ಬೆಂಗಳೂರಿನಲ್ಲಿ ನಂದಿತಾ ತಂದೆಯ ಪತ್ರಿಕಾಗೋಷ್ಠಿ
ಬೆಂಗಳೂರು, ನ. 8: ರಾಜ್ಯದ ಗಮನ ಸೆಳೆದಿರುವ ನಂದಿತಾ ಸಾವಿನ ಪ್ರಕರಣದ ಕುರಿತು ಆಕೆಯ ತಂದೆ ಕೃಷ್ಣಮೂರ್ತಿ ಶನಿವಾರ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ವಿವರಣೆ ನೀಡಿದ್ದಾರೆ. ಅಲ್ಲದೆ, ಮಗಳನ್ನು ಅಪಹರಿಸಿದ ಮೂವರು ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ಘಟನೆಯನ್ನು ಮೊದಲಿನಿಂದಲೂ ವಿವರಿಸಿದ ಕೃಷ್ಣಮೂರ್ತಿ, ಅಪಹರಣ ನಡೆಸಿರುವ ಮೂವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ಅದನ್ನು ನಾನು ನೋಡಬೇಕು. ನನ್ನ ಮಗಳಿಗಾದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದರು.[ನಂದಿತಾ ಸಾವಿನ ಮಧ್ಯೆ ಇದೇನಿದು ಜನಿವಾರದ ಗಲಾಟೆ]
ಅವರು ಹೇಳಿದಂತೆ ಘಟನೆಯನ್ನು ಅವರ ಮಾತುಗಳಲ್ಲೇ ಕೇಳಿ...
ಘಟನೆ ನಡೆದ ದಿನ ಮಧ್ಯಾಹ್ನ ನನ್ನ ಮೊಬೈಲ್ಗೆ ಅಜ್ಜಿಯೊಬ್ಬರು ಕರೆ ಮಾಡಿದರು. ನಂದಿತಾ ನಿಮ್ಮ ಮಗಳೇ ಅಲ್ವಾ. ಅವರ ಕುರಿತು ತಿಳಿಸಬೇಕೆಂದು ಕರೆದರು. ಅವರು ಕರೆದಲ್ಲಿಗೆ ಹೋದೆ. ಆಗ ಅವರು ನಿಮ್ಮ ಮಗಳು ಧರೆಯಿಂದ ಕೆಳಗೆ ಬಿದ್ದಿದ್ದಳು. ಮನೆಗೆ ಕರೆತಂದು ಉಪಚರಿಸಿದ್ದೇನೆ ಎಂದು ತಿಳಿಸಿದರು. ಅವರು ಹೇಳಿದಂತೆ ಅವರಿದ್ದಲ್ಲಿಗೆ ಹೋಗಿ ಮಗಳನ್ನು ಕರೆದುಕೊಂಡು ಬಂದೆ. ಮನೆಗೆ ಕರೆತಂದು ಪತ್ನಿಯ ಹತ್ತಿರ ವಿಷಯ ತಿಳಿಸಿ ಮಗಳನ್ನು ಪರೀಕ್ಷಿಸಲು ಹೇಳಿದೆ. ಅವರು ಪರೀಕ್ಷಿಸಿದಾಗ ಬಲಾತ್ಕಾರ ಮಾಡಲು ಯತ್ನಿಸಿದ್ದಳು ಎಂಬುದು ತಿಳಿಯಿತು.
ನಂತರ ಆಕೆಯ ಹತ್ತಿರ ನಡೆದ ಘಟನೆ ಕುರಿತು ವಿಚಾರಿಸಿದ್ದೇನೆ. ಆಗ ಆಕೆ ತಾನು ಬಸ್ ನಿಲ್ದಾಣದಲ್ಲಿ ಫಾರೆಸ್ಟ್ ಆಫೀಸ್ ಹತ್ತಿರ ಸ್ನೇಹಿತೆಗಾಗಿ ಕಾಯುತ್ತಿದ್ದೆ. ಆಗ ಆಕೆಯ ಸ್ನೇಹಿತೆಯ ಅಣ್ಣ ಅಲ್ಲಿಗೆ ಬಂದು ಮಾತನಾಡಿಸಿದ. ಆತನಿಗೆ ಉತ್ತರಿಸುತ್ತಿದ್ದಾಗ ಇಬ್ಬರು ಹಿಂದಿನಿಂದ ಬಂದು ಕಾರಿನೊಳಕ್ಕೆ ನೂಕಿ ಅಪಹರಿಸಿದರು. ಕಾರಿನಲ್ಲಿ ಸ್ವಲ್ಪ ಟಾರ್ಚರ್ ನೀಡಿದ್ದಾರೆ.
