ಸಾವನ್ನು ಧಿಕ್ಕರಿಸಿ ಹಕ್ಕಿಯಂತೆ ಹಾರಾಡಿದ ಬಾಲಕ
ಬೆಂಗಳೂರು, ನ. 20: ಸಾವಿನ ದವಡೆಯಲ್ಲಿರುವ 14 ವರ್ಷ ವಯಸ್ಸಿನ ಬಾಲಕನ ಕನಸಿಗೆ ರೆಕ್ಕೆ ಕೊಟ್ಟಿರುವ ಭಾರತೀಯ ವಾಯು ಸೇನೆ ಆತನ ಕನಸನ್ನು ನನಸು ಮಾಡಿದೆ. ಚಂದನ್ಗೆ ಯುದ್ಧ ವಿಮಾನ ಚಲಾವಣೆಯ ಪ್ರಾಥಮಿಕ ತರಬೇತಿ ನೀಡಿದ್ದಲ್ಲದೆ, ಮೋಡಗಳ ಮೇಲೆ ಹಾರಾಡಲು ಅವಕಾಶ ಮಾಡಿಕೊಟ್ಟು ಕೊನೆಯ ಆಸೆ ತೀರಿಸಿದೆ.
ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕ ಚಂದನ್ಗೆ ತಾನು ಜೀವನದ ಅಂತ್ಯದ ದಿನಗಳನ್ನು ಎಣಿಸುತ್ತಿದ್ದೇನೆ ಎಂಬುದೂ ತಿಳಿದಿಲ್ಲ. ಆತನ ಕೊನೆ ಆಸೆ ಕೇಳಿದಾಗ ಯುದ್ಧ ವಿಮಾನದ ಪೈಲಟ್ ಆಗಬೇಕೆಂದು ಹೇಳಿಕೊಂಡ. ತಕ್ಷಣ ಈಡೇರಿಸಲು ಅಗತ್ಯ ಕ್ರಮ ಕೈಗೊಂಡು ಭಾರತೀಯ ವಾಯು ಸೇನೆಯನ್ನು ಕೋರಲಾಯಿತು. ಇದಕ್ಕೆ ಒಪ್ಪಿದ ಐಎಎಫ್ ಬಾಲಕನ ಕನಸಿಗೆ ಯುದ್ಧ ವಿಮಾನದ ರೆಕ್ಕೆ ಕೊಟ್ಟು ಹಾರಾಡಿಸಿತು.
ಇದೀಗ ಆತನ ಮುಖದಲ್ಲಿ ಸಂತೃಪ್ತಿಯ ಕಳೆಯಿದೆ. ಇದಕ್ಕೂ ಮೊದಲು ಟಿವಿಯಲ್ಲಿ ಮಾತ್ರ ವಿಮಾನ ನೋಡಿದ್ದೆ. ಆದರೆ, ಈಗ ಒಂದು ದಿನ ಪೈಲಟ್ ಆಗಲೇಬೇಕೆಂಬ ಛಲ ಹುಟ್ಟಿದೆ ಎಂದು ಹೇಳಿಕೊಂಡಿದ್ದಾನೆ.
ಆದರೆ, ಆತನ ಕೊನೆ ಆಸೆ ಈಡೇರಲು ಕಾರಣರಾದ ಉದಯ ಫೌಂಡೇಶನ್ ಸಂಸ್ಥಾಪಕ ರಾಹುಲ್ ವರ್ಮಾ, 'ವಿಧಿ ಕ್ಯಾನ್ಸರ್ ರೂಪದಲ್ಲಿ ಚಂದನ್ ಜೀವಕ್ಕೆ ಎರವಾಗಿದೆ. ಆತನಿಗಿನ್ನು ಮೂರೇ ತಿಂಗಳ ಆಯಸ್ಸು ನೀಡಿದೆ' ಎಂದು ಖೇದ ವ್ಯಕ್ತಪಡಿಸಿದ್ದಾರೆ. [10 ವರ್ಷದ ಬಾಲಕ ಪೊಲೀಸ್ ಕಮಿಶನರ್]
ಓದಿನಲ್ಲಿ ಚುರುಕು: ತಂದೆ ಗಿರೀಶ್ ಮಂಡಲ್ (39) ಹೇಳುವಂತೆ, ಚಂದನ್ ಓದಿನಲ್ಲಿ ಚುರುಕು ಹುಡುಗ. ಯಾವತ್ತೂ ಶಾಲೆಯಲ್ಲಿ ನೀಡಿದ ಹೋಮ್ ವರ್ಕ್ ಮುಗಿಸದೆ ಬಿಟ್ಟವನಲ್ಲ. ಈ ಕುರಿತು ಪ್ರಾಥಮಿಕ ಶಾಲೆ ಶಿಕ್ಷಕರು ಇನ್ನೂ ನೆನಪಿಸಿಕೊಳ್ಳುತ್ತಾರೆ.
