ಮೊದಲೇ ಹಂಚಿಕೆಯಾಗಿದ್ದ ಹಣದಲ್ಲಿ ಕೆಂಪೇಗೌಡ ಪ್ರತಿಮೆ: ಡಾ.ಅಶ್ವತ್ಥನಾರಾಯಣ
ಬೆಂಗಳೂರು, ಜೂನ್ 10: ''ಹಿಂದಿನ ಬಜೆಟ್ ನಲ್ಲಿ ಹಂಚಿಕೆಯಾಗಿರುವ ನಿಧಿ ಬಳಸಿಕೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರು ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಹೊಸದಾಗಿ ಹಣ ಪಡೆಯುತ್ತಿಲ್ಲ'' ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
Recommended Video
ಕೆಂಪೇಗೌಡ ಪ್ರತಿಮೆ ನಿರ್ಮಾಣದ ಬಗ್ಗೆ ಎದ್ದಿರುವ ಅಪಸ್ವರದ ಕುರಿತು ಮಂಗಳವಾರ ಮಾತನಾಡಿದ ಡಾ.ಸಿ.ಎನ್ ಅಶ್ವತ್ಧನಾರಾಯಣ, ''ಈಗಾಗಲೇ ಹಂಚಿಕೆಯಾಗಿರುವ ಹಣದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಿರುವಾಗ ಅಪಸ್ವರ ಸಲ್ಲ'' ಎಂದರು.
ಕೊರೊನಾ ವೈರಸ್ ರೋಗದ ಸಂಕಷ್ಟದ ಸಂದರ್ಭದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಅಗತ್ಯವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಅಶ್ವತ್ಥನಾರಾಯಣ, "ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ 3 ವರ್ಷ ಆಗಿದೆ. ಪ್ರತಿಮೆ ನಿರ್ಮಾಣಕ್ಕೂ ಈ ಹಿಂದೆಯೇ ಹಣ ಹಂಚಿಕೆ ಆಗಿದೆ. ಅದನ್ನು ಈಗ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಹೊಸದಾಗಿ ಸರ್ಕಾರದ ಬೊಕ್ಕಸದಿಂದ ಹಣ ಪಡೆಯುತ್ತಿಲ್ಲ" ಎಂದರು.

"ಪ್ರತಿಮೆ ನಿರ್ಮಾಣದ ಪರಿಕಲ್ಪನೆ ಸಿದ್ಧವಾಗಿದ್ದು, ಏಜೆನ್ಸಿಯನ್ನೂ ಗುರುತಿಸಲಾಗಿದೆ. ಈಗ ಕೆಲಸ ಆರಂಭವಾದರೂ ಅದು ಪೂರ್ಣಗೊಳ್ಳಲು ಸಮಯ ಹಿಡಿಯುತ್ತದೆ. ಜೂನ್ 27ರಂದು ಕೆಂಪೇಗೌಡರ 511ನೇ ಜಯಂತಿ ಇದೆ. ಹೀಗಾಗಿ ಅಂದು ಶಂಕುಸ್ಥಾಪನೆ ನೆರವೇರಿಸಲು ನಿರ್ಧರಿಸಲಾಗಿದೆ. ಕೆಂಪೇಗೌಡರ ಗೌರವಾರ್ಥ ಅವರ ಸ್ಮಾರಕ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ" ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಕೋವಿಡ್-19 ಪರಿಸ್ಥಿತಿ ಉತ್ತಮವಾಗಿ ನಿಭಾಯಿಸಿದ್ದೇವೆ
''ಕೋವಿಡ್-19 ನಿರ್ವಹಣೆಗೆಂದೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹವಾಗಿರುವ ದೇಣಿಗೆಯನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ವೈರಸ್ ಬಹಳ ಕಾಲ ಇರುವುದರಿಂದ ಅದರ ನಿರ್ವಹಣೆಗೆ ಹೆಚ್ಚಿನ ಹಣದ ಅಗತ್ಯ ಇರುತ್ತದೆ. ವಿಪತ್ತು ನಿರ್ವಹಣೆಗೆ ಅದನ್ನು ಬಳಸಿಕೊಂಡು ಪರಿಸ್ಥಿತಿ ನಿಭಾಯಿಸಲಾಗುವುದು" ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

"ಕೋವಿಡ್-19 ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ. ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದೆ. ಸಂತ್ರಸ್ತರಿಗೆ ಪಡಿತರ, ಆಹಾರ ಒದಗಿಸಿ ಆಶ್ರಯ ಕಲ್ಪಿಸಲಾಗಿದೆ. ಆರೋಗ್ಯದ ಕಾಳಜಿ ವಹಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೇರೆ ರಾಜ್ಯಗಳು ಸಹ ತಮ್ಮ ಕಾರ್ಮಿಕರ ನೆರವಿಗೆ ಬರಲಿಲ್ಲ. ಅಂಥ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ರಾಜ್ಯ ಸರ್ಕಾರ" ಎಂದರು ಡಾ.ಅಶ್ವತ್ಥನಾರಾಯಣ.












Click it and Unblock the Notifications