ನಂತರ ಆನಂದಗಿರಿ ಬೆಟ್ಟದ ಹತ್ತಿರ ಕರೆದೊಯ್ದರು. ಅಲ್ಲಿ ಆಕೆಯಿಂದ ನೀರಿನ ಬಾಟಲಿ ಪಡೆದು ಸ್ವಲ್ಪ ನೀರನ್ನು ಚೆಲ್ಲಿ ನಂತರ ಕುಡಿಯಲು ಹೇಳಿದರು. ಅವರು ಹೇಳಿದಂತೆ ನಂದಿತಾ ನೀರು ಕುಡಿದಾಗ ಬಲಾತ್ಕಾರಕ್ಕೆ ಯತ್ನಿಸಿದರು. ಆದರೆ, ನಂದಿತಾ ಸಹಕರಿಸದಿದ್ದಾಗ ಬೆಟ್ಟದಿಂದ ಕೆಳಕ್ಕೆ ನೂಕಿ ಹೊರಟುಹೋದರು ಎಂದು ಮಗಳು ತಿಳಿಸಿದ್ದಾಳೆ.
ಅಪಹರಿಸಿದವರ ಕುರಿತು ವಿಚಾರಿಸಿದಾಗ ಓರ್ವನ ಹೆಸರನ್ನು ತೀರ್ಥಹಳ್ಳಿಯ ಸುಹಾನ್ ಎಂದು ತಿಳಿಸಿದ್ದಾಳೆ. ಆದರೆ, ಇನ್ನಿಬ್ಬರನ್ನು ನೋಡುವುದು ಆಕೆಯಿಂದ ಸಾಧ್ಯವಾಗಿಲ್ಲ. ಆದ್ದರಿಂದ ಅವರ ಗುರುತು ಸಿಕ್ಕಿಲ್ಲ.
ರಾತ್ರಿ ವಾಂತಿ ಆರಂಭ: ಘಟನೆಯಿಂದ ನಂದಿತಾ ಗಾಬರಿಯಾಗಿದ್ದಳು. ಆದರೆ, ಆರೋಗ್ಯದಲ್ಲಿ ತೊಂದರೆ ಕಂಡುಬರಲಿಲ್ಲ. ನಂತರ ಸಂಜೆ ಆಡುತ್ತಿದ್ದಳು. ರಾತ್ರಿ 9 ಗಂಟೆಗೆ ವಾಂತಿ ಆರಂಭವಾಯಿತು. ರಾತ್ರಿಯಿಡಿ ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದಳು. ಬೆಳಗ್ಗೆ 5 ಗಂಟೆ ವೇಳೆಗೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದೆ. ಆಗ ಇದ್ದ ವೈದ್ಯರು ಮಗಳಿಗೆ ಡ್ರಿಪ್ ಹಾಕಿ, ನಂತರ ಡಾ. ಪ್ರಭಾಕರ್ ನೋಡಿಕೊಳ್ಳುತ್ತಾರೆಂದು ಹೇಳಿ ಹೋದರು. ನಂತರ ಡಾಕ್ಟರ್ ಹತ್ತಿರ ಕೂಡ ತನ್ನ ಅಪಹರಣ ನಡೆದಿದ್ದನ್ನು ಹೇಳಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡಿಲ್ಲ: ಆದರೆ, ನಂದಿತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಮನೆಯಲ್ಲಿ ವಿಷಕಾರಿ ವಸ್ತುಗಳು ಯಾವುವೂ ಇಲ್ಲ. ಪೊಲೀಸರಿಗೆ ಸಿಕ್ಕಿರುವ ಆತ್ಮಹತ್ಯೆ ಚೀಟಿಯನ್ನು ಬರೆದಿರುವುದು ಆಕೆಯಲ್ಲ. ಅದರಲ್ಲಿ ಕೆಲವೆಡೆ ಬರೆದು ಕಾಟು ಹಾಕಲಾಗಿದೆ. ಘಟನೆ ಅರಿವಿಗೆ ಬಂದ ತಕ್ಷಣ ಪೊಲೀಸ್ ದೂರು ನೀಡದಿದ್ದುದು ನನ್ನ ತಪ್ಪು. ಆಕೆಯ ಭವಿಷ್ಯದ ದೃಷ್ಟಿಯಿಂದ ಮತ್ತು ಆಕೆ ಕ್ಷೇಮವಾಗಿಯೇ ಇರುವುದರಿಂದ ಪೊಲೀಸ್ ದೂರು ನೀಡಿರಲಿಲ್ಲ. [ನಂದಿತಾಳದು ಆತ್ಮಹತ್ಯೆಯೋ ಮರ್ಯಾದಾ ಹತ್ಯೆಯೋ?]