ತಂದೆ ಕೊಟ್ಟ ಮೊಬೈಲ್ ಫೋನ್ ಚಂದನ್ನ ಬಹುದೊಡ್ಡ ಗೆಳೆಯ. ಮನದ ಭಾವನೆಯನ್ನು ಆತ ಒನ್ ಇಂಡಿಯಾ ಜತೆ ದೆಹಲಿಯಿಂದ ಅದೇ ಫೋನ್ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾನೆ.
ನಗುವಿನ ಹಿಂದೆ ನೋವು ನಿವಾರಕ ಗುಳಿಗೆ: ಚಂದನ್ ಸಂಪೂರ್ಣ ದೇಹವನ್ನು ಕ್ಯಾನ್ಸ್ ಎಂಬ ವಿಷ ಆವರಿಸಿದೆ. ವೈದ್ಯಕೀಯ ಜಗತ್ತು ಏನೂ ಮಾಡಲು ಸಾಧ್ಯವಾಗದಷ್ಟು ಮುಂದುವರಿದಿದೆ. ಆತನ ಕೊನೆಯ ದಿನಗಳನ್ನು ನೋವಿಲ್ಲದಂತೆ ಮಾಡಲು ಮಾರ್ಫಿನ್ನಂತಹ ಶಕ್ತಿಶಾಲಿ ನೋವು ನಿವಾರಕ ಗುಳಿಗೆಗಳನ್ನು ನೀಡಲಾಗುತ್ತಿದೆ.
ಮಗನ ಕುರಿತು ಪ್ರತಿಕ್ರಿಯೆ ನೀಡಿರುವ ತಂದೆ, "ವೈದ್ಯರು ಎಲ್ಲ ರೀತಿಯ ಪ್ರಯತ್ನ ಮಾಡಿ ಕೈ ಚೆಲ್ಲಿದ್ದಾರೆ. ಎಲ್ಲ ಬಿಟ್ಟು ನೋವು ನಿವಾರಕ ಗುಳಿಗೆ ಮಾತ್ರ ನೀಡಲು ಸೂಚಿಸಿದ್ದಾರೆ. ಚಂದನ್ ಕೊನೆಯ ದಿನ ಎಣಿಸುತ್ತಿರಬಹುದು. ಆದರೆ, ಆತನ ಜೀವನದ ಪ್ರತಿ ಕ್ಷಣವೂ ನಮಗೆ ಬಹುಮುಖ್ಯ. ನನ್ನ ಮಗನ ಆಸೆ ಈಡೇರಲು ಅವಕಾಶ ಮಾಡಿಕೊಟ್ಟ ಭಾರತೀಯ ವಾಯು ಸೇನೆಗೆ ನಾನು ಕೃತಜ್ಞನಾಗಿದ್ದೇನೆ. ಆತ ಇಷ್ಟು ಸಂತೋಷವಾಗಿದ್ದನ್ನು ನಾನು ಎಂದೂ ನೋಡಿರಲಿಲ್ಲ" ಎಂದು ತಿಳಿಸಿದ್ದಾರೆ.
ಕನಸಿಗೆ ಸೇತುವೆಯಾದ ಉದಯ ಫೌಂಡೇಶನ್: ಕೆಲವು ವರ್ಷಗಳ ಹಿಂದೆ ಚಂದನ್ ತನ್ನ ಕುಟುಂಬದೊಂದಿಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಹೊರಗೆ ನಿಂತಿದ್ದಾಗ ನೋಡಿದ್ದೆ. ದೆಹಲಿಯ ಅನೇಕ ಬಡ ಕುಟುಂಬಗಳು ಐಐಎಂಎಸ್ ಆಸ್ಪತ್ರೆ ಹೊರಗೇ ಜೀವಿಸುತ್ತವೆ. ಚಂದನ್ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕೆ ವ್ಯವಸ್ಥೆ ಮಾಡಲಾಯಿತು. ಆದರೆ, ಚಂದನ್ ತಂದೆ ವಾಪಸ್ ಮನೆಗೆ ತೆರಳುವುದು ಸಾಧ್ಯವಾಗಲಿಲ್ಲ ಎಂದು ಐಎಎಫ್ ಮಧ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸಿದ ಉದಯ ಫೌಂಡೇಶನ್ ಸಂಸ್ಥಾಪಕ ರಾಹುಲ್ ವರ್ಮಾ ಹೇಳಿದ್ದಾರೆ.
ಇಂದು ಮಂಡಲ್ ಅವರು ಉದಯ ಫೌಂಡೇಶನ್ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಚಂದನ್ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಉದಯ ಫೌಂಡೇಶನ್ ಒಂದು ಲಾಭ ರಹಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಮಕ್ಕಳ ಆರೋಗ್ಯ ಕುರಿತು ಆಗಾಗ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ ಎಂದು ರಾಹುಲ್ ವರ್ಮಾ ತಿಳಿಸಿದ್ದಾರೆ.
