ್ಕಿನ ಆವರಣದಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಪಶುವೈದ್ಯರು ಮೌನವಾಗಿ ಪ್ರತಿಭಟನೆ ನಡೆಸಿ ಮೃತರ ಆತ್ಮಕ್ಕೆ ಶಾಂತಿಕೋರಿದರು. ಅಲ್ಲದೆ, ಜಿಲ್ಲಾಧಿಕಾರಿಗಳ ಕಚೇರಿಯತ್ತ ಮೌನವಾಗಿ ತೆರಳಿ ಮನವಿ ಸಲ್ಲಿಸಿದರು.