ಮೋದಿ ಅಲೆ ತಡೆಯಲು ಕೆಸಿಆರ್ಗೆ ದೇವೇಗೌಡ ಬೆಂಬಲ
ಬೆಂಗಳೂರು, ಏಪ್ರಿಲ್ 13: ಉಕ್ಕುತ್ತಿರುವ ಮೋದಿ ಅಲೆಗೆ ಬ್ರೇಕ್ ಹಾಕಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಪ್ರಯತ್ನಿಸುತ್ತಿದ್ದು, ತೃತೀಯ ರಂಗಕ್ಕೆ ಮರುಜೀವ ತುಂಬಲು ಯತ್ನಿಸುತ್ತಿದ್ದಾರೆ. ಅದೇ ಕಾರ್ಯದ ಭಾಗವಾಗಿ ಇಂದು ಅವರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದರು.
ಕರ್ನಾಟಕದ ತೆಲುಗು ಜನ ಜೆಡಿಎಸ್ಗೆ ಬೆಂಬಲಿಸಿ: ಕೆಸಿಆರ್ ಕರೆ
ಇಂದು ದೇವೇಗೌಡ ಅವರ ನಿವಾಸದಲ್ಲಿ ನಟ ಪ್ರಕಾಶ್ ರೈ, ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿದ ಅವರು ಮೋದಿ ವಿರುದ್ಧ 'ಪೀಪಲ್ ಫ್ರಂಟ್' ಒಕ್ಕೂಟದ ಯೋಜನೆಯನ್ನು ದೇವೇಗೌಡ ಅವರಿಗೆ ವಿವರಿಸಿ ಅವರ ಸಹಕಾರ ಪಡೆದರು.
ಕೃಷ್ಣ ಜೆಡಿಎಸ್ಗೆ ಬಂದರೆ ಸ್ವಾಗತ: ಎಚ್.ಡಿ. ಕುಮಾರಸ್ವಾಮಿ
ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ನಿರತರಾಗಿರುವ ಕೆಸಿಆರ್ ಅವರು ಈ ಮುಂಚೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ರಾಷ್ಟ್ರೀಯ ಪಕ್ಷಗಳಿಗೆ ಇಚ್ಛಾಶಕ್ತಿ ಇಲ್ಲ
ಮಾತುಕತೆ ನಂತರ ಮಾತನಾಡಿದ ಕೆಸಿಆರ್ ಅವರು ದೇಶವನ್ನು 60 ವರ್ಷದ ಆಳಿದ ರಾಷ್ಟ್ರೀಯ ಪಕ್ಷಗಳು ಸಾಧಿಸಿ ತೋರಿಸುವಲ್ಲಿ ವಿಫಲವಾಗಿವೆ ಹಾಗಾಗಿ ಜನಗಳೇ ಮುನ್ನಡೆಸುವ ಆಡಳಿತವೊಂದರ ಅವಶ್ಯಕತೆ ಇದೆ ಎಂದರು. ಇದಕ್ಕೆ ಧನಿಗೂಡಿಸಿದ ದೇವೇಗೌಡರು ಕೆಸಿಆರ್ ಅವರ ಪ್ರಯತ್ನಕ್ಕೆ ನಮ್ಮ ಸಹಕಾರ ಇದೆ ಎಂದರು.
ದಕ್ಷಿಣ ರಾಜ್ಯಗಳ ಬೆಂಬಲ
ಈಗಾಗಲೇ ಕೇಂದ್ರ ಸರ್ಕಾರದ ಉತ್ತರ ಭಾರತ ಪ್ರೀತಿಯ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಧನಿ ಎತ್ತಿದ್ದು, ಈ ಸಮಯದಲ್ಲಿ ಕೆಸಿಆರ್ ಅವರ ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಕರ್ನಾಟಕ, ಪ.ಬಂಗಾಳದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿರುವ ಕೆಸಿಆರ್, ಎನ್ಡಿಎ ಇಂದ ಹೊರಬಂದಿರುವ ಟಿಡಿಪಿ, ಕೇರಳದ ಸಿಪಿಎಂ ಪಕ್ಷಗಳೂ ತಮಗೆ ಬೆಂಬಲ ನೀಡುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಎಪಿ, ಆರ್ಜೆಡಿ ಕೂಡಾ ಬೆಂಬಲ
ಉತ್ತರ ಭಾರತದ ಹಲವು ಪಕ್ಷಗಳನ್ನು ಪೀಪಲ್ ಪ್ರಂಟ್ಗೆ ಜೊತೆ ಮಾಡಿಕೊಳ್ಳುವ ಉದ್ದೇಶ ಹೊಂದಿರುವ ಕೆಸಿಆರ್ ಎಎಪಿ ಮತ್ತು ಲಾಲೂ ಪ್ರಸಾದ್ ಯಾದವ್ರ ಆರ್ಜೆಡಿ, ಶರದ್ ಪವಾರ್ರ ಎನ್ಸಿಪಿ ಇನ್ನೂ ಹಲವು ಪಕ್ಷಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಶಿವಸೇನೆ ಜೊತೆ ಮಾತುಕತೆ ನಡೆಸಿದರೂ ಅಚ್ಚರಿ ಇಲ್ಲ.
ಯಶಸ್ವಿ ಆಗುವುದೇ ಕೆಸಿಆರ್ ಪ್ರಯತ್ನ?
ತೃತೀಯ ರಂಗ ಈ ಹಿಂದೆಯೂ ಅಸ್ಥಿತ್ವದಲ್ಲಿತ್ತು, ಆದರೆ ಸೂಕ್ತ ನಾಯಕತ್ವದ ಕೊರತೆಯಿಂದ ಅದು ತೆರೆಮರೆಗೆ ಸರಿಯಿತು. ಆಗೊಮ್ಮೆ ಈಗೊಮ್ಮೆ ತೃತೀಯ ರಂಗದ ಮಾತು ಬಂದರಾದರೂ ಚುನಾವಣೆಯಲ್ಲಿ ಚಾಪು ಮೂಡಿಸಲು ಅದು ವಿಫಲವೇ ಆಗಿದೆ. ಆದರೆ ಅಪ್ರತಿಮ ಹೋರಾಟಗಾರ ಕೆಸಿಆರ್ ಪಟ್ಟು ಬಿಡದ ಛಲದಂಕಮಲ್ಲ, ಅವರ ನಾಯಕತ್ವದ ಬಗ್ಗೆಯೂ ಉತ್ತಮ ಅಭಿಪ್ರಾಯಗಳಿವೆ, ಮೋದಿಯನ್ನೊ ಅಥವಾ ಕಾಂಗ್ರೆಸ್ ಅನ್ನೋ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಇಡುತ್ತಾರೆ ಎಂದು ಖಡಾಕಂಡಿತವಾಗಿ ಹೇಳಲು ಆಗದೇ ಇದ್ದರೂ, ಚುನಾವಣೆಯಲ್ಲಿ ತನ್ನ ಚಾಪು ಮೂಡಿಸುವುದಂತೂ ಖಾತ್ರಿ.
ದೇವೇಗೌಡ ಹೇಳಿದ್ದೇನು?
ಇಂದು ಕೆಸಿಆರ್ ಅವರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಠಿಯಲ್ಲಿರಿಸಿಕೊಂಡು ಬಹಳ ನಾಜೂಕಾಗಿ ಮಾತನಾಡಿದರು. ಕೆಸಿಆರ್ ಅವರ ಪ್ಯತ್ನಕ್ಕೆ ಸಹಕಾರ ನೀಡುವುದಾಗಿ ಹೇಳಿದ ಅವರು ಆದರೆ ಯಾರನ್ನೊ ಅಧಿಕಾರದಿಂದ ದೂರ ಇಡಲು ಅಥವಾ ಯಾರನ್ನೋ ಅಧಿಕಾರಕ್ಕೆ ಕೂಡಿಸಲು ಈ ಚಳುವಳಿ ಅಲ್ಲ ಇದು ಜನಗಳಿಗಾಗಿ ರೂಪಿಸಲಾಗುತ್ತಿರುವ ಚಳುವಳಿ ಎಂದರು.