ಬಾಲಕನ ಛಲಕ್ಕೆ ಸೇನಾಧಿಕಾರಿಗಳು ಫಿದಾ: ಚಂದನ್ ಸಾವಿನ ದವಡೆಯಲ್ಲಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದೆ ಉತ್ಸಾಹದಿಂದ ಯುದ್ಧ ವಿಮಾನ ಏರಿದ್ದಕ್ಕೆ ವಾಯು ಸೇನೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಈ ಕುರಿತು ಒನ್ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ವಿಂಗ್ ಕಮಾಂಡರ್ ಎಸ್.ಎಸ್. ಬಿರಡಿ, "ಚಂದನ್ ಆಸೆ ಈಡೇರಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಆತನ ಛಲ ನಮಗೆ ಮೆಚ್ಚುಗೆ ತಂದಿದೆ. ಆತ ನಿಜವಾಗಿಯೂ ಹೋರಾಟಗಾರ. ಆತ ಗುಣಮುಖವಾಗಲಿ ಎಂದು ನಾವು ಹಾರೈಸಿದ್ದೇವೆ" ಎಂದರು. [ಮರಣಶಯ್ಯೆಯಲ್ಲಿರುವ ಬಾಲಕನ ಕನಸಿಗೆ ರೆಕ್ಕೆ]
ವಿಮಾನ ಆಟಿಕೆ ಕೇಳಿದ ಚಂದನ್: "ವಿಮಾನದಲ್ಲಿ ಹಾರಾಡಿದ ನಂತರ ನನಗೆ ವಿಮಾನದ ಆಟಿಕೆ ಬೇಕು ಎನ್ನಿಸುತ್ತಿದೆ. ಇದರಿಂದ ನಾನು ಯಾವಾಗಲೂ ವಿಮಾನದ ಟಚ್ನಲ್ಲಿ ಇರಬಹುದು. ನನಗೀಗ ಅನೇಕ ಪೈಲಟ್ಗಳು ಸ್ನೇಹಿತರಾಗಿದ್ದಾರೆ. ನಾನೂ ಒಂದು ದಿನ ಪೈಲಟ್ ಆಗುತ್ತೇನೆ. ವಿಮಾನದ ಆಟಿಕೆಯೊಂದಿಗೆ ಮಲಗಲು ಇಚ್ಛಿಸುತ್ತೇನೆ. ಆಸ್ಪತ್ರೆಗೂ ಒಯ್ಯುತ್ತೇನೆ" ಎಂದು ಚಂದನ್ ಹೇಳಿಕೊಂಡಿದ್ದಾನೆ.
ಆತನಿಗೆ ಸಹಾಯ ಮಾಡ್ತೀರಾ..?: ಚಂದನ್ ಕುಟುಂಬ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದ್ದರಿಂದ ಬಾಲಕನ ಚಿಕಿತ್ಸೆಗೆ ಹಣಕಾಸಿನ ಸಹಾಯ ಬೇಕಾಗಿದೆ. ಆಸಕ್ತರು ಸಹಾಯ ಮಾಡಬಹುದು. ಆತನ ಬ್ಯಾಂಕ್ ಖಾತೆ ವಿವರಗಳು ಹೀಗಿವೆ.
ಬ್ಯಾಂಕ್
ಖಾತೆ...
ಚಂದನ್
ಕುಮಾರ್
ಖಾತೆ
ಸಂ.
600510110003936
(ಉಳಿತಾಯ
ಖಾತೆ),
ಬ್ಯಾಂಕ್
ಆಫ್
ಇಂಡಿಯಾ,
ಹೌಜ್
ಖಾಸ್
ಶಾಖೆ,
ಎ-21,
ಗ್ರೀನಾ
ಪಾರ್ಕ್
ಮೇನ್,
ನವದೆಹಲಿ,
ಪಿನ್
ಕೋಡ್
:
110
016,
ಐಎಫ್ಎಸ್ಸಿ
ಕೋಡ್
:
BKID0006005
(ವರದಿಯ ಜತೆ ಉಪಯೋಗಿಸಿರುವ ಛಾಯಾಚಿತ್ರಗಳು ಉದಯ್ ಫೌಂಡೇಶನ್ಗೆ ಸೇರಿವೆ. ಅವರ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಲಾಗಿದೆ.)
ಲೇಖಕರು ಭಾರತದ ಏರೋಸ್ಪೇಸ್ ಮತ್ತು ಡಿಫೆನ್ಸ್ನ ಹಿರಿಯ ಪತ್ರಕರ್ತರು. ಅವರು ಒನ್ ಇಂಡಿಯಾದಲ್ಲಿ ಸಲಹಾ ಸಂಪಾದಕ (ಡಿಫೆನ್ಸ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಟ್ವಿಟ್ಟರ್ ಖಾತೆ @